ಚಿಕ್ಕಮಗಳೂರು: ಯುವ ಜನತೆಯು ಸದಾ ಕ್ರಿಯಾಶೀಲರಾಗಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಯುವ ಮನಸ್ಸುಗಳನ್ನು ಸೃಜನಶೀಲರನ್ನಾಗಿಸಲು ಯುವ ಜನೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ನೆಹರು ಯುವ ಕೇಂದ್ರ, ಜಿಲ್ಲಾ ಎನ್.ಎಸ್.ಎಸ್ ಘಟಕ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಹಾಗೂ ವಿವಿಧ ಸಂಘಗಳ ವತಿಯಿಂದ ನೆನ್ನೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಯುವ ಜನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಭಾರತವು ಪ್ರಪಂಚದಲ್ಲೆ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ದೇಶ. ಯುವಕರೆ ದೇಶದ ಆಸ್ತಿ. ಶಕ್ತಿಯೆಲ್ಲ ನಿಮ್ಮೊಳಗೇ ಇದೆ ನೀವು ಏನೂ ಬೇಕಾದರೂ ಸಾದಿಸಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ ಎಂಬ ಸ್ವಾಮಿ ವಿವೇಕನಂದರ ವಾಣಿಯಂತೆ ಯುವ ಜನರ ಪ್ರತಿಭೆಗಳನ್ನು, ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತೇಜಿಸಲಾಗುತ್ತಿದೆ. ಯುವ ಜನತೆಯು ತಮ್ಮಲ್ಲಿರುವ ಕಲೆಯನ್ನು ಕಾರ್ಯಗತಗೊಳಿಸಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ವೈವಿದ್ಯಮಯ ಜನ ಸಮೂಹ, ಭಾಷೆ, ಆಚರಣೆ, ಸಂಸ್ಕೃತಿಗಳ ನಡುವೆ ರಾಷ್ಟ್ರದಲ್ಲಿ ಏಕತೆಯನ್ನು ಬಲಪಡಿಸಿ ಬಾಂಧವ್ಯವನ್ನು ಹೆಚ್ಚಿಸಲು ಯುವ ಜನೋತ್ಸವಗಳಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ನಾಡಿನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಕ್ರೀಡೆಗಳ ಶ್ರೀಮಂತಿಕೆಯನ್ನು ಯುವ ಮನಸ್ಸುಗಳಿಗೆ ತಿಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ.
ಪ್ರಸ್ತುತ ಸಮಾಜದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಸಾಹಿತ್ಯದ ಒಲವಿನಿಂದ ಜನಪದ ಸಂಸ್ಕೃತಿಗಳು ಮರೆಯಾಗುತ್ತಿವೆ. ಜನಪದ ಗೀತೆಗಳು ಇತಿಹಾಸವನ್ನು ತಿಳಿಸಲು ಸಹಕರಿಸಿದರೆ. ಜನಪದ ನೃತ್ಯಗಳು ನಮ್ಮ ಸಂಸ್ಕೃತಿಯ ಶ್ರೇಷ್ಟತೆ ಪರಿಚಯಿಸುತ್ತವೆ. ಯುವ ಸಮೂಹವು ನಾಡಿನ ಐತಿಹಾಸಿಕ ಜನಪದ ಕಲೆಗಳ ಕಲಿಕೆಯಲ್ಲಿ ತಲ್ಲೀನರಾಗಿ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು ಎಂದ ಅವರು ಹೊಸತನ್ನು ಕಲಿತು ಸದಾ ಚೈತನ್ಯದಿಂದಿರಿ ಎಂದರು.
ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ. ಯುವ ಜನೋತ್ಸವ ಕಾರ್ಯಕ್ರಮದಿಂದ ಜಿಲ್ಲೆಯ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿ ಪರಿಚಯಿಸಲು ಸಹಕಾರಿಯಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿ ತಂಡವು ವೈವಿದ್ಯಮಯ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಯುವ ಜನರಲ್ಲಿ ಜನಪದ ಕಲೆಗಳ ಕುರಿತು ಆಸಕ್ತಿ ಹೆಚ್ಚಿಸಲು ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಸಾಂಸ್ಕೃತಿಕ, ಜೀವನ ಕೌಶಲ್ಯ, ವಿಜ್ಞಾನ ಪ್ರದರ್ಶನ, ಕಥೆ, ಕವಿತೆ, ಛಾಯಾಗ್ರಹಣ ಹಾಗೂ ಯುವ ಕೃತಿಗಳಂತ ವಿವಿಧ ಸ್ಪರ್ಧೆಗಳಿಗೆ ಜಿಲ್ಲೆಯ ೫೦ಕ್ಕೂ ಹೆಚ್ಚಿನ ಯುವ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಇಲಾಖೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದ ಅವರು ನಾಡಿನ ಜನಪದ ಕಲೆಗಳ ಶ್ರೀಮಂತಿಕೆಯ ವೈಭವವನ್ನು ವಿಶ್ವಕ್ಕೆ ಪರಿಚಯಿಸಲು ಮುಂದಾಗಿ ಎಂದು ತಿಳಿಸಿದರು.
ರಾಜ್ಯ ಯುವ ಒಕ್ಕೂಟ ಮತ್ತು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ ದೀಪ ಹಚ್ಚುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚವರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವ ವಿದ್ಯಾನಿಲಯ ಶಂಕರಘಟ್ಟ ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಸಾರ್ವಜನಿಕರು ಹಾಗೂ ಕಲಾ ತಂಡಗಳು ಉಪಸ್ಥಿತರಿದ್ದರು.
District Youth Festival Closing Ceremony Program