ಚಿಕ್ಕಮಗಳೂರು: ಸಿ.ಟಿ.ರವಿ ಹಿ ಈಸ್ ಎ ಪಾರ್ಟಿ ಮ್ಯಾನ್, ಅವರಿಗೆ ಅಕ್ಕಿ ವಿತರಣೆ ಬಗ್ಗೆ ಹೇಗೆ ಗೊತ್ತಾಗುತ್ತೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಲೇವಡಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿಯನ್ನ ನಾವು ಫ್ರೀ ಕೇಳ್ತಿಲ್ಲ, ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂತಿರೋದು. ಎಫ್ಸಿಐ ಅವರೇ ಹೇಳಿದ್ದಾರೆ, ಸ್ಟಾಕ್ ಇದೆ ಕೊಡ್ತೀವಿ ಅಂತ ಎಂದು ಹೇಳಿದರು. ಅಕ್ಕಿ ವಾಪಸ್ ಹೋಗಿದೆ ಅಲ್ಲಾ, ಕೊಳೆಯಲು ಬಿಟ್ಟಿದ್ದೀರಾ, ಸಿ.ಟಿ.ರವಿ ಅವರೇ, ಅಕ್ಕಿ ಇದೆ ಕೊಡ್ತೀವಿ ಅಂತ ಅವರೇ ಲೆಟರ್ ಬರೆದು ಕೊಟ್ಟಿದ್ದಾರೆ. ಪಾಪ, ಸಿ.ಟಿ.ರವಿ ಅವರಿಗೆ ಅದೆಲ್ಲಾ ಗೊತ್ತಾಗುತ್ತಾ, ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಛೇಡಿಸಿದರು. ಅಕ್ಕಿಗಾಗಿ ಸಿಎಂ, ಸಚಿವ ಮುನಿಯಪ್ಪ ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಕಿ ಇರೋದೆ ಬಡವರಿಗೆ, ದುಡ್ಡು ಕೊಡಿ ಅಂದ್ರೆ ಹೇಗೆ. ಜನರಿಗೆ ಅಕ್ಕಿ ಬೇಕಾಗಿರೋದು, ದುಡ್ಡಲ್ಲ ಎಂದು ಸಿ.ಟಿ. ರವಿಗೆ ಟಾಂಗ್ ಕೊಟ್ಟರು.
ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳು ಪ್ರಾರಂಭವಾಗಿ ಬಹಳ ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ, ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ ಸಚಿವರು, ಪೈಪ್ಲೈನ್ ಆಳವಡಿಸುವ ಸಂದರ್ಭದಲ್ಲಿ ರಸ್ತೆಗಳಿಗೆ ಹಾನಿಯಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಂದ ಹಾನಿಯಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಂದ ಯಾ ವುದೇ ದೂರುಗಳಿಗೆ ಆಸ್ಪದವಾಗದಂತೆ ಕೆಲಸ ನಿರ್ವಹಿಸಿ ಎಂದರು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮ ಭೂ ಕಂದಾಯಕ್ಕಾಗಿ ಕಲಂ 94ಎ ನಮೂನೆ 50ರಡಿ 65,087 ಅರ್ಜಿ ಗಳು ಸ್ವೀಕೃತವಾಗಿವೆ. ಇವುಗಳಲ್ಲಿ 13,975 ಅರ್ಜಿಗಳು ಮಂಜೂರಾಗಿದ್ದು, 13,722 ಪ್ರಕರಣಗಳಿಗೆ ಸಾಗುವಳಿ ಚೀಟಿ ನೀಡಲಾಗಿದೆ. 248 ಜನರಿಗೆ ಸಾಗುವಳಿ ಚೀಟಿ ನೀಡಲು ಬಾಕಿ ಇದ್ದು, 13,642 ಖಾತೆ ದಾಖಲಿಸಿದ್ದು, 80 ಖಾತೆ ದಾಖಲಿಸಲು ಬಾಕಿ ಇವೆ ಅಲ್ಲದೇ, 94ಬಿ ನಮೂನೆ 53ರಡಿ 77,178 ಅರ್ಜಿಗಳು ಸ್ವೀಕೃತವಾಗಿವೆ. 14,852 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 14,146 ಜನರಿಗೆ ಸಾಗುವಳಿ ಚೀಟಿ ನೀಡಿದ್ದು, 706 ಸಾಗುವಳಿ ಚೀಟಿ ನೀಡಲು ಬಾಕಿ ಇದೆ. 12,615 ಖಾತೆ ದಾಖಲಿಸಿದ್ದು, 1,531 ಖಾತೆ ದಾಖಲಿಸಲು ಬಾಕಿ ಇದೆ ಹಾಗೂ 94ಎ (4) ನಮೂನೆ 57ರಡಿ 1,14,266 ಅರ್ಜಿಗಳು ಸ್ವೀಕೃತವಾಗಿದ್ದು, 197 ಪ್ರಕರಣಗಳು ಈಗಾಗಲೇ ಮಂಜೂರಾಗಿದ್ದು, 142 ಜನರಿಗೆ ಸಾಗುವಳಿ ಚೀಟಿ ನೀಡಿದೆ, 55 ಜನರಿಗೆ ಸಾಗುವಳಿ ಚೀಟಿ ನೀಡುವುದು ಬಾಕಿ ಇದೆ, 125 ಖಾತೆ ದಾಖಲಿಸುವ ಪ್ರಕರಣಗಳಾಗಿವೆ, 17 ಪ್ರಕರಣಗಳು ಖಾತೆ ದಾಖಲಾತಿಗೆ ಬಾಕಿ ಇವೆ ಎಂದು ವಿವರಿಸಿದರು.
CT Ravi is a party man