ಚಿಕ್ಕಮಗಳೂರು: ಅಂಕಣಕಾರ ಸಾಹಿತಿ ಟಿ.ದೇವಿದಾಸ್ ವಿರಚಿತ ಅಭಿಮುಖ ಎರಡು ಸಂಪುಟಗಳು, ಹಾಗೆ ಸುಮ್ಮನೆ ಮತ್ತು ಮೋದಿ : ಹಳಿ ಹಿಡಿದ ಭಾರತ ಎಂಬ ನಾಲ್ಕು ಪುಸ್ತಕಗಳು ಇದೇ ಫೆ.೨೫ ರಂದು ಭಾನುವಾರ ಬೆಳಗ್ಗೆ ೧೦.೩೦ ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಉದ್ಬವ ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಉದ್ಬವ ಪ್ರಕಾಶನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಉದ್ಬವ ಪ್ರಕಾಶನದ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಹಿರಿಯ ಪತ್ರಕರ್ತ, ವಿಶ್ವವಾಣಿ ದೈನಿಕದ ಪ್ರಧಾನ ಸಂಪಾದಕ ವಿಶ್ವೇಶ್ವರಭಟ್ ಅವರು ಇನ್ನೂರಾ ಇಪ್ಪತ್ತೆರಡು ಅಂಕಣ ಬರಹಗಳುಳ್ಳ ಅಭಿಮುಖ ಎರಡು ಸಂಪುಟಗಳನ್ನು ಪರಿಚಯಿಸುವರು. ಕನ್ನಡದ ಜನಪ್ರಿಯ ಯೂಟ್ಯೂಬ್ ಚಾನಲ್ ಆಗಿರುವ ಮೀಡಿಯಾ ಮಾಸ್ಟರ್ಸ್ ಮುಖ್ಯಸ್ಥ ಎಂ.ಎಸ್ ರಾಘವೇಂದ್ರ ಅವರು ಮೋದಿ: ಹಳಿ ಹಿಡಿದ ಭಾರತ ಪುಸ್ತಕವನ್ನು ಪರಿಚಯಿಸಲಿದ್ದಾರೆ ಎಂದು ಹೇಳಿದರು.
ಹಾಗೆ ಸುಮ್ಮನೆ ಪುಸ್ತಕವನ್ನು ರಂಗಕರ್ಮಿ ಡಿ.ಎಂ ಮಂಜುನಾಥ ಸ್ವಾಮಿ ಪರಿಚಯಿಸುವರು. ಗಾಯಕಿ ಜ್ಯೋತಿ ವಿನೀತ್ ಕುಮಾರ್, ಖ್ಯಾತ ನಿರೂಪಕಿ ಮೌನ ಗಿರೀಶ್, ಸಾಹಿತಿ ಡಾ. ಬೆಳವಾಡಿ ಮಂಜುನಾಥ, ಲೇಖಕ ಟಿ.ದೇವಿದಾಸ್ ಭಾಗವಹಿಸಲಿದ್ದಾರೆ. ನಾಲ್ಕೂ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಬೃಹತ್ ಸಂಪುಟಗಳ ಕರ್ತೃ ಟಿ.ದೇವಿದಾಸ್ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಬವ ಪ್ರಕಾಶನದ ಹಿರೇಮಗಳೂರು ಪುಟ್ಟಸ್ವಾಮಿ ಮತ್ತು ಸ್ಪಂದನ ಗೋಡೆ ಪತ್ರಿಕೆಯ ಮಾಜಿ ಸಂಪಾದಕ ಶಿವಶಂಕರ್ ಇದ್ದರು
Feb. 25 Sahiti Devidas Virachita 4 books released