ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯ ಬಗೆಗಿನ ಆಸಕ್ತಿ ಅಳಿಯುತ್ತಿದ್ದು, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುವ ಅಸಡ್ಡೆಯ ಧೋರಣೆ ಮೂಡುತ್ತಿದೆ ಎಂದು ಚಲನಚಿತ್ರ ನಟ, ನಿರ್ದೇಶಕ, ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಅಧ್ಯಕ್ಷ ಕೆ.ಸುಚೇಂದ್ರ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ಚಿಕ್ಕಮಗಳೂರಿನ ಆರಾಧನಾ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸ್ಪರ್ಶ ಆಸ್ಪತ್ರೆಯಲ್ಲಿ ವೈದ್ಯೆಯೂ ಆಗಿರುವ ಡಾ.ವರ್ಷಿಣಿ ಎಸ್. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮೀಕ್ಷೆಯೊಂದರ ಪ್ರಕಾರ ಶೇ.೭೮ ರಷ್ಟು ಮಂದಿ ತಮಗೆ ಸಂಸ್ಕೃತಿಯ ಅಗತ್ಯವಿಲ್ಲ, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂಸ್ಕೃತಿ ಹಾಗೂ ಕಲೆಯ ಬಗೆಗಿನ ಪೋಷಣೆ ಮುಂದುವರಿಯದೇ ಇದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಆ ಪೋಷಣೆಯೂ ಆಪೋಶನವಾದೀತು; ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಪ್ರಬುದ್ಧತೆ, ಪ್ರಾಮಾಣಿಕತೆ ಜೊತೆಗೆ ಪ್ರೌಢ ಚಿಂತನೆ ಇರದೆ ಸಂಸ್ಕೃತಿಯನ್ನಾಗಲಿ, ಪರಂಪರೆಯನ್ನಾಗಲಿ ಪೊರೆಯುವುದು ಸಾಧ್ಯವಿಲ್ಲ. ನಮ್ಮ ಹಿರಿಯರು ಕಲೆ ಹಾಗೂ ಸಂಸ್ಕೃತಿಯ ದೊಡ್ಡ ಪರಂಪರೆಯನ್ನೇ ನಮಗೆ ಬಳುವಳಿಯಾಗಿ ಉಳಿಸಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವುಗಳ ಮೇಲಿನ ಆಸಕ್ತಿ ಕ್ಷೀಣಿಸುತ್ತಿರುವುದು ದುರದೃಷ್ಟಕರ. ನಮ್ಮ ನೆಲದಲ್ಲೇ ಜನಿಸಿದ ಭರತನಾಟ್ಯ ಶಾಸ್ತ್ರದ ರಥವನ್ನು ಇಲ್ಲಿಯವರೆಗೂ ಎಳೆದು ತರುವ ಕೆಲಸ ಆಗಿದೆ. ಅದನ್ನು ಮುಂದುವರಿಸುವುದು ಕಲಾ ಪೋಷಕರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಪಣತೊಡಬೇಕಿದೆ. ನಮ್ಮ ಹಿರಿಯರು ಬೋಧಿಸಿದ ವಿಧಿ-ವಿಧಾನಗಳು, ಹೇಳಿದ ಕಿವಿಮಾತುಗಳು ಸಾದ್ಯಂತ ಪಾಲನೆಯಾಗುವುದು ಅಗತ್ಯ. ಇದರಿಂದ ಆತ್ಮೋದ್ಧಾರದ ಜೊತೆಗೆ ಪರೋದ್ಧಾರವೂ ಆದೀತು. ಇಲ್ಲದಿದ್ದರೆ ಅವುಗಳ ಹೆಜ್ಜೆ ಗುರುತೇ ಅಳಿಸೀತು ಎನ್ನುವ ಎಚ್ಚರಿಕೆ ನಮ್ಮೊಳಗಿರಬೇಕು ಎಂದು ಹೇಳಿದರು.
ಸಾಧಕರಲ್ಲಿ ಅವರ ಸಾಧನೆ ಇದ್ದಾಗ ವೇದನೆ ಇರುವುದು ಸಹಜ. ಅವರಿಗೆ ರೋದನೆಯಾಗದ ರೀತಿಯಲ್ಲಿ ಕಲಾ ಪೋಷಕರಾದ ನಾವು ಕೈಹಿಡಿದು ನಡೆಸಬೇಕಾದ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಿದೆ. ಕಲಾವಿದರಾಗಲಿ, ಆ ಕಲಾವಿದರ ಗುರುಗಳಾಗಲಿ ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಮುಂದಿನ ತಲೆಮಾರಿಗೆ ಕಲೆ, ಸಂಸ್ಕೃತಿಯನ್ನು ಒಯ್ಯುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಡಾ.ವರ್ಷಿಣಿ ಅವರ ಭರತನಾಟ್ಯ ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು.
ಸುಗಮ ಸಂಗೀತ ಗಂಗಾದ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಭಾವನೆಗಳನ್ನು ಅಂತರಂಗದ ಸೌಂದರ್ಯದ ಪರಿಕಲ್ಪನೆಗಳಿಗೆ ಭಾಷ್ಯವನ್ನು ಬರೆಯುವ ಕಲೆ ಭರತನಾಟ್ಯ. ಡಾ.ವರ್ಷಿಣಿಯ ಭರತನಾಟ್ಯ ಪ್ರದರ್ಶನದ ಹಿಂದೆ ಸಾಕಷ್ಟು ದಿನಗಳ ಪರಿಶ್ರಮವಿದೆ. ಆಕೆಗೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.
ಈ ಊರಿನಲ್ಲಿ ಸುಗಮ ಸಂಗೀತ ಗಂಗಾ ಆರಂಭವಾದ ಬಳಿಕ ಅನೇಕ ಗಾಯಕರು ತಯಾರಾಗಿದ್ದು, ಅವರದೇ ಆದ ಸಂಸ್ಥೆಗಳನ್ನು ಆರಂಭಿಸಿ ಸಾಧನೆ ಮಾಡುತ್ತಿದ್ದಾರೆ. ಹೀಗಿದ್ದರೂ ಇಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ವಿವಿಧ ವಾದ್ಯ ಪರಿಕರಗಳನ್ನು ಕಲಿಸುವವರ ಕೊರತೆ ಕಾಡುತ್ತಿದೆ. ಈ ಬಗ್ಗೆ ಸಂಘ-ಸಂಸ್ಥೆಗಳು ಚಿಂತನೆ ನಡೆಸಬೇಕು. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಹಾಗಾದಾಗ ನಮ್ಮ ಕಲಾವಿದರು ಪ್ರಬುದ್ಧರಾಗಿ ಬೆಳೆಯಲು ಸಾಧ್ಯ. ಎಲ್ಲಕ್ಕೂ ಮಿಗಿಲಾಗಿ ಕಲೆಯನ್ನು ಆಸ್ವಾದನೆ ಮಾಡುವ ಹೃದಯವಂತಿಕೆ ನಮ್ಮಲ್ಲಿರಬೇಕು. ಸಂಗೀತ, ಭರತನಾಟ್ಯ, ವಾದ್ಯ ನುಡಿಸುವಿಕೆ ಮತ್ತಿತರ ಯಾವುದೇ ಕಲೆ ಕರಗತವಾದಲ್ಲಿ ಸಂಸ್ಕಾರ ರೂಢಿಯಾಗುತ್ತದೆ ಎಂದರು.
ಹಾಸನ ನಾಟ್ಯ ಕಲಾ ನಿವಾಸದ ನಿರ್ದೇಶಕ ವಿದ್ವಾನ್ ಹೆಚ್.ಆರ್.ಉನ್ನತ್ ಮಾತನಾಡಿ, ರಂಗ ಪ್ರವೇಶ ಎಂದ ಕೂಡಲೇ ಮೊದಲಿಗೆ ಆಗುವುದು ಆತಂಕ. ರಂಗದ ಮೇಲೆ ಸತತ ಎರಡರಿಂದ ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಬೇಕಾಗುತ್ತದೆ. ಆದರೆ ರಂಗದ ಹಿಂದೆ ಸಾಕಷ್ಟು ವರ್ಷಗಳ ಸಾಧನೆ ಮಾಡುವುದು ಅಗತ್ಯ. ಹಂತ ಹಂತವಾಗಿ ಕಲಾವಿದರಲ್ಲಿ ಆಗುವ ಪ್ರಬುದ್ಧತೆ ಅದು. ಒಟ್ಟಿನಲ್ಲಿ ಡಾ.ವರ್ಷಿಣಿಯ ರಂಗ ಪ್ರವೇಶ ಯಶಸ್ವಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ವರ್ಷಿಣಿ ಅವರ ಗುರು, ಮೈಸೂರು ನೃತ್ಯಗುರು ಸಂಸ್ಥೆಯ ಮುಖ್ಯಸ್ಥೆ ವಿದುಷಿ ಡಾ.ಕೃಪಾ ಫಡ್ಕೆ, ನಗರದ ಶ್ರೀ ಕಂಠೇಶ್ವರ ಕಲಾ ಮಂದಿರದ ವಿದುಷಿ ಸುಮನಾ ರಾಮಚಂದ್ರ, ಕೂದುವಳ್ಳಿಯ ಸುಸ್ವರ ಸಂಗೀತಾಲಯದ ವಿದುಷಿ ಉಮಾ ನಾಗರಾಜ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಇದೇ ವೇಳೆ ಸ್ಪರ್ಶ ಆಸ್ಪತ್ರೆಯ ಡಾ.ಚಂದ್ರಶೇಖರ್ ಸರ್ಜಾ ಅವರನ್ನೂ ಗೌರವಿಸಲಾಯಿತು.
ಅಮೋಘ ಸುಮಾರು ಎರಡೂವರೆ ಗಂಟೆಗಳ ಕಾಲ ನೃತ್ಯ ಪ್ರದರ್ಶನ ನೀಡಿದ ಡಾ.ವರ್ಷಿಣಿಯ ಭರತನಾಟ್ಯ ವೈವಿಧ್ಯಮಯ ಪ್ರಕಾರಗಳೊಂದಿಗೆ ಗಮನ ಸೆಳೆಯಿತು. ಉತ್ತಮ ಹಿಮ್ಮೇಳ, ಸುಶ್ರಾವ್ಯ ಸಂಗೀತ, ಬೆಳಕು, ಸೂಕ್ತವಾದ ಪ್ರಸಾದನ ವ್ಯವಸ್ಥೆ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ನಟುವಾಂಗದಲ್ಲಿ ವಿದುಷಿ ಪೂಜಾ ಸುಗಮ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕರುಣಾಕರನ್, ಮೃದಂಗದಲ್ಲಿ ನಾಗೈ ಪಿ.ಶ್ರೀರಾಮ್, ಕೊಳಲುವಿನಲ್ಲಿ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಸಾಥ್ ನೀಡಿದರು.
ಸ್ವಾಗತಿಸಿದ ಆರಾಧನಾ ಕಲ್ಚರಲ್ ಟ್ರಸ್ಟ್ನ ಮುಖ್ಯಸ್ಥೆ ಹಾಗೂ ಡಾ.ವರ್ಷಿಣಿ ಅವರ ತಾಯಿ ಸುಮಾಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಅಕ್ಷತಾ ಪಟವರ್ಧನ್ ನೆರವೇರಿಸಿದರು.
Dr. Varshini S. Entering Bharatanatyam