ಚಿಕ್ಕಮಗಳೂರು: ಇಲ್ಲಿನ ರಾಮೇಶ್ವರ ನಗರದ ಹಳ್ಳದ ರಾಮೇಶ್ವರ ದೇವಾಲಯದಲ್ಲಿ ಕಳೆದ ಹತ್ತು ದಿನಗಳ ಕಾಲ ನಡೆದ ನವರಾತ್ರಿ ಉತ್ಸವಕ್ಕೆ ತೆರೆ ಬಿದ್ದಿದೆ. ಕಾರ್ಯಕ್ರಮದ ಅಂಗವಾಗಿ ಹಳ್ಳದ ರಾಮೇಶ್ವರ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ದಿವ್ಯ ಲೋಕೇಶ್ ,ಮಮತಾ ಬಾಲಕೃಷ್ಣ ಮತ್ತು ವೈಭವ್ ಜುವೆಲರ್ಸ್ ಗಜೇಂದ್ರ ರವರು ಜೊತೆಗೂಡಿ ನೀಡಿದ ಬೆಳ್ಳಿ ಕವಚವನ್ನು ಪಾರ್ವತಿ ದೇವಿಗೆ ಸಮರ್ಪಿಸಲಾಯಿತು. ಎಲೆಕ್ಟ್ರಿಷಿಯನ್ ಲೋಕೇಶ್ ಸುಂದರವಾಗಿ ಮಾಡಿಸಿಕೊಟ್ಟ ಸತ್ಯನಾರಾಯಣ ಪೂಜೆ ಮಂಟಪಕ್ಕೆ ಪೂಜೆ ಸಲ್ಲಿಸಿ ದಾನಿಗಳನ್ನು ಗೌರವಿಸಲಾಯಿತು.
ಪ್ರತಿದಿನ ಅಮ್ಮನವರಿಗೆ ಬಣ್ಣ ಬಣ್ಣದ ಸೀರೆ ತೊಡಿಸಿ ಅಲಂಕರಿಸಲಾಯಿತು. ಭಜನಾ ಮಂಡಳಿ ಸದಸ್ಯರಿಂದ ಲಲಿತ ಪಾರಾಯಣ, ಮಂಗಳವಾರ ಮತ್ತು ಶುಕ್ರವಾರದಂದು ಕುಂಕುಮಾರ್ಚನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗಿತು. ದುರ್ಗಾಷ್ಟಮಿಯಂದು ದುರ್ಗಾಷ್ಟಮಿ ಹೋಮ ಪೂರ್ಣಾಹುತಿ ನಡೆದು ಪೂಜಾ ವಿಧಿ ವಿಧಾನಗಳನ್ನು ಸೂರ್ಯನಾರಾಯಣ ಭಟ್, ಚಂದ್ರಶೇಖರ ಭಟ್, ಸುನಿಲ್ ಗೋಖಲೆ ನಡೆಸಿಕೊಟ್ಟರು.
ಹಳ್ಳದ ರಾಮೇಶ್ವರ ದೇವಾಲಯ ಸೇವಾ ಸಂಘ ಮತ್ತು ರಾಮೇಶ್ವರನಗರ ಹಿತರಕ್ಷಣಾ ಸಮಿತಿ ಸಹಕಾರ ನೀಡಿದವು. ಸತ್ಯನಾರಾಯಣ ಪೂಜೆ: ಪ್ರತಿ ತಿಂಗಳಿನಂತೆ ಈ ತಿಂಗಳ ಸತ್ಯನಾರಾಯಣ ಪೂಜೆ ಅ.17 ರ ಗುರುವಾರ ಬೆಳಿಗ್ಗೆ 10:30ಕ್ಕೆ ಹಾಗೂ ಅ. 20 ರ ಭಾನುವಾರ ರಾತ್ರಿ 7:30ಕ್ಕೆ ಸಂಕಷ್ಟ ಚತುರ್ಥಿ ಜರುಗಲಿದೆ
Rameshwar city opens for Navratri celebrations