ಚಿಕ್ಕಮಗಳೂರು: ನಗರದಲ್ಲಿ ಶೇ. ೬೦ ರಷ್ಟು ಕನ್ನಡದಲ್ಲಿ ನಾಮಫಲಕವನ್ನು ಹಾಕದೆ ಉಲ್ಲಂಘಿಸಿರುವುದನ್ನು ಖಂಡಿಸಿ ತಕ್ಷಣ ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸಿ ಇಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಜಿಲ್ಲೆ ಹಾಗೂ ನಗರ ಸೇರಿದಂತೆ ಕನ್ನಡದಲ್ಲಿ ನಾಮಫಲಕವನ್ನು ಶೇ. ೬೦ ರಷ್ಟು ಮತ್ತು ಅನ್ಯ ಭಾಷೆಯಲ್ಲಿ ಶೇ.೪೦ ರಷ್ಟು ಇಲ್ಲದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೇ.೬೦ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಸರ್ಕಾರದ ಆದೇಶವಿದ್ದರೂ ಆದೇಶವನ್ನು ಗಾಳಿಗೆ ತೂರಿ ಆಂಗ್ಲಭಾಷೆ ಹಾಗೂ ಅನ್ಯ ಭಾಷೆಗೆ ಹೆಚ್ಚು ಒತ್ತು ನೀಡಿದ್ದಾರೆಂದು ಮನವಿಯಲ್ಲಿ ದೂರಿದ್ದಾರೆ.
ಇನ್ನು ೧೫ ದಿನಗಳೊಳಗಾಗಿ ಶೇ.೬೦ ರಷ್ಟು ಕನ್ನಡದ ನಾಮಫಲಕಗಳನ್ನು ಹಾಕುವಂತೆ ವಾಣಿಜ್ಯೋದ್ಯಮಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದರೆ ವ್ಯಾಪಾರಸ್ಥರ ಪರವಾನಗಿಯನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.
ಇದು ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರದಿದ್ದರೆ ನಮ್ಮ ಕರವೇ ವತಿಯಿಂದ ಆಂಗ್ಲ ಭಾಷೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್, ಗೌರವಾಧ್ಯಕ್ಷ ಮಧು, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಜೀವನ್, ನಗರ ಉಪಾಧ್ಯಕ್ಷ ತ್ಯಾಗರಾಜ್, ಆಟೋ ಘಟಕದ ಜಿಲ್ಲಾಧ್ಯಕ್ಷ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.
An appeal to the Municipal Commissioner from Namma karnataka rakṣaṇa vedike