ಚಿಕ್ಕಮಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ದೇಶದ ಸರ್ವಾಗೀಣ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು.
ಸೋಮವಾರ ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಜಿಲ್ಲಾ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸಮಾಜ ಹಾಗೂ ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ವರ್ಗ ಹಳಿ ತಪ್ಪಿದಾಗ ಸರಿದಾರಿಗೆ ತರುವ ಪ್ರಯತ್ನವನ್ನು ಪತ್ರಿಕಾರಂಗ ಮಾಡುತ್ತಿದೆ. ಜತೆಗೆ ನೊಂದ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪತ್ರಿಕಾರಂಗ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಆಡಳಿತ ವರ್ಗದ ಗಮನಕ್ಕೆ ಬಾರದ ಅನೇಕ ವಿಚಾರವನ್ನು ಹಾಗೂ ಜಡಗಟ್ಟಿದ ಆಡಳಿತಕ್ಕೆ ಬಿಸಿಮುಟ್ಟಿಸಿ ಆಡಳಿತ ವರ್ಗ ಚುರುಕುಗೊಳ್ಳುವಂತೆ ಮಾಡಲಾಗುತ್ತಿದೆ. ಈ ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದ ಅವರು, ಪತ್ರಕರ್ತರ ಟೀಕೆ ಟಿಪ್ಪಣಿಗಳನ್ನು ಸಕರಾತ್ಮಕವಾಗಿ ಪರಿಗಣಿಸಿ ಅದನ್ನು ಸರಿಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ತಾವು ಮಾಡಿರುವು ದಾಗಿ ತಿಳಿಸಿದರು.
ಪತ್ರಕರ್ತರಿಗೆ ತಮ್ಮದೆಯಾದ ಸುದ್ದಿಮೂಲವಿದ್ದು, ಕೆಲವೊಮ್ಮೆ ದಾವಂತಕ್ಕೆ ಬೀಳುವ ಪತ್ರಕರ್ತರು ಮಾಹಿತಿ ಬಗ್ಗೆ ಪರಾಮರ್ಶೆಗೆ ಒಳಪಡಿಸದೆ. ನೇರವಾಗಿ ಪ್ರಚಾರ ಮಾಡುವುದರಿಂದ ಸಾಮಾಜಿಕ ಜೀವನದಲ್ಲಿ ತೊಡಿಸಿಕೊಂಡವರು ಮುಜುಗರಕ್ಕೆ ಒಳಗಾಗ ಬೇಕಾಗುತ್ತದೆ ಎಂದು ಕೆಲ ನಿದರ್ಶನಗಳನ್ನು ತೆರೆದಿಟ್ಟು, ಪತ್ರಕರ್ತರು ಸುದ್ದಿ ಪ್ರಕಟಣೆಗೂ ಸುದ್ದಿಯ ಸತ್ಯಾಸತ್ಯತೆಯನ್ನು ಪರ ಮರ್ಶೆಗೆ ಒಳಪಡಿಸಬೇಕು ಎಂದರು.
ಚಿಕ್ಕಮಗಳೂರು ಜಿಲ್ಲಾ ಪ್ರೆಸ್ಕ್ಲಬ್ ಸ್ವಂತ ನಿವೇಶನವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ನಿವೇಶನ ಒದಗಿಸುವ ಭರವಸೆಯನ್ನು ನೀಡಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತಿದ್ದು ಸ್ವಾತಂತ್ರ್ಯ ಹೋರಾಟದಲ್ಲೂ ತನ್ನದೆ ಪಾತ್ರ ನಿರ್ವಹಿಸಿದೆ. ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ವನ್ನು ಮಾಡುತ್ತಿದೆ. ಪತ್ರಿಕಾರಂಗ ಮೌಲ್ಯಾಧಾರಿತವಾಗಿ ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್.ಮಾತನಾಡಿ, ಜಿಲ್ಲೆಯ ಜ್ವಾಲಂತ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವ ಕೆಲಸವನ್ನು ಜಿಲ್ಲೆಯ ಪತ್ರಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ. ಜತೆಗೆ ಚುನಾವಣೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಹೆಜ್ಜೆ ಹಾಕುತ್ತಿದ್ದು, ಜಿಲ್ಲಾಡಳಿಕ್ಕೆ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಪ್ರಶಸ್ತಿ ಪುರಸ್ಕೃತರಾದ ಪ್ರಜಾವಾಣಿ ಜಿಲ್ಲಾ ವರದಿಗಾರ ವಿಜಯಕುಮಾರ್, ಯೋಗೀಶ ಕಾಮೇನಹಳ್ಳಿ ಹಾಗೂ ಜಿಲ್ಲೆಯಿಂದ ವರ್ಗಾವಣೆಗೊಂಡ ವಿರೇಶ್ ಅವರನ್ನು ಸನ್ಮಾನಿಸಲಾಯಿತು.
ಚಿಕ್ಕಮಗಳೂರು ಜಿಲ್ಲಾ ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ, ಜಿ.ಪಂ.ಸಿಇಓ ಎಚ್.ಎಸ್. ಕೀರ್ತನಾ, ಮೇಸ್ಕಾಂ ಎಂ.ಡಿ.ಪದ್ಮಾವತಿ ಸೇರಿದಂತೆ ಅನೇಕರು ಇದ್ದರು.
ಪತ್ರಕರ್ತ ಉಮೇಶ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಎನ್.ಕೆ.ಗೋಪಿ ನಿರೂ ಪಿಸಿದರು. ತಾರಾನಾಥ್ ಸ್ವಾಗತಿಸಿದರು. ಚಂದ್ರೇಗೌಡ ವಂದಿಸಿದರು.
Press Day organized by District Press Club at Scouts and Guides Bhawan