ಚಿಕ್ಕಮಗಳೂರು; ಕ್ಯಾನ್ಸರ್ ರೋಗದ ಬಗ್ಗೆ ಆರೋಗ್ಯ ಪರೀಕ್ಷಾ ಶಿಬಿರಗಳನ್ನು ಪರಿಣಾಮಕಾರಿಯಾಗಿ ಮಾಡುವ ಮೂಲಕ ಜನ ಜಾಗೃತಿ ಮೂಡಿಸುವಂತಾದಾಗ ಮಾತ್ರ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಮೈಸೂರಿನ ವಿಭಾಗೀಯ ನೋಡಲ್ ಅಧಿಕಾರಿ ಡಾ|| ಸತ್ಯಪ್ರಕಾಶ್ ತಿಳಿಸಿದರು.
ಅವರು ನಗರಸಭೆ ಸಭಾಂಗಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಚತಾ ಪೌರ ಕಾರ್ಮಿಕ ಸಿಬಂದಿಗಳಿಗೆ, ನಗರಸಭಾ ಸದಸ್ಯರಿಗೆ ಮತ್ತು ನಾಗರಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಬಾಯಿ ಕ್ಯಾನ್ಸರ್ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆಗಿಂತಲೂ ಇತ್ತೀಚೆಗೆ ಯುವಕರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಯುವಕರು ತಮ್ಮ ದುಶ್ಚಟಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಾಗ ಕ್ಯಾನ್ಸರ್ ರೋಗ ತಡೆಗಟ್ಟಬಹುದಾಗಿದೆ ಎಂದು ಕರೆ ನೀಡಿದರು.
ಕ್ಯಾನ್ಸರ್ ರೋಗಿಗಳನ್ನು ತಪಾಸಣೆಗೊಳಪಡಿಸಿ, ಕಾಯಿಲೆ ಪತ್ತೆಯಾದ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕೆಂಬುದು ಈ ಶಿಬಿರದ ಪ್ರಮುಖ ಉದ್ದೇಶ ಎಂದು ಹೇಳಿದರು.
ಮುಖ್ಯ ದಂತ ಆರೋಗ್ಯಾಧಿಕಾರಿ ಡಾ|| ಶರ್ಮಿಳಾ ಪ್ರಾಸ್ತಾವಿಕವಾಗಿ ಮಾತನಾಡಿದ, ಸಮತೋಲನ ಆಹಾರ ಸೇವನೆ, ವ್ಯಾಯಾಮ ಮಾಡುವುದು, ತೂಕ ನಿಯಂತ್ರಣ ಮಾಡುವುದರೊಂದಿಗೆ, ಧೂಮಪಾನ-ಮದ್ಯಪಾನ ಮುಂತಾದವುಗಳಿಂದ ದೂರ ಇರುವುದು ಕ್ಯಾನ್ಸರ್ ತಡೆಗೆ ಪ್ರಮುಖ ಅಂಶಗಳಾಗಿವೆ ಎಂದರು.
ಕ್ಯಾನ್ಸರ್ ರೋಗ ಪ್ರತಿಯೊಬ್ಬರನ್ನು ಬೆಚ್ಚಿ ಬೀಳಿಸುವ ಕಾಯಿಲೆಯಾಗಿದ್ದು, ಇದು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗದೇ ಅವನ ಕುಟುಂಬವನ್ನು ಆವರಿಸುವ ಮಹಾ ಮಾರಿಯಾಗಿದ್ದು, ಆರೋಗ್ಯ ಕುಂದಿಸುವ ಕಾಯಿಲೆಯಾಗಿದೆ ಎಂದು ವಿಷಾಧಿಸಿದರು.
ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಕ್ಯಾನ್ಸರ್ ನಿಯಂತ್ರಣ ಸಂಸ್ಥೆಗಳು ೧೯೯೩ ರಲ್ಲಿ ಜಿನೇವಾದಲ್ಲಿ ಕ್ಯಾನ್ಸರ್ ದಿನಾಚರಣೆ ಆಚರಿಸುವ ಮೂಲಕ ಜಾರಿಗೆ ತರಲಾಯಿತು. ಪ್ರತಿ ವರ್ಷ ಫೆ.೪ ರಂದು ವಿಶ್ವ ಕ್ಯಾನ್ಸರ್ ಜಾಗೃತಿ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವರ್ಷ ಆರೈಕೆ ಅಂತರಗೊಳ್ಳುವುದು ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ನಡೆಸಲಾಗುತ್ತಿದೆ. ವೈದ್ಯಕೀಯ ವ್ಯವಸ್ಥೆ ಇಂದು ವೈಜ್ಞಾನಿಕವಾಗಿ ಮುಂದುವರೆದಿರುವುದರಿಂದ ಈ ಭಯಾನಕ ಕ್ಯಾನ್ಸರ್ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕ್ಯಾನ್ಸರ್ ರೋಗದಲ್ಲಿ ಮೂರು ಹಂತವಿದ್ದು, ರೋಗಿ ಮೊದಲ ಎರಡು ಹಂತದ ಒಳಗೆ ಇದ್ದರೆ ಸಂಪೂರ್ಣ ಗುಣಪಡಿಸಬಹುದಾಗಿದೆ. ಇದರಿಂದ ಭಯಪಡುವ ಅಗತ್ಯ ಇಲ್ಲ. ಜೊತೆಗೆ ಮುಂದೆ ಒಳ್ಳೆಯ ಆರೋಗ್ಯವಂತ ಜೀವನ ನಡೆಸಲು ಸಹಕಾರಿಯಾಗಿದ್ದು, ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಕ್ಯಾನ್ಸರ್ ಪೀಡಿತ ರೋಗಿಗಳು ವೈದ್ಯರು ಸೂಚಿಸುವ ಔಷಧಿಗಳನ್ನು ಸೂಕ್ತ ಸಮಯದಲ್ಲಿ ಬಳಸುವ ಮೂಲಕ ಆರೋಗ್ಯವಂತ ಜೀವನ ನಡೆಸಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಬಿಪಿ, ಸಕ್ಕರೆ ಕಾಯಿಲೆ ಕುರಿತು ತಪಾಸಣೆ ನಡೆಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಪ್ರತಿ ಮೂರು ತಿಂಗಳಿಗೊಮ್ಮೆ ನಗರಸಭೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ನಗರಸಭೆ ಪೌರ ಕಾರ್ಮಿಕರಿಗೆ ನಗರಸಭೆ ವತಿಯಿಂದ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ನಗರಸಭೆ ಸದಸ್ಯರಾದ ಲಕ್ಷ್ಮಣ, ಗುರುಮಲ್ಲಪ್ಪ, ಜಾವಿದ್, ಪರಮೇಶ್ವರ್, ಹಿರಿಯ ದಂತ ಆರೋಗ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ|| ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ, ಡಾ|| ಗಾನವಿ, ಡಾ|| ರೀಟಾ ಜಾಸ್ಮಿನ್ ಮೆನಿಂಜಸ್, ಡಾ|| ಭಾಗ್ಯಲಕ್ಷ್ಮಿ, ಡಾ|| ಪ್ರಣೀತ, ಡಾ|| ದೀಪಕ್ ಕಾಮತ್ ಹಾಗೂ ಪ್ರಸಾದ್, ಬಾಲಾಜಿ ಉಪಸ್ಥಿತರಿದ್ದರು. ಮೊದಲಿಗೆ ಜಲಜಾಕ್ಷಿ ಸ್ವಾಗತಿಸಿ ಲಲಿತ ನಿರೂಪಿಸಿ, ವೆಂಕಟೇಶ್ ವಂದಿಸಿದರು.
Free health checkup camp