ಚಿಕ್ಕಮಗಳೂರು: ರಾಮನ ಹೆಸರು ಇಟ್ಕೊಂಡಿದ್ದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಆಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದ್ರೆ, ಗುಣ ಇದೆಯಾ? ಎಂದು ಮಾಜಿ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ದಲಿತರಿಗೆ ಅಂತ ಇಟ್ಟ 11 ಸಾವಿರ ಕೋಟಿ ರೂ. ವಾಪಸ್ ತೆಗೆದುಕೊಂಡು, ವೋಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಇಟ್ಟರು. ಒಬ್ಬರಿಗೆ ಅನ್ಯಾಯ ಮಾಡುವವರು ರಾಮನಿಗೆ ಸಮಾನಾಗಲು ಸಾಧ್ಯನಾ? ಅಯೋಧ್ಯೆ ಹೋರಾಟದ ಕರಸೇವೆಯಲ್ಲಿ ಪಾಲ್ಗೊಂಡರು ಅಂತ 31 ವರ್ಷದ ಬಳಿಕ ಆ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ರಾಮನ ಹೆಸರು ಇಟ್ಕೊಂಡಿದಕ್ಕೆ ರಾಮನ ಗುಣ ಬಂದಿದೆ ಅಂತಾ ಭಾವಿಸೋಕೆ ಆಗುತ್ತಾ? ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದ್ರೆ, ಗುಣ ಇದೆಯಾ? ಎಂದು ಕುಟುಕಿದ್ದಾರೆ.
ರಾಮನ ಹೆಸರಿದ್ದವರಿಗೆಲ್ಲಾ ರಾಮನ ಗುಣವಿಲ್ಲ. ಆಂಜನೇಯ ಅಂತ ಹೆಸರಿಟ್ಟುಕೊಂಡವರೆಲ್ಲಾ ರಾಮನ ಭಕ್ತರಾಗಿಯೂ ಇಲ್ಲ. ಅಯೋಧ್ಯೆಯಲ್ಲಿನ ರಾಮ ನಮ್ಮವನಲ್ಲ ಅನ್ನೋದಾದ್ರೆ, ನಿಮ್ಮ ರಾಮ ಯಾರು? ರಾಮ ಕಾಲ್ಪನಿಕ ವ್ಯಕ್ತಿ ಅಂತ ನಿಮ್ಮ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಹಾಗಾದ್ರೆ, ನಿಮ್ಮ ರಾಮ ಕಾಲ್ಪನಿಕನಾ? ನಮ್ಮ ರಾಮ ಮರ್ಯಾದಾ ಪುರುಷೋತ್ತಮ. ನಮ್ಮ ರಾಮನ ಪಟ್ಟಾಧಿಕಾರವಾಗಿ 7,087 ವರ್ಷವಾಗಿದೆ. ನಮ್ಮ ರಾಮ ಎಲ್ಲರಿಗೂ ಸೇರಿದವನು. ರಾಮ ಮಂದಿರ ಪುನರ್ ಸ್ಥಾಪನೆಯನ್ನು ಎಲ್ಲರೂ ಸಂಭ್ರಮಿಸಬೇಕು. ನಿಮ್ಮ ತಂದೆ ಹೆಸರಿಡುವಾಗ ರಾಮನ ಭಂಟ ಆಂಜನೇಯನನ್ನ ನೆನಪಿಸಿಕೊಂಡು ಹೆಸರಿಟ್ಟಿದ್ದಾರೆ. ಆದ್ರೆ, ನೀವು ಯಾವ ರಾಮನನ್ನ ಕಲ್ಪನೆಯಲ್ಲಿ ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಇನ್ನೂ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯ ಆಹ್ವಾನ ಪತ್ರಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರ ನಿರ್ಮಾಣ ಆಗಬೇಕು ಅಂತ ಕಾಂಗ್ರೆಸ್ ಯಾವಾಗ ಬಯಸಿತ್ತು? ಸ್ವಾತಂತ್ರ್ಯದ ಸಂದರ್ಭದಲ್ಲಿ ಕಾಂಗ್ರೆಸ್ ಬಯಸಿದ್ದರೆ ರಾಮಮಂದಿರ ನಿರ್ಮಾಣವಾಗುತ್ತಿತ್ತು. ಕಾಂಗ್ರೆಸ್ ಬಯಸಿದ್ದರೆ ನಾವು ಕರಸೇವೆ ಮಾಡುವ ಅಗತ್ಯವೇ ಇರಲಿಲ್ಲ. ಕರಸೇವಕರಿಗೇ ಇನ್ನು ಆಮಂತ್ರಣ ಪತ್ರಿಕೆ ಬಂದಿಲ್ಲ.
ಯಾರಿಗೆ ಆಮಂತ್ರಣ ಕೊಡಬೇಕೆನ್ನುವ ಅಧಿಕಾರ ಪ್ರಧಾನ ಮಂತ್ರಿಗೂ ಕೂಡ ಸೇರಿದ್ದಲ್ಲ. ಆಮಂತ್ರಣ ಪತ್ರಿಕೆ ನೀಡುವ ಅಧಿಕಾರ ರಾಮ ಜನ್ಮಭೂಮಿ ಟ್ರಸ್ಟ್ಗೆ ಸಂಬಂಧಿಸಿದ್ದು. ಸಮಯಾವಕಾಶ ಇದೆ ಯಾರಿಗೆ ಆಮಂತ್ರಣ ಕೊಡ್ತಾರೋ ಗೊತ್ತಿಲ್ಲ. ಆಮಂತ್ರಣ ಬರಬಹುದು, ಬಾರದೆಯೂ ಇರಬಹುದು. ಆದ್ರೆ, ಎಲ್ಲರ ಮನೆಗಳಿಗೂ ಕೂಡ ರಾಮಮಂದಿರದ ಮಂತ್ರಾಕ್ಷತೆ ತಲುಪಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಆಂಜನೇಯ ಅವರ ಮನೆಗಳಿಗೂ ಕೂಡ ಅಯೋಧ್ಯೆಯ ಮಂತ್ರಾಕ್ಷತೆ ತಲುಪಲಿದೆ ಎಂದು ಹೇಳಿದರು.
Siddaramaiah has Rama in his name. But is there any quality?