ಚಿಕ್ಕಮಗಳೂರು: ನಗರದ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಡಿ.೧೫ ರಂದು ಸಂಜೆ ೪.೩೦ಕ್ಕೆ ಡಾ.ಬೆಳವಾಡಿ ಹರೀಶ ಭಟ್ಟ ಸಂಗ್ರಹಿಸಿ ಅರ್ಥ ಸಹಿತವಾಗಿ ಅನುವಾದಿಸಿರುವ ೧೫೦ ಉಪನಿಷತ್ತುಗಳ ಎರಡು ಸಂಪುಟಗಳು ಲೋಕಾರ್ಪಣೆಯಾಗಲಿವೆ ಹಿರಿಯ ಪತ್ರಕರ್ತ ಗಿರಿಜಾಶಂಕರ್ ತಿಳಿಸಿದರು
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರಸ್ಟಿಗಳು ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಹರಿಹರಪುರ ಮಠಾಧೀಶರಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಉದ್ಘಾಟಿಸುವರು. ಕಾಫಿ ಬೆಳೆಗಾರ ಎಂ.ಆರ್. ಗುರುಮೂರ್ತಿ ಮತ್ತು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸಂಪುಟಗಳನ್ನು ಲೋಕಾರ್ಪಣೆಗೊಳಿಸುವರು ಎಂದು ಹೇಳಿದರು.
ಉದ್ಭವ ಪ್ರಕಾಶನದ ಆಡಳಿತ ಟ್ರಸ್ಟಿ ಡಿ.ಎಚ್.ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಹಾ ಸಂಪುಟಗಳನ್ನು ನಾಡಿನ ಖ್ಯಾತ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಪರಿಚಯಿಸುವರು. ಅತಿಥಿಗಳಾಗಿ ಕಾಫಿ ಬೆಳೆಗಾರ ಡಿ.ಎಂ.ಶಂಕರ್ ಮತ್ತು ಎಂ.ಕೆ.ಶ್ರೀನಿವಾಸ ಶೆಟ್ಟಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥ ಎಂ.ಎಸ್.ಜಯರಾಮ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಬೆಂಗಳೂರಿನ ಫಾರ್ವರ್ಡ್ ಫೌಂಡೇಶನ್ನ ಟ್ರಸ್ಟಿ ಜಿ.ವಿ.ಕೃಷ್ಣ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ವಾಣಿಜ್ಯೋದ್ಯಮಿ ವೆಂಕಟಸುಬ್ಬರಾವ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್, ಸಾಂಸ್ಕೃತಿಕ ಸಂಘದ ಆನಂದ್ಕುಮಾರ್ ಶೆಟ್ಟಿ ಹಾಗೂ ದಾಸ ಸಾಹಿತ್ಯ ಭಜನಾ ಮಂಡಳಿ ಸಂಚಾಲಕ ಉದಯಸಿಂಹ ಉಪಸ್ಥಿತರಿರುವರು ಎಂದರು.
ಈ ಸಂಪುಟಗಳಲ್ಲಿ ಇದುವರೆಗೆ ಪ್ರಚಲಿತದಲ್ಲಿರದಿದ್ದ ೧೦೦ಕ್ಕೂ ಹೆಚ್ಚು ಉಪನಿಷತ್ತುಗಳನ್ನು ಒಳಗೊಂಡಿದೆ. ಅವುಗಳನ್ನು ಡಾ.ಬೆಳವಾಡಿ ಹರೀಶ ಭಟ್ಟದೇಶ ಮತ್ತು ವಿದೇಶಗಳಿಗೆ ತೆರಳಿ ಸಂಗ್ರಹಿಸಿದ್ದು, ಅರ್ಥ ಸಹಿತ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದರು. ಇವುಗಳನ್ನು ವೇದಗಳ ಅನುಕ್ರಮದಲ್ಲಿ ಜೋಡಿಸಲಾಗಿದೆ. ಇವು ವಿಶೇಷ ಅಧ್ಯಯನಕ್ಕೆ ಆಕರಗಳಾಗಿವೆ. ಸಾಮಾನ್ಯವಾಗಿದ್ದ ಶೋಪ ನಿಷತ್ತುಗಳು ಜನಪ್ರಿಯವಾಗಿದ್ದು, ಆಚಾರ್ಯತ್ರಯರು ಅವುಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಅವುಗಳ ಬಗ್ಗೆಯೇ ಚಿಂತನೆ ಮತ್ತು ಮರುಸೃಷ್ಠಿಗಳು ಕೂಡ ಆಗಿವೆ. ಆದರೆ ಈ ಸಂಪುಟಗಳಲ್ಲಿ ಶೋಧಿಸಿರುವ ಉಪನಿಷತ್ತುಗಳ ಶಾಖೆ, ಅಧ್ಯಯನದ ವಿವರ, ರೂಪ ಮತ್ತು ಕರ್ಮಗಳನ್ನು ಸ್ಪಷ್ಟೀಕರಿಸಲಾಗಿದೆ. ವಿಶೇಷವೆಂದರೆ ಈ ಸಂಗ್ರಹ ಕಾರ್ಯದಲ್ಲಿ ಅತ್ಯಂತ ಕಿರಿದಾದ ಕಲಿಸಂತರಣೋಪನಿಷತ್ತು ಕೂಡ ಸೇರಿದೆ. ಇವುಗಳ ವಿರಾಟ್ ಸ್ವರೂಪದ ವರ್ಣನೆ, ಬ್ರಹ್ಮಾಂಡ ವಿಕಾಸಗೊಂಡ ರೀತಿ, ಜೀವ ಜಗತ್ತಿನ ಸಂಬಂಧವನ್ನು ವಿಶ್ಲೇಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿ.ಎಚ್.ನಟರಾಜ್ ಡಾ.ಬೆಳವಾಡಿ ಮಂಜುನಾಥ ಉಪಸ್ಥಿತರಿದ್ದರು.
A two volume dedication of 150 Upanishads