ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯವು ವಿಶೇಷ ಸ್ಥಾನವನ್ನು ಪಡೆದಿದೆ. ಇಂತಹ ವಚನ ಸಾಹಿತ್ಯಗಳನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಪಾತ್ರ ಮಹತ್ವವಾದದ್ದು ಎಂದು ರವೀಶ್ ಕ್ಯಾತನಬೀಡು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು ಆಯೋಜಿಸಿದ್ದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಫ.ಗು. ಹಳಕಟ್ಟಿಯವರು ಕೇವಲ ವಚನ ಸಾಹಿತ್ಯವಲ್ಲದೆ ರಾಜಕೀಯ, ಪತ್ರಿಕೋದ್ಯಮದಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಮೂಲ ಕಸುಬು ನೇಕಾರಿಕೆಯಾದರೂ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವುದರ ಮೂಲಕ ವಕೀಲ ವೃತ್ತಿಯನ್ನು ಅಲಂಕರಿಸಿದ್ದರು. ಸಾಹಿತ್ಯದ ಮೇಲಿನ ಹೆಚ್ಚಿನ ಒಲವು ಅವರನ್ನು ವಚನಕಾರರನ್ನಾಗಿ ಮಾಡಿತು.
ಸುಮಾರು ೨೫೦ ಕ್ಕೂ ಹೆಚ್ಚಿನ ಪುಸ್ತುಕಗಳನ್ನು ಬರೆಯುವುದರ ಜೊತೆಗೆ ವಚನ ಸಾಹಿತ್ಯಕ್ಕೆ ಮತ್ತಷ್ಟು ಶಕ್ತಿ ತುಂಬಿದವರು ತಮ್ಮ ಸಾಹಿತ್ಯ ಮೂಲಕ ಸಮಾಜದ ಒರೆ ಕೊರೆಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆ. ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ ಬ್ಯಾಂಕಿಂಗ್, ಕೃಷಿ, ನೇಕಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿ ಕಾರ್ಯಗಳಿಗೆ ದುಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ಸತೀಶ್ ಶಾಸ್ತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಚನ ಸಾಹಿತ್ಯವು ವಿಶೇಷವಾದವು ವಚನಗಳಲ್ಲಿ ಧರ್ಮ, ನೀತಿ, ತತ್ವ, ಆಧ್ಯಾತ್ಮ, ಸಮಾಜ, ವಿಜ್ಞಾನ ರಾಜಕೀಯ, ಮುಂತಾದ ವಿಷಯಗಳು ಅಡಕವಾಗಿದ್ದು, ಪ್ರತಿ ವಚನಗಳು ಅರ್ಥಪೂರ್ಣವಾಗಿರುತ್ತದೆ.
ಮಾನವನ ಜ್ಞಾನವನ್ನು ವೃದ್ಧಿಸುವುದಲ್ಲದೆ. ಉತ್ತಮ ಮನುಷ್ಯನನ್ನಾಗಿ ರೂಪಿಸುವಲ್ಲಿ ವಚನಗಳ ಮಹತ್ವ ಬಹಳಷ್ಠಿದೆ. ಇಂತಹ ವಚನಗಳನ್ನು ಸಮಾಜಕ್ಕೆ ನೀಡಿದವರಲ್ಲಿ ಫ.ಗು. ಹಳಕಟ್ಟಿಯವರು ಪ್ರಮುಖರು. ಇವರ ಜೀವನ, ಸಾಧನೆಗಳನ್ನು ವಿಚಾರ ಧಾರೆಗಳನ್ನು ತಮ್ಮಲ್ಲಿ ಆಳವಡಿಸಿಕೊಳ್ಳವುದರ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರು ಭಾಗಿಯಾಗೋಣ ಎಂದು ತಿಳಿಸಿದರು.
ಹಿರಿಯ ಕನ್ನಡ ಉಪನ್ಯಾಸಕರು ಹೆಚ್.ಎಸ್. ಸತ್ಯನಾರಾಯಣ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿs ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ರಮೇಶ್ ಸಿ., ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Dr. Ph. Gu Halakatti’s Birthday Vachana Sahitya Samrakshana Day Celebration