ಚಿಕ್ಕಮಗಳೂರು: ದೀಪ ಪ್ರಗತಿಯ ಸಂಕೇತ. ಹಣತೆ ಯಾವುದೇ ಇರಲಿ ಬೆಳಕನ್ನೆ ನೀಡುತ್ತದೆ. ಕುಟುಂಬದ ಕತ್ತಲನ್ನು ಹೋಗಲಾಡಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು ಎಂದು ಇತಿಹಾಸ ಉಪನ್ಯಾಸಕಿ ಲಾವಣ್ಯಕಿರಣ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಬಸವನಹಳ್ಳಿ ಬಡಾವಣೆಯ ಶರಣೆ ಗಂಗಾಂಬಿಕ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ‘ಗೌರಿ ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೌರಿಹುಣ್ಣಿಮೆ ಕಿರುಕಾರ್ತಿಕ ದೀಪಾವಳಿ. ಎಣ್ಣೆ, ಬತ್ತಿ ಯಾವುದೇ ಇರಲಿ ದೀಪ ಬೆಳಗಿಸಿದರೆ ಮಾತ್ರ ಬೆಳಗುತ್ತದೆ. ಬೆಳಕು ಕಲ್ಯಾಣದ ಸಂಕೇತ. ಭೂಮಿಯ ಉಗಮ ಸಿದ್ಧಾಂತದಲ್ಲಿ ಮಹಾಸ್ಫೋಟ ಒಂದು. ಪುರಾಣ ಕಥೆಗಳಲ್ಲೂ ಸುರಾಸುರರ ಯುದ್ಧವಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಉಗಮಕ್ಕೆ ರಾಜರಾಜೇಶ್ವರಿ ಕಾರಣರಾಗಿರುತ್ತಾಳೆ. ಜಗದ್ ಕಂಠಕರಾದ ಶಂಭು-ನಿಶಂಭು-ಮಹಿಷಾಸುರ ಮತ್ತಿತರರ ಸಂಹಾರಕ್ಕೂ ದೇವತೆ ಬರಬೇಕಾಯಿತು.
ಜಗತ್ತಿನ ರಕ್ಷಣೆಗೆ ಸ್ತ್ರೀಶಕ್ತಿ ಅತ್ಯಗತ್ಯ. ಶಿವನಷ್ಟೇ ಪ್ರಾಮುಖ್ಯತೆ ಶಕ್ತಿಗೂ ಇದೆ. ವೇದಕಾಲದಲ್ಲೂ ಮಹಿಳೆಗೆ ಮಾನ್ಯತೆ ಇತ್ತು. ಗಾರ್ಗಿ, ಮೈತ್ರೇಯಿ, ಲೋಕಮುದ್ರಾ ಮತ್ತಿತರ ಮಹಿಳಾ ವಿದ್ವಾಂಸರು ಪುರುಷಪ್ರಧಾನ ಸಮಾಜದಲ್ಲೂ ಇದ್ದರು ಎಂದರು.
ಮಹಿಳೆರಿಗೆ ಸ್ವಾತಂತ್ರ್ಯ ಇದೆ ಆದರೆ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ. ಸಮಾಜದ ಕಟ್ಟುಪಾಡಿಗೆ ಹೊಂದಿಕೊಂಡು ಕುಟುಂಬ ಮತ್ತು ಸಮಾಜವನ್ನು ಮುನ್ನಡೆಸುವ ಶಕ್ತಿ ಮಹಿಳೆಗೆ ಇದೆ. ಯಾವುದೇ ಕ್ಷೇತ್ರದಲ್ಲಿ ಮಹಿಳೆ ಸಮರ್ಥವಾಗಿ ನಿರ್ವಸುತ್ತಾಳೆ ಎಂದ ಲಾವಣ್ಯ, ಕುಟುಂಬದ ಒಳಿತಿಗಾಗಿ ಶ್ರಮಿಸುವ ಮಹಿಳೆ ಸ್ವ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿತ್ಯ ಸಮಸ್ಯೆ, ಸವಾಲು ಎದುರಿಸುವ ಮಹಿಳೆಯರು ಯೋಗಾಭ್ಯಾಸ ಮಾಡುವುದು ಒಳಿತು ಎಂದರು.
ಸಂಘದ ಅಧ್ಯಕ್ಷತೆಯನ್ನು ಯಮುನಾಸಿಶೆಟ್ಟಿ ವಹಿಸಿ ಮಾತನಾಡಿ ಪ್ರತಿ ಹುಣ್ಣಿಮೆ ಕಾರ್ಯಕ್ರಮಗಳನ್ನು ಆಯಾ ಗುಂಪಿನ ಮುಖಂಡೆಯರು ಉತ್ತಮವಾಗಿ ನಿರ್ವಹಿಸಿದ್ದು ಮುಂದಿನದಿನಗಳಲ್ಲಿ ಸಂಘದ ಚುನಾವಣೆ ನಡೆಯಲಿದ್ದು, ಉತ್ತಮಅಭ್ಯರ್ಥಿಗಳ ಆಯ್ಕೆ, ಸಹಕಾರ ಅಗತ್ಯ ಎಂದ ಯಮುನಾ, ಸಂಘದ ಒಳಿತು, ಸೇವೆ ಇಲ್ಲಿ ಮುಖ್ಯವಾಗಿರುತ್ತದೆ. ಸಂಘವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ಪ್ರಮೀಳಾ, ನಿರ್ದೇಶಕರುಗಳಾದ ಹೇಮಲತಾ, ಗೀತಾ, ವಕೀಲೆ ಮಮತಾ ವೇದಿಕೆಯಲ್ಲಿದ್ದರು.
ತಂಡದ ಮುಖಂಡೆ ಪ್ರಮೀಳಾಕಲ್ಲೇಶ್ ಪ್ರಾಸ್ತಾವಿಸಿ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಸಾಮಾನ್ಯವಾದ್ದಲ್ಲ. ತನು, ಮನ, ಧನದ ಸಹಾಯದ ಅವಶ್ಯಕತೆ ಮುಖ್ಯವಾಗಿರುತ್ತದೆ. ಮೂರುವರ್ಷಗಳಲ್ಲಿ ಸದಸ್ಯರು ಸಹಕಾರ ಕೊಟ್ಟಿದ್ದೀರಿ, ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂಬ ಮನೋಭಾವ ಸಮಾಧಾನ ತಂದಿದೆ ಎಂದರು.
ಸದಸ್ಯರುಗಳಾದ ಸುಧಾಕಿಶನ್ ಕಾರ್ಯಕ್ರಮ ನಿರೂಪಿಸಿದರು. ಮಧುನಟರಾಜ್ ಸ್ವಾಗತಿಸಿ, ಜಯಾಪುಟ್ಟಸ್ವಾಮಿ ವಂದಿಸಿದರು. ಆಶಾಹೇಮಂತ್ ಮತ್ತು ಶಾಂತಾರಾಜಶೇಖರ್ ಪ್ರಾರ್ಥಿಸಿ, ರುಕ್ಮಿಣಿಹರೀಶ್ ಅತಿಥಿ ಪರಿಚಯಸಿದರು. ಜಯಾಮಾಲ ಮತ್ತು ಸೌಭಾಗ್ಯ ತಂಡ ನಾಡಗೀತೆ ಹಾಡಿದರು.
ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಪ್ರಮೀಳಾ ಬಹುಮಾನ ವಿತರಿಸಿದರು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಮೂಹಿಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.
‘Gauri Full Moon’ Program at Srijagadguru Renukacharya Community Bhavan