ಚಿಕ್ಕಮಗಳೂರು: ಇಲ್ಲಿನ ಜೈನ ಸಂಘದ ಆಸ್ತಿಯನ್ನು ನಗರದ ಖಾಸಗಿ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಇ-ಖಾತಾ ಮಾಡಿಸಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ಜೈನ್ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಎಂ.ಜಿ ರಸ್ತೆಯಲ್ಲಿ ಇರುವ ಒಂದು ಕಟ್ಟಡವನ್ನು ದಾನಿಗಳಾದ ಉಮ್ಮಾಜಿ ಎಂಬುವರು ಜೈನ್ ಸಂಘಕ್ಕೆ ಬಹಳ ಹಿಂದೆಯೇ ಹಸ್ತಾಂತರ ಮಾಡಿದ್ದಾರೆ. ಸಂಘದ ಅಭಿವೃದ್ಧಿಗೆ ಎಂದು ಈ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ವಸತಿ ಸಹಿತ ಬಾಡಿಗೆಗೆ ನೀಡಲಾಗಿತ್ತು ಎಂದರು.
ಅವರು ನಿಧನರಾದ ನಂತರ ಅವರ ಮಕ್ಕಳು ಇದೀಗ ಮೊಮ್ಮಕ್ಕಳು ಆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಒಂದು ವರ್ಷದ ತನಕ ನಿಯಮಿತವಾಗಿ ಅವರು ಸಂಘಕ್ಕೆ ಬಾಡಿಗೆ ಪಾವತಿಸಿಕೊಂಡು ಬಂದಿದ್ದರು. ಆದರೆ, ಕಳೆದ ವರ್ಷದಿಂದ ಬಾಡಿಗೆ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಲಾಗಿ ಈ ಸ್ವತ್ತು ನಮಗೆ ಸೇರಿದ್ದು ಬಾಡಿಗೆ ಪಾವತಿಸುವುದಿಲ್ಲ ಎಂದು ಹೇಳಿದರು ಎಂದು ಮಾಹಿತಿ ನೀಡಿದರು.
ಈ ಸಂಬಂಧ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆ ಸೃಷ್ಟಿಸಿ ಇ-ಖಾತಾ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ನಗರಸಭೆಯಿಂದ ಈ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿಹಾಕಿ ಮಾಹಿತಿ ಪಡೆದಿದ್ದು ಅವರೂ ಕೂಡ ಇದು ನಕಲಿ ದಾಖಲೆ ಎಂದು ಹಿಂಬರಹ ನೀಡಿದ್ದಾರೆ. ನಗರಸಭೆ ಹೆಸರಲ್ಲಿ ಅಕ್ರಮವಾಗಿ ನಕಲಿ ದಾಖಲೆಯಡಿ ಇ-ಖಾತೆ ಮಾಡಿಸಿಕೊಂಡು ಸಂಘದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಖಾಸಗಿ ವ್ಯಕ್ತಿಯ ವಿರುದ್ಧ ನಗರ ಪೊಲೀಸ್ ಠಾಣಗೆ ದೂರು ನೀಡಲಾಗಿದೆ ಎಂದರು.
ಖಾಸಗಿ ವ್ಯಕ್ತಿಯ ವಿಚಾರಣೆ ನಡೆಸಿ ಸಂಘದ ಆಸ್ತಿಯನ್ನು ಅತಿಕ್ರಮಿಸಿರುವ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೊಷ್ಠಿಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಗೌತಮ್ಚಂದ್, ಜೈನ್ ಸಂಘದ ಕೋಶಾಧ್ಯಕ್ಷ ಅರವಿಂದ್ಕುಮಾರ್, ಮುಖಂಡರಾದ ರಮೇಶ್ಜೈನ್, ವಿಮಲ್ ಜೈನ್, ಲಾಲ್ಚಂದ್ಜೈನ್, ವಿನೋದ್, ಸಂಜಯ್, ಮತ್ತಿತರರು ಇದ್ದರು.
Jain Sangh’s property seized by creating fake documents – demand for action