ಚಿಕ್ಕಮಗಳೂರು: ರೈತರ ಬೆಳೆ ಹಾಗೂ ಜೀವ ಹಾನಿ ಉಂಟುಮಾಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಎಐಟಿ ಕಾಲೇಜು ಬಳಿ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯಧರ್ಶಿ ಎಚ್.ಸಿ.ಕಲ್ಮರುಡಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಕಚೇರಿ ಬಳಿ ಬರುತ್ತಿದ್ದಂತೆ ಅಲ್ಲಿನ ಸಿಬ್ಬಂಧಿಗಳು ಕಾಂಪೌಂಡ್ನ ಗೇಟ್ ಹಾಕಿದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರಣ ಬೀಗ ತೆರೆಯಲಾಯಿತು.
ಈ ವೇಳೆ ಜಿಲ್ಲಾ ರೈತ ಮೋರ್ಚಾ ಉಸ್ತುವಾರಿ ಶೆಟ್ಟಿಗದ್ದೆ ರಾಮಸ್ವಾಮಿ ಮಾತನಾಡಿ, ಒಂದೂವರೆ ವರ್ಷದಿಂದ ಜಿಲ್ಲೆಯ ವಿವಿಧೆಡೆ ಕಾಡಾನೆಗಳು ದಾಳಿ ಮಾಡುತ್ತಿವೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಪಡಿಸಿವೆ ರೈತರು, ಮತ್ತು ಬೆಳೆಗಾರರು, ಕಾರ್ಮಿಕರ ಸಾವು ನೋವು ಸಂಭವಿಸಿದೆ. ಮೊನ್ನೆಯಷ್ಟೇ ಎನ್ಆರ್ಪುರದಲ್ಲಿ ಓರ್ವ ರೈತನನ್ನು ಆನೆ ತುಳಿದು ಸಾಯಿಸಿದೆ. ರೈತರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ದೂರಿದರು.
ರೈತ ಒಂದೆರಡು ಎಕರೆ ಭೂಮಿ ಒತ್ತುವರಿ ಮಾಡಿದರೆ ಅದನ್ನು ತೆರವುಗೊಳಿಸಲು ೫೦ ಜನ ಅರಣ್ಯ ಸಿಬ್ಬಂಧಿ ಬರುತ್ತಾರೆ. ಆದರೆ ಆನೆಗಳು ಬಂದರೆ ಓಡಿಸಲು ಮೂರ್ನಾಲ್ಕು ಮಂದಿ ಮಾತ್ರ ಬರುತ್ತಾರೆ. ಕಾರ್ಯಾಚರಣೆ ಬರುವ ಸಿಬ್ಬಂಧಿ ವಾಹನದಲ್ಲೇ ಕುಳಿತು ಮೋಜು, ಮಸ್ತಿ ಮಾಡುತ್ತಾರೆ. ಆನೆ ಓಡಿಸಲು ಹೋದ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂಧಿಗಳ ಕಾರ್ಯವೈಖರಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ಮೂರ್ನಾಲ್ಕು ತಿಂಗಳಿನಿಂದ ಇಲ್ಲೇ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ನ ಆನೆಗಳು ರೈತರ ಪಾಲಿಗೆ ಕಂಟಕವಾಗಿವೆ. ಡಿಎಫ್ಓ ಅಥವಾ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಲವರು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ. ಗ್ರಾಮಗಳಲ್ಲಿ ಜನರು ಓಡಾಡುವುದೇ ಕಷ್ಟಸಾಧ್ಯವಾಗಿದೆ. ಕೂಡಲೇ ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂಗ್ತಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲೇ ೨೫ ದಿನಗಳಿಂದ ಆನೆಗಳ ಹಿಂಡು ಬೀಡುಬಿಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆನೆಗಳು ಬೆಳೆಹಾನಿಪಡಿಸುತ್ತಿವೆ. ೧೫ ರಿಂದ ೨೦ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಭತ್ತದ ಪೈರಿನಲ್ಲಿ ಒಂದು ಹಿಡಿ ಭತ್ತವೂ ಸಿಗದ ಸ್ಥಿತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಸಹ ಕಾಳಜಿ ತೋರಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ತಿಂಗಳುಗಳಿಂದ ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಸಚಿವರು ತಮ್ಮ ತೋಟಕ್ಕೆ ಮಾತ್ರ ಆನೆಗಳು ಬರದಿರುವಂತೆ ಕ್ರಮ ಕೈಗೊಳ್ಳಬೇಕೆಂದು ಡಿಎಫ್ಓ ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಓರ್ವ ವ್ಯಕ್ತಿಪರವಾಗಿ ಕೆಲಸ ಮಾಡುವುದಾದರೆ ಸರ್ಕಾರದ ಸಂಬಳ ಸೌಲತ್ತು ಏಕೆ ಕೊಡಬೇಕು ಎಂದು ಪ್ರಶ್ನಿಸಿದರಲ್ಲದೆ ಆನೆಗಳನ್ನು ಕೂಡಲೇ ಹಿಮ್ಮೆಟ್ಟಿಸಿ ರೈತರ ಪರ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಡಿಎಫ್ಓ ರಮೇಶ್ ಬಾಬು ಮನವಿ ಸ್ವೀಕರಿಸಿ ಆನೆಗಳನ್ನು ಹಿಮ್ಮೆಟ್ಟಿಸಲು ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರುಗಳಾದ ಮುಗುಳುವಳ್ಳಿ ದಿನೇಶ್, ಪಿಳ್ಳೇನಹಳ್ಳಿ ರಮೇಶ್, ಕವೀಶ್, ಶಿವಾನಂದ್, ಬಿ.ರಾಜಪ್ಪ, ಪುಟ್ಟೇಗೌಡ, ಸೇರಿದಂತೆ ವಿವಿಧ ಮೋರ್ಚಾ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.
BJP lays siege to Deputy Conservator of Forests’ office