ಚಿಕ್ಕಮಗಳೂರು: ಕನ್ನಡ ನೆಲ-ಜಲ, ನಾಡು-ನುಡಿ, ಭಾಷೆ ಉಳಿಸಿ ಬೆಳೆಸುವುದು ಹೋರಾಟಕ್ಕೆ ಸಜ್ಜಾಗಲು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ವೇದಿಕೆಯ ನೂತನ ಅಧ್ಯಕ್ಷ ಅಗ್ನಿ ಸುಮಂತ್ ತಿಳಿಸಿದರು.
ಅವರು ಇಂದು ರತ್ನಗಿರಿ ರಸ್ತೆಯ ಜಾನಕಿ ಸಭಾ ಭವನದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ವೇದಿಕೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ಕನ್ನಡ ಭಾಷೆ ಇಂಗ್ಲಿಷ್ ವ್ಯಾಮೋಹದಿಂದಾಗಿ ಬಳಕೆಯಾಗುತ್ತಿಲ್ಲ, ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಒತ್ತಾಯಿಸಲು ವೇದಿಕೆ ನಿರಂತರವಾಗಿ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ವೇದಿಕೆಯ ನೂತನ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು, ಜೊತೆಗೆ ಪದಾಧಿಕಾರಿಗಳನ್ನು ನೇಮಿಸಿ ಕನ್ನಡ ಭಾಷೆಗೆ ಅನ್ಯಾಯವಾಗದಂತೆ ಸೂಕ್ತ ಹೋರಾಟ ನಡೆಸಲು ಕರೆ ನೀಡಲಾಗುವುದೆಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಸಚ್ಚಿದಾನಂದ ನಾಡಿಗ್ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸಲು ಸಂಘದ ಎಲ್ಲಾ ಪದಾಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಲಯನ್ ಜಯರಾಜ್ ನಾಯ್ಡುರವರ ಸಾರಥ್ಯದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರಿನಲ್ಲಿ ನಾಲ್ಕು ವರ್ಷಗಳ ನಂತರ ಪುನರಾರಂಭಗೊಂಡಿದ್ದು, ಕರ್ನಾಟಕದಲ್ಲಿ ಹುಟ್ಟುವುದೇ ಸುವರ್ಣಾವಕಾಶವಾಗಿದೆ, ಹುಟ್ಟೂರಿನ ಋಣ ತೀರಿಸಲು ನಾಡು-ನುಡಿ, ನೆಲ-ಜಲ, ಭಾಷೆಗೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ಜೀವನ್, ಖಜಾಂಚಿ ಅಕ್ಷಯ್ ನಾಯಕ್, ಕಾನೂನು ಸಲಹೆಗಾರರಾಗಿ ಲಾಯರ್ ಪುಟ್ಟೇಗೌಡ, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಸುನೀಲ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ಮಧು, ತಾಲ್ಲೂಕು ಅಧ್ಯಕ್ಷ ಗೌತಮ್, ವಿನಯ್, ರಾಜೇಗೌಡ, ಭರತ್, ತ್ಯಾಗು, ವಸಂತ್, ಕಾರ್ತಿಕ್, ಧನುಷ್, ಬಾಸ್ಕರ್, ಭಾರ್ಗವ್, ಜೋಶ್ವ, ವಿಷ್ಣು, ಸುಹಾಸ್, ಸಚಿನ್, ನಿಖಿಲ್, ದರ್ಶನ್, ವಿನೋದ್, ಶಿವು, ಸಮರ್ಥ್. ಉಪಸ್ಥಿತರಿದ್ದರು.
Namma karnataka raksana vedike