ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದತ್ತಮಾಲಾ ಅಭಿಯಾನದ ಸಂಭ್ರಮ ಏರ್ಪಟ್ಟಿದೆ. ಶ್ರೀರಾಮ ಸೇನೆ ವತಿಯಿಂದ ನಡೆಯುವ ೨೧ ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು.
ಶಂಕರಮಠದಲ್ಲಿ ದತ್ತಾತ್ರೇಯರ ಮೂರ್ತಿಗೆ ಹೂವಿನಹಾರ ಮತ್ತು ತುಳಸಿಹಾರವನ್ನು ಹಾಕುವ ಮೂಲಕ ಪೂಜೆ ಸಲ್ಲಿಸಲಾಗಿತ್ತು. ದತ್ತಮಾಲೆ ಹಾಕಲು ಸಿದ್ದಗೊಂಡಿದ್ದ ದತ್ತಭಕ್ತರು ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ಭಜನೆ ಮಾಡುತ್ತಿದ್ದದು ಕಂಡುಬಂತು.
ಶಂಕರಮಠದಲ್ಲಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಹಾಸನ ವಿಭಾಗದ ಅಧ್ಯಕ್ಷ ರಂಜಿತ್ಶೆಟ್ಟಿ, ಉಪಾಧ್ಯಕ್ಷ ಅಭಿಜಿತ್ಗೌಡ, ವಿಭಾಗ ಪ್ರಧಾನ ಕಾರ್ಯದರ್ಶಿ ಜ್ಞಾನೇಂದ್ರಜೈನ್, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ನವೀನರಂಜಿತ್ ಸೇರಿದಂತೆ ಹಲವು ಮಂದಿಗೆ ದತ್ತಮಾಲೆಧಾರಣೆ ಮಾಡಲಾಯಿತು.
ಕರ್ನಾಟಕದ ಅಯೋಧ್ಯೆ ಎನಿಸಿರುವ ವಿವಾದಿತ ದತ್ತಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನದ ಪ್ರಯುಕ್ತ, ಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನ ಆರಂಭಗೊಂಡಿತು. ಇಂದಿನಿಂದ ನವೆಂಬರ್ ೧೦ ರವರೆಗೆ ದತ್ತಮಾಲಾ ಅಭಿಯಾನ ನಡೆಯುವುದು. ಹಿಂದೂಗಳಿಗೆ ದತ್ತಪೀಠ ಒಪ್ಪಿಸಬೇಕು ಎಂಬ ಪ್ರಮುಖ ಆಗ್ರಹದೊಂದಿಗೆ ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ.
ನವೆಂಬರ್ ೧೦ ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನಕ್ಕೆ ಮಾಲಾಧಾರಿಗಳು ತೆರಳಲಿದ್ದಾರೆ. ಎರಡು ದಶಕದ ನಂತರ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯಿಂದ ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ಬೆಂಬಲ ದೊರೆತಿದೆ. ಇದರೊಂದಿಗೆ ಒಗ್ಗಟ್ಟಿನ ಮಂತ್ರವನ್ನು ಈ ಬಾರಿ ನಡೆಯಲಿರುವ ದತ್ತಮಾಲಾ ಅಭಿಯಾನ ಪಡೆದುಕೊಂಡಿದೆ. ಜಿಲ್ಲೆ ಸೇರಿ ರಾಜ್ಯಾದ್ಯಂತ ಇಂದು ದತ್ತ ಭಕ್ತರು ದತ್ತಮಾಲಾಧಾರಣೆ ಮಾಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸುತ್ತಮುತ್ತಲ ಪ್ರದೇಶದ ಹಸಿರಿನಂಗಳದಲ್ಲಿ ಕೇಸರಿ ರಂಗು ಮೂಡಲಿದೆ. ಮಾಲಾಧಾರಿಗಳು ೭ ದಿವಸ ವ್ರತವನ್ನು ಆಚರಿಸುವರು. ಕೇಸರಿಪಂಚೆ ಹಾಗೂ ಶಲ್ಯಧರಿಸಿ ಶ್ರದ್ಧಾಭಕ್ತಿಯಿಂದ ಪಾದರಕ್ಷೆ ಧರಿಸದೆ ಕಠಿಣ ವ್ರತಮಾಡುವರು.
ಸೂರ್ಯೋದಯಕ್ಕೆ ಮುಂಚಿತ ಮತ್ತು ನಂತರ ಸ್ನಾನ ಮಾಡುವರು. ಬಳಿಕ ದತ್ತಾತ್ರೇಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಜನೆ ಮಾಡುವರು. ಮಾಲೆ ವಿಸರ್ಜನೆಯ ಹಿಂದಿನ ದಿನ ನವೆಂಬರ್ ೧೦ ರಂದು ಕನಿಷ್ಟ ಮೂರು ಮನೆಯಲ್ಲಿ ಪಡಿ ಸಂಗ್ರಹಿಸುವರು.
ಸಂಜೆ ಇರುಮುಡಿಯನ್ನು ಕಟ್ಟಿ ವಾಹನಗಳಲ್ಲಿ ತೆರಳುವರು ಮಾರ್ಗಮಧ್ಯೆ ಸಿಗುವ ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ, ಅಲ್ಲಿಂದ ಕೆಲವರು ಕಾಲ್ನಡಿಗೆಯಲ್ಲಿ ಮತ್ತೆ ಕೆಲವರು ವಾಹನಗಳಲ್ಲಿ ಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ತೆರಳಿ ಪೀಠದ ಆವರಣದಲ್ಲಿ ಇರುಮುಡಿಯನ್ನು ಅರ್ಪಿಸಿ ಗುಹೆಯೊಳಗೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸುವ ಮೂಲಕ ೭ ದಿವಸಗಳ ದತ್ತಮಾಲಾ ಅಭಿಯಾನಕ್ಕೆ ತೆರೆ ಎಳೆಯಲಾಗುವುದು.
Dattamala campaign launched by Shri Ram Sena