ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಜ್ಞಾನದ ಶಕ್ತಿ ಹೆಚ್ಚಿಸಲು ಐತಿಹಾಸಿಕ ವೈಭವದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅಭಿಪ್ರಾಯಿಸಿದರು.
ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿಕ ವೈಭವ ೨೦೨೪-೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದ ಸಂಸ್ಕೃತಿ, ಇತಿಹಾಸ, ಪರಂಪರೆ ಕುರಿತು ಪೂರ್ವಜರು ನಮ್ಮ ನಾಡನ್ನು ಆಳಿದ ರಾಜರ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದಲೇ ಈ ಐತಿಹಾಸಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಕಲಿಕೆ ಅವಧಿಯಲ್ಲಿಯೇ ಸವಿಸ್ತಾರವಾಗಿ ಮನವರಿಕೆ ಮಾಡುವ ಅಗತ್ಯ ಇದೆ. ಕಳೆದ ಬಾರಿ ನಡೆಸಿದ ದಸರಾ ವೈಭವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ಅಚ್ಚಳಿಯದೇ ಉಳಿದಿದೆ ಎಂದರು. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಶ್ರೀಮಂತವಾಗಿರುವ ಭಾರತ ದೇಶ ಒಗ್ಗಟ್ಟಿನಿಂದ ಪ್ರಪಂಚದಲ್ಲೇ ಸೂಪರ್ ಪವರ್ ಆಗಬೇಕೆಂದು ಕನಸು ಕಾಣುತ್ತಿದ್ದು, ಇದನ್ನು ನನಸು ಮಾಡಲು ವಿದ್ಯಾರ್ಥಿಗಳಲ್ಲಿ ಇತಿಹಾಸದ ಪರಿಚಯ ಅಗತ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರದ ೧೩ ಶಾಲೆಗಳು ನೊಂದಣಿ ಮಾಡಿದ್ದು, ೭ ಶಾಲೆಗಳು ಭಾಗವಹಿಸುತ್ತಿವೆ. ಆದರೆ ಪ್ರತೀ ಶಾಲೆಯಲ್ಲಿ ಕೇವಲ ರ್ಯಾಂಕಿಂಗ್ ಬಗ್ಗೆ ಮಾತ್ರ ಆಸಕ್ತಿ ವಹಿಸುತ್ತಾರೆ. ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುತ್ತಿಲ್ಲ ಎಂದು ವಿಷಾಧಿಸಿದರು.
ಆಟೋಟ, ಕ್ರೀಡಾಸಕ್ತಿ, ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಾಗ ಮಾತ್ರ ಮುಂದಿನ ಜೀವನದಲ್ಲಿ ಯಶಸ್ವಿಯಾಗಲು ಸಹಕಾರಿಯಾಗಲಿದೆ ಎಂದ ಅವರು, ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾದರೆ ಕೇವಲ ಪುಸ್ತಕದಲ್ಲಿ ಇರುವುದನ್ನು ಕೇಳದೆ ಸುತ್ತಮುತ್ತಲ ಪರಿಸರದ ಬಗ್ಗೆಯೂ ನಡೆದಿರುವ ಘಟನೆಗಳ ಕುರಿತು ಪ್ರಶ್ನೆಗಳು ಇರುತ್ತವೆ ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಮಾತನಾಡಿ, ಭಾರತ, ಕರ್ನಾಟಕ, ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದಾಗ ಅನೇಕ ರೀತಿಯ ಇತಿಹಾಸದ ಪ್ರಕಾರಗಳು ಗೋಚರಿಸುತ್ತವೆ. ಮನುಷ್ಯ ೫೦ ವರ್ಷಗಳ ನಂತರ ತಮ್ಮ ಮೂಲ ಸಂಸ್ಕೃತಿ ಹುಡುಕುತ್ತಾರೆ ಎಂದು ಹೇಳಿದರು.
ಕೆಳದಿ, ಹೊಯ್ಸಳ, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಸೇರಿದಂತೆ ಹಲವಾರು ಇತಿಹಾಸ ಮರುಕಳಿಸುವ ಪಾತ್ರಗಳನ್ನು ವಿದ್ಯಾರ್ಥಿಗಳು ಧರಿಸಿದ್ದು, ಈ ಕಾರ್ಯಕ್ರಮ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರೊ. ಅನುರಾಧ ಮಾತನಾಡಿ, ನಮ್ಮ ಭಾವನೆ, ಚಿಂತನೆ, ಮನಸ್ಸು ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಮುಖವನ್ನು ನೋಡಬೇಕು. ಹಿರಿಯರು ನಡೆದಿರುವ ಬಗ್ಗೆ ಒಕ್ಕಲಿಗ ಸಮಾಜದ ಜೆವಿಎಸ್ ಶಾಲೆಯ ಶಿಕ್ಷಕಿಯರು ಚಿತ್ರ ನಟಿಯರಂತೆ, ವಿದ್ಯಾರ್ಥಿಗಳು ಪುನೀತ್ ರಾಜ್ಕುಮಾರ್ ರಂತೆ ಕಂಡರು ಐತಿಹಾಸಿಕ ವೈಭವಕ್ಕೆ ಸರಿಯಾಗಿ ತಯಾರಾಗಿದ್ದಾರೆ ಎಂದು ನನಗೆ ಅನಿಸಿತು ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಭಿನಯಿಸುವ ಪಾತ್ರ ವಸ್ತುನಿಷ್ಠೆಯಾಗಿರಬೇಕು ಅದಕ್ಕೆ ಹೊಂದಿಕೊಂಡು ವಿವರವಾದ ಮಾತು ಸ್ಪಷ್ಟವಾಗಿ ಹೇಳಬೇಕು. ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು. ವಿದ್ಯಾರ್ಥಿಗಳು ನಿರ್ವಹಿಸುವ ಪಾತ್ರ ಸ್ಥಳದ ಐತಿಹಾಸಿಕ ಸತ್ಯ ಪೂರಕವಾಗಿದೆಯೇ ಎಂಬುದನ್ನು ನ್ಯಾಯ ನಿರ್ಣಾಯಕರಾದ ನಾವು ಗಮನಿಸುತ್ತೇವೆ. ಈ ನಿಟ್ಟಿನಲ್ಲಿ ಸತ್ಯ ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅವರದೇ ಆದ ಇತಿಹಾಸ, ಪರಂಪರೆ ಇದೆ. ಆದರೆ ಒಕ್ಕಲಿಗರಿಗೆ ಬಹುದೊಡ್ಡ ಇತಿಹಾಸವೇ ಇದೆ. ಅದನ್ನು ವಿದ್ಯಾರ್ಥಿಗಳು ಪಾತ್ರಗಳ ಮೂಲಕ ಅನಾವರಣ ಮಾಡಬೇಕಾಗಿದೆ ಎಂದು ಹೇಳಿದರು. ಭಾರತದ ಇತಿಹಾಸ ಪ್ರೀತಿಸಿ ನಾಡಿನ ಗತ ವೈಭವ ಸಾರುವ ಒಕ್ಕಲಿಗರು ಒಕ್ಕಲುತನ ಮಾಡಿದರೆ ಆಹಾರ ಉತ್ಪಾದನೆಯಿಂದ ಜೀವನ ನಡೆಸುತ್ತಿದ್ದಾರೆ ಎಂಬುದು ಚರಿತ್ರೆಯಲ್ಲಿ ಉಳಿದಿದೆ ಎಂದು ತಿಳಿಸಿದರು.
ಶಾಲಾ ಸಹಕಾರ್ಯದರ್ಶಿ ಕೆ.ಕೆ ಮನುಕುಮಾರ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳಲ್ಲಿ ಅಭಿನಯಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಮಾಜಿ ಕಾರ್ಯದರ್ಶಿ ಉಮೇಶ್ಚಂದ್ರ, ಜೆವಿಎಸ್ ಕಾಲೇಜಿನ ಪ್ರಾಂಶುಪಾಲರಾದ ತೇಜಸ್ವಿನಿ, ಜಡ್ಜ್ಗಳಾಗಿ ಬಿ.ತಿಪ್ಪೇರುದ್ರಪ್ಪ, ದಯಾನಂದ್, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮೂರ್ತಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಿಜಿತ್ ಸ್ವಾಗತಿಸಿ, ಶಿಕ್ಷಕಿ ಪ್ರೀತಿ ನಿರೂಪಿಸಿ, ಪ್ರಮೀಳ ವಂದಿಸಿದರು.
Historical Glory 2024-25 Program