ಚಿಕ್ಕಮಗಳೂರು: ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಿದರು. ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಮೂರ್ನಾಲ್ಕು ಕಡೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇತರರ ವಿರುದ್ಧ ಘೋಷಣೆಗಳನ್ನು ಕೂಗಿ ಸಿ.ಟಿ.ರವಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಎಂಜಿ ರಸ್ತೆಯ ಹಲವು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ನೇತೃತ್ವದಲ್ಲಿ ಒಂದು ತಂಡ ಎಂಜಿ ರಸ್ಯೆಯಲ್ಲಿ ಮೆರವಣಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಹನುಮಂತಪ್ಪ ಸರ್ಕಲ್ ಬಳಿ ಅವರನ್ನು ಪೊಲೀಸರು ತಡೆದು ಎಲ್ಲರನ್ನೂ ಬಂಧಿಸಿ ಕಡೂರು ತಲ್ಲೂಕು ಯಗಟಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಇದರ ನಡುವೆ ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಬಂದ್ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಆಜಾದ್ ಪಾರ್ಕ್ ಬಳಿ ಕೆಲವು ಮಹಿಳಾ ಕಾರ್ಯಕರ್ತರನ್ನು ಪೊಲಿಸರು ತಡೆದ ಕಾರಣ ಪರಸ್ಪರ ಮಾತಿನ ಚಕಮಕಿ ಉಂಟಾಯಿತು.
ಇದಾದ ನಂತರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಮುಖಂಡರಾದ ಜಯರಾಂ, ಜೀವನ್ ಇತರೇ ನೂರಾರು ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಸೇರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರವನ್ನು ಹರಿದು, ಬೆಂಕಿ ಹಚ್ಚಿ, ಆಕ್ರೋಶ ವ್ತಕ್ತಪಡಿಸಿದರು. ಹಬ್ಬಾಳ್ಕರ್ ಅವರನ್ನು ಮೊಟ್ಟೆ ಕಳ್ಳಿ ಎಂದು ಘೋಷಣೆ ಕೂಗಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ನಗರದ ಕೋರ್ಟ್ ಸಮೀಪದ ಗಾಂಧಿ ಪ್ರತಿಮೆ ಎದುರು ಬಾಯಿಗೆ ಕಪ್ಪು ಪಟ್ಟಿ ಧರಿಸಿ, ಬಿ.ಆರ್.ಅಂಬೇಡ್ಕರ್ ಮತ್ತು ಸಿ.ಟಿ.ರವಿ ಅವರ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಆಜಾದ್ ಪಾರ್ಕ್ ಬಳಿ ಬ್ಲಾಕ್ ಕಾಂಗ್ರೆಸ್ ಮುಖಂಡ ಮಂಜೇಗೌಡ ನೇತೃತ್ವದಲ್ಲಿ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬಿಜೆಪಿಯ ಒಂದು ಗುಂಪು ಮುಖಾಮುಖಿಯಾಯಿತು. ಈ ವೇಳೆ ಪರಸ್ಪರ ಘೋಷಣೆಗಳನ್ನು ಕೂಗಲಾಯಿತು. ಇದ್ದಕ್ಕಿದ್ದಂತೆ ಎರಡೂ ಕಡೆಯವರ ನಡುವೆ ಗಲಾಟೆ ಆರಂಭವಾಯಿತು. ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು.
ಆಕ್ರೋಶಿತ ಬಿಜೆಪಿ ಕಾರ್ಯಕರ್ತರು ನಗರ ಹೊರವಲಯದ ರಾಂಪುರ ಬಳಿ ರಾಷ್ಟ್ರೀಯ ಹೆದ್ದಾರಿ ೧೭೩ ರಲ್ಲಿ ಹಳೆಯ ಬೈಕೊಂದನ್ನು ರಸ್ತೆಗೆ ತಂದು ಬೆಂಕಿ ಹಚ್ಚಿದರು. ನಗರದ ವಿವಿಧೆಡೆ ಅಲ್ಲಲ್ಲಿ ಟೈರ್ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಭಾಗಶಃ ಬೆಂಬಲ: ಬಂದ್ ಕರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ನಗರದ ಎಂಜಿ ರಸ್ತೆಯ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಉಳಿದಂತೆ ಅಲ್ಲಲ್ಲಿ ಅಂಗಡಿಗಳು ತೆರದಿದ್ದವು. ಕೆಎಸ್ಆರ್ಟಿಸಿ ಬಸ್ಗಳು ಎಂದಿನಂತೆ ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಕೆಲವೆಡೆ ಜನ ಸಂಚಾರ ವಿರಳವಾಗಿತ್ತು.
ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಶುಕ್ರವಾರ ಸಂಜೆ ಬಿಡುಗಡೆಗೊಳಿಸಿದೆ, ಬಿಜೆಪಿ ಕಾರ್ಯಕರ್ತರು ಶಾಸಕ ಸಿ.ಟಿ ರವಿ ಅವರ ಮನೆ ಮುಂದೆ ಸಂಭ್ರಮಾಚರಣೆ ಮಾಡಿದರು.
Mixed support for the city bandh called to condemn the arrest of CT Ravi