ಚಿಕ್ಕಮಗಳೂರು: ತಾಲೂಕಿನಲ್ಲಿರುವ ಮಾಣಿಕ್ಯಧಾರ ದೇವಿರಮ್ಮ ಬೆಟ್ಟದಲ್ಲಿರುವ ಬಿಂಡಿಗ ದೇವಿರಮ್ಮ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಭಕ್ತರು ಮಾಣಿಕ್ಯಧಾರ ಮಾರ್ಗವಾಗಿ ದೇವಿರಮ್ಮ ಬೆಟ್ಟ ಏರುತ್ತಿದ್ದಾರೆ. ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಬಂದಿದ್ದ ಮಹಿಳೆ ಅಸ್ವಸ್ಥಗೊಂಡಿದ್ದಾರೆ.
ಮಂಗಳೂರು ಮೂಲದ ಜಯಮ್ಮ (55) ಅಸ್ವಸ್ಥಗೊಂಡ ಮಹಿಳೆ. ಪೊಲೀಸರು ಹಗ್ಗದ ಮೂಲಕ ಮಹಿಳೆಯನ್ನು ರಕ್ಷಣೆ ಮಾಡಿದರು. ಈವರೆಗೆ ಅಸ್ವಸ್ಥಗೊಂಡಿದ್ದ 10ಕ್ಕೂ ಅಧಿಕ ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿದೆ.
ಎತ್ತರದ ಬೆಟ್ಟದಲ್ಲಿ ನೆಲೆಸಿರುವ ದೇವಿರಮ್ಮನ ದರ್ಶನ ಪಡೆಯಲು ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮನ ತಾಯಿಯನ್ನ ನೋಡಲು ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತವೃಂದ ಆಗಮಿಸುತ್ತಿದೆ. ಪ್ರತಿ ವರ್ಷ 60 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ದರು. ಆದರೆ, ಈ ವರ್ಷ ಬುಧವಾರ ಸಂಜೆಯಿಂದ ಈವರೆಗೆ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಲಕ್ಷದ ಗಡಿ ದಾಟಿದೆ.
ಪ್ರತಿ ವರ್ಷ ದೀಪಾವಳಿ ನರಕ ಚತುರ್ದಶಿಯ ದಿನ ಬೆಟ್ಟದಲ್ಲಿರುವ ದೇವಿರಮ್ಮನ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಅಪಾರ ಭಕ್ತರು ಬರುತ್ತಾರೆ. ಇಲ್ಲಿ ಹರಕೆ ಕಟ್ಟಿದರೆ ಈಡೇರುವುದರಲ್ಲಿ ಅನುಮಾನವಿಲ್ಲ. ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ನರಕ ಚತುದರ್ಶಿ ಹಿಂದಿನ ದಿನ ಸಂಜೆ ನಾಲ್ಕು ಗಂಟೆಯಿಂದಲೇ ಬೆಟ್ಟ ಹತ್ತಲು ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ.
ಬೆಟ್ಟವನ್ನೇರುವಾಗಿ ಕೊಂಚ ಎಡವಿದರೂ ಪಾತಾಳ ಸೇರುವುದು ಗ್ಯಾರಂಟಿ. ಸುರಿಯುವ ಮಳೆಯಲ್ಲೇ ಭಕ್ತರು ಬೆಟ್ಟವನ್ನು ಏರಿ ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ ದೇವಿರಮ್ಮ ನನ್ನ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರ ಊಟ ಮಾಡುತ್ತಾರೆ.
ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಬಳಿಕ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡಿದ ಆರತಿ ಮಾಡಿ ದೀಪಾವಳಿ ಆಚರಿಸುತ್ತಾರೆ. ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧವಿದೆ. ಪ್ರತಿವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜೆ ವಸ್ತುಗಳು ಬರುತ್ತವೆ.
ಇನ್ನೂ ಬೆಟ್ಟ ಏರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿದ್ದು ಕಿರಿದಾದ ದುರ್ಗಮ ಮಾರ್ಗದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಭಕ್ತರಿಗೆ ಜಾಗೃತೆಯಿಂದ ಬೆಟ್ಟ ಏರುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
ಒಟ್ಟಾರೆ, ಈ ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನು ಸವಿಯಲು ಬರೋರು ಉಂಟು. ಪ್ರೇಮಿಗಳು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು, ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ.
ಆದರೆ, ಆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರುವ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತವಾಗದಂತೆ ಕಾಯುತ್ತಿದ್ದಾಳೆ. ಒಂದು ರಾತ್ರಿ-ಒಂದು ಹಗಲಲ್ಲಿ ಬರುವ ಸುಮಾರು ಲಕ್ಷದಷ್ಟು ಭಕ್ತರನ್ನ ನಿಭಾಯಿಸಿ-ಸಂಭಾಳಿಸುವಷ್ಟರಲ್ಲಿ ಪೊಲೀಸರು ಮಾತ್ರ ಹೈರಾಣಾಗುತ್ತಾರೆ.
A sea of people gather to have a glimpse of Devi Ramma who sits on a high hill