ಚಿಕ್ಕಮಗಳೂರು: ತೇಗೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೆಲವು ಮಧ್ಯವರ್ತಿಗಳು ತೊಂದರೆ ನೀಡುತಿದ್ದು, ಇದರಿಂದ ಆಧಿಶಕ್ತಿ ನಗರದ ಗ್ರಾಮಸ್ಥರಿಗೂ ತೊಂದರೆ ಉಂಟಾಗುತ್ತಿದೆ. ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ಅಪರಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಸುದ್ಧಿಗಾರರೊಂದಿಗೆ ರಾಜ್ಯ ಸಂಚಾಲಕ ಜೆನ್ನಿಕ್ಲಾಸ್ ಡೇವಿಡ್ ಮಾತನಾಡಿ, ಗವನಹಳ್ಳಿ ಸರ್ವೆ ನಂ.೧೧೫ ಹಾಗೂ ೯೪ಕ್ಕೆ ಹೊಂದಿಕೊಂಡಿರುವ ಆಧಿಶಕ್ತಿನಗರ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಕಡುಬಡವರಾಗಿದ್ದು ಅವರ ಮಕ್ಕಳ ವಿದ್ಯಾಭ್ಯಾಸ, ಮದುವೆ, ಬ್ಯಾಂಕ್ ಲೋನ್ ಮಾಡಿಸಲು ಹಾಗೂ ಇನ್ನಿತರ ಕಾರ್ಯಗಳಿಗೆ ಇ-ಸ್ವತ್ತು ಅಗತ್ಯವಿದ್ದು, ಹಲವಾರು ವರ್ಷಗಳಿಂದ ಇ-ಸ್ವತ್ತು ಮಾಡಲಾಗುತ್ತಿಲ್ಲ ಇದರಿಂದ ಗ್ರಾಮಸ್ಥರಿಗೆ ತೊಂದರೆಗಳು ಉಂಟಾಗುತ್ತಿದೆ ಎಂದರು.
ಸದ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾತೆದಾರರ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಪರಶೀಲಿಸಿ ಇ-ಸ್ವತ್ತು ಮಾಡಿಕೊಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಅನಕೂಲವಾಗುತ್ತಿದೆ. ಆದರೆ ಕೆಲವು ವ್ಯಕ್ತಿಗಳು ದಾಖಲೆ ಇಲ್ಲದ ನಿವೇಶನಗಳ ಇ-ಸ್ವತ್ತು ಮಾಡಿಕೊಡುವಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇಲ್ಲದಿದ್ದಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಂದ ಫೋನ್ಕರೆ ಮಾಡಿಸುವುದು ಹಾಗೂ ವರ್ಗಾವಣೆ ಮಾಡಿಸುತ್ತೇವೆಂದು ಬೆದರಿಕೆ ಹಾಕುವ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಬೇಸತ್ತು ಸ್ವತಹಾ: ತಾವೇ ವರ್ಗವಣೆ ಮಾಡಿಸಿಕೊಂಡು ಬೇರೆಕಡೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ಈ ವ್ಯಕ್ತಿಗಳಿಂದ ಸುಖಾ ಸುಮ್ಮನೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದು. ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳ ಬಗ್ಗೆ ರಾಜಕೀಯ ಧುರೀಣರಿಗೆ, ಮೇಲಾಧಿಕಾರಿಗಳಿಗೆ ಇಲ್ಲಸಲ್ಲದ ಆರೋಪ ಮಾಡಿ ಮನಸೋಇಚ್ಛೆ ನಿಂಧಿಸಿ ಹೆದರಿಸುವುದು ಇವರುಗಳ ಕೆಲಸವಾಗಿದೆ. ಇಂತಹ ವ್ಯಕ್ತಿಗಳಿಂದ ಅಧಿಕಾರಿಗಳಿಗೆ ಆರೋಪ ಬಂದರೆ ಸಾರ್ವಜನಿಕವಾಗಿ ತನಿಖೆ ಮಾಡಿ ನಂತರ ಸಂಬಂಧಪಟ್ಟವರ ವಿರುದ್ಧಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್, ಮಂಜುನಾಥ್.ಎ, ಗಂಗಾಧರ್, ಶಾಹಿದ್, ಮಹಮದ್ ಶರೀಫ್, ಶಂಕರ್, ರಘು ಯು.ಎಂ., ಲಾರೆನ್ಸ್, ಸಿ.ಎನ್ ಈರಣ್ಣ, ಮಲ್ಲೇಶ್ ವಿ.ಆರ್ ಹಾಗೂ ತೇಗೂರು ಗ್ರಾಮಸ್ಥರು ಮತ್ತು ಮುಂಖಂಡರುಗಳು ಉಪಸ್ಥಿತರಿದ್ದರು.
Appeal to the district administration to avoid the menace of middlemen in Tegur Panchayat