ಚಿಕ್ಕಮಗಳೂರು: ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಪ್ರಯತ್ನದಿಂದಧಾಗಿ ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಹೊರಗಿರುತ್ತಾರೆ. ಇದರಿಂದ ಬೆಳೆಗಾರರಿಗೆ ಒಂದು ಶಕ್ತಿ ನೀಡಿದಂತಾಗಿದೆ ಎನ್ನುವ ಸಮಾಧಾನ ತಂದಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಫಿ ಬೆಳೆಗಾರರು ಸುಸ್ತಿ ಸಾಲಗಾರರಾದಾಗ ತಕ್ಷಣ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಮಾಡುತ್ತಿವೆ. ಈ ಬಗ್ಗೆ ನಾವು ಅಧಿವೇಶನ ವೇಳೆ ಪ್ರಶ್ನೆ ಕೇಳಿದಾಗ ವಾಣಿಜ್ಯ ಸಚಿವರು ಸರ್ಫೇಸಿ ಕಾಯ್ದೆ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಇಡೀ ದೇಶದ ಕಾಫಿ ಬೆಳೆಗಾರರಿಗೆ ದೊಡ್ಡ ಶಕ್ತಿ ಬಂದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಬ್ಯಾಂಕುಗಳು ಸೇರಿ ಕಾಫಿ ಬೆಳೆಗಾರರಿಗೆ ೩೫೦೦ ಕೋಟಿ ರೂ.ನಷ್ಟು ಸಾಲ ನೀಡಿವೆ. ಅದರಲ್ಲಿ ಕೆನರಾ ಬ್ಯಾಂಕ್ ಒಂದೇ ೧೫೦೦ ಕೋಟಿ ರೂ. ಸಾಲ ಕೊಟ್ಟಿದೆ. ಇದೀಗ ನಾವು ಸೇರಿಂದತೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಕೇಂದ್ರ ಸಚಿವರ ಹೇಳಿಕೆ ಆಧರಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿದ ಪರಿಣಾಮ ಕೆನರಾ ಬ್ಯಾಂಕ್ ಒನ್ ಟೈಂ ಸೆಟ್ಲ್ಮೆಂಟ್ಗೆ ಅವಕಾಶ ನೀಡಿತ್ತು. ಇದೀಗ ೮೧೭ ಮಂದಿ ಬೆಳೆಗಾರರು ಒನ್ ಟೈಂ ಸೆಟ್ಲ್ಮೆಂಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ೧೪೨ ಮಂದಿ ಈಗಾಗಲೇ ಶೇ.೫ ರಷ್ಟು ಹಣ ಕಟ್ಟಿ ಸಮಯ ತೆಗೆದುಕೊಂಡಿದ್ದಾರೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ರೈಲು ಸೇವೆಯನ್ನು ವಿಸ್ತರಿಸಲು ಉದ್ದೇಶಿಸಿ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈಗಿರುವ ರೈಲು ಕೆಲವು ತೊಂದರೆಯಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಿಕೊಡಲು ರೈಲ್ವೆ ಸಚಿವರು ಒಪ್ಪಿದ್ದಾರೆ. ಇದಲ್ಲದೆ ಚಿಕ್ಕಮಗಳೂರಿನಿಂದ ವಯಾ ಬೆಂಗಳೂರು-ತಿರುಪತಿ ರೈಲು ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಮಂಜೂರಾತಿ ಸಿಗುವ ಭರವಸೆ ಇದೆ. ಚಿಕ್ಕಮಗಳೂರಿನಲ್ಲಿ ಪಾಸ್ ಪೋರ್ಟ್ ಸೆಂಟರ್ ಆರಂಭಿಸಲು ಪ್ರಸ್ತಾವನೆ ನೀಡಲಾಗಿದ್ದು, ಅದಕ್ಕೂ ಮಂತ್ರಿಗಳಿಂದ ಆಶ್ವಾಸನೆ ಸಿಕ್ಕಿದೆ ಎಂದರು.
ಕಳಸ ತಾಲ್ಲೂಕು ಸಂಸೆ ಮತ್ತು ದಿಡುಪೆ ನಡುವಿನ ರಸ್ತೆ ದುರಸ್ಥಿ ಆಗಬೇಕೆನ್ನುವುದು ಬಹಳ ದಿನದ ಬೇಡಿಕೆ ಆಗಿದೆ. ಆಸ್ಪತ್ರೆಗೆ ತೆರಳುವವರು ಮತ್ತಿತರೆ ಉದ್ದೇಶಕ್ಕೆ ರಸ್ತೆ ಬಹಳ ಅಗತ್ಯವಿದೆ ಎಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಲೋಕೋಪಯೋಗಿ ಇಲಾಖೆಯವರು ಯೋಜನೆಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಯಾವ ಇಲಾಖೆ ಮೂಲಕ ಮಾಡಬೇಕು ಎನ್ನುವುದನ್ನು ಯೋಚಿಸಲು ಎರಡೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ.
ಸುಮಾರು ೫೦ ಕೋಟಿ ರೂ. ವೆಚ್ಚದ ಈ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಸಲ್ಪ ಆಕ್ಷೇಪಗಳಿರುವ ಹಿನ್ನೆಲೆಯಲ್ಲಿ ಬೇರೆ ಜಾಗವನ್ನು ಕಾಯ್ದಿರಿಸಲು ಚರ್ಚೆಗಳು ನಡೆಯುತ್ತಿದೆ ಎಂದರು.
ಕೇಂದ್ರದ ಯೋಜನೆಗಳನ್ನು ಮುತುವರ್ಜಿಯಿಂದ ಜನರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯ ಸಂಪದ ಯೋಜನೆಯಡಿ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಪ್ರತಿ ಜಿಲ್ಲೆಗೆ ೨೫೦ ಜನರಿಗೆ ಸಬ್ಸಿಡಿಯೊಂದಿಗೆ ಸಾಲ ಕೊಡುವ ಯೋಜನೆ ಇದಾಗಿದೆ.
ನಿರುದ್ಯೋಗಿ ಯುವಕ ಯುವತಿಯರಿಗೆ ಇದು ಪ್ರಯೋಜನಕಾರಿಯಾಗಿದೆ ನಮ್ಮಲ್ಲಿ ೨೫೦ ಘಟಕಗಳ ಗುರಿಯಿದ್ದರೂ ೬೦ ಜನರಿಗೆ ಮಾತ್ರ ಮಂಜುರಾತಿ ಪ್ರಸ್ತಾಪನೆಗಳಿವೆ ಈ ಹಿನ್ನೆಲೆಯಲ್ಲಿ ಮೀನುಗಾರಿಕೆ, ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು, ಅರ್ಜಿದಾರರು, ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡ ಕಾರ್ಯಾಗಾರವೊಂದನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಎಲ್ಲಾ ಶಾಸಕರು, ಉಸ್ತುವಾರಿ ಸಚಿವರುಗಳನ್ನು ಕಾರ್ಯಾಗಾರಕ್ಕೆ ಆಹ್ವಾನಿಸಿ ಆಕಾಂಕ್ಷಿಗಳಿಗೆ ಒಂದಷ್ಟು ಮಾಹಿತಿ ನೀಡಲಾಗುವುದು. ಈ ಯೋಜನೆಯಿಂದ ಬಹಳಷ್ಟು ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ನಮ್ಮ ನಿರೀಕ್ಷೆ ಎಂದರು.
Central government’s shoe debate – Coffee growers saved from the SARFAESI Act