ಚಿಕ್ಕಮಗಳೂರು: ಹೊಸ ದೇವಾಲಯಗಳ ನಿರ್ಮಾಣಕ್ಕಿಂತ ಹಳೆಯ ದೇವಾಲಯಗಳ ಜೀರ್ಣೋದ್ಧಾರವೇ ಶ್ರೇಷ್ಠ. ಇದು ಬ್ರಹ್ಮದೇವರು ವ್ಯಾಖ್ಯಾನಿಸಿರುವ ರೀತಿ; ಆದ್ದರಿಂದ ಎಲ್ಲಿಯೇ ಇರಲಿ, ಯಾವುದೇ ದೇವಸ್ಥಾನವಿರಲಿ ಅಲ್ಲಿ ಯಾವುದೇ ಪೂಜಾ ವಿಧಾನಗಳಲ್ಲಿ ಲೋಪಗಳಾಗಬಾರದು ಎಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶ್ರೀಕ್ಷೇತ್ರ ಬಂಗಾರುಮಕ್ಕಿ ಶ್ರೀ ಹೇಮಪುರ ಮಹಾಪೀಠಂನ ಶ್ರೀ ವಿಶ್ವ ವೀರಾಂಜನೇಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಶ್ರೀಪೀಠಂನ ಭಕ್ತಾದಿಗಳು ಹಾಗೂ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ, ದೇವಾಲಯಗಳ ಜೀರ್ಣೋದ್ಧಾರಗಳು ಕಾಲ ಕಾಲಕ್ಕೆ ಪುನರುಜ್ಜೀವನ ಆಗಬೇಕು. ಈ ದಿಕ್ಕಿನಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮದವರೂ ಭಾಗಿಯಾಗಬೇಕಾಗಿರುವುದು ಇಂದಿನ ಅವಶ್ಯ. ದೇವಸ್ಥಾನಗಳೇ ಅಭಿವೃದ್ಧಿಯ ಸಂಕೇತ ಎಂದರು.
ಹೊನ್ನಾವರದ ಶ್ರೀ ಬಂಗಾರುಮಕ್ಕಿ ಕ್ಷೇತ್ರದಲ್ಲಿ ಮಾ.೩೧ ರಿಂದ ಏಪ್ರಿಲ್ ೧೩ರವರೆಗೆ ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು. ಶ್ರೀಕ್ಷೇತ್ರದಲ್ಲಿ ಶ್ರೀ ವೀರಾಂಜನೇಯ ಪ್ರತಿಷ್ಠಾ ಬಂಧ, ನೂತನ ಗೋಪುರ – ಸ್ವರ್ಣಮಯ ಕಲಶ, ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ ಸನ್ನಿಧಿ, ಚೌಡೇಶ್ವರಿ ಸನ್ನಿಧಿ ನಿರ್ಮಾಣ ಹಾಗೂ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಮಹಾ ಕಾರ್ಯಕ್ಕೆ ಈ ಜಿಲ್ಲೆಯ ಎಲ್ಲರನ್ನೂ ಶ್ರೀ ವಿಶ್ವ ವೀರಾಂಜನೇಯರ ಅನುಗ್ರಹದಿಂದ ಆಹ್ವಾನಿಸುತ್ತಿದ್ದು, ಈ ಅವಧಿಯಲ್ಲಿ ಎಲ್ಲ ಸದ್ಭಕ್ತರೂ ಭಾಗವಹಿಸಬಹುದು ಎಂದು ತಿಳಿಸಿದರು.
ಮಾ.೩೧ ರಿಂದ ಜರುಗುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏ.೭ ರಂದು ಶರಾವತಿ ಕುಂಭಸ್ನಾನ, ಶರಾವತಿ ಆರತಿ, ಏ.೬ ರಿಂದ ೧೨ರವರೆಗೆ ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ, ಸಭಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಕೇತ್ರ ಪ್ರತಿನಿಧಿಗಳ ಸಹಕಾರದಿಂದ ರಾಜ್ಯದ ಕನಿಷ್ಠ ೫೦ ಲಕ್ಷ ಮನೆಗಳಿಗೆ ಶ್ರೀ ವಿಶ್ವ ವೀರಾಂಜನೇಯ ಮಹಾ ಸಂಸ್ಥಾನದ ಆಹ್ವಾನ ಪತ್ರಿಕೆ – ಪ್ರಸಾದವನ್ನು ಮನೆ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯದಲ್ಲಿ ಎಲ್ಲ ಭಕ್ತಾದಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಇದೀಗ ೧೭ ಜಿಲ್ಲೆಗಳಲ್ಲಿಯೂ ಈ ಪ್ರಚಾರ ಆಂದೋಳನ ಕೈಗೊಂಡಿದ್ದು, ರಾಜ್ಯಾದ್ಯಂತ ಶ್ರೀಕ್ಷೇತ್ರ ಬಂದಾರುಮಕ್ಕಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ತಿಳಿಸಲಾಗುತ್ತಿದೆ. ನಮ್ಮೆಲ್ಲರ ಕಷ್ಟ-ನಷ್ಟ ಪರಿಹರಿಸಿ ಲೋಕಕ್ಕೆ ಮಂಗಳ ಉಂಟು ಮಾಡುವ ಶ್ರೀ ರಾಮಾಂಜನೇಯ ದೇವರ ಕೈಂಕರ್ಯದಲ್ಲಿ ಸಮಸ್ತ ಭಕ್ತರೂ ಸಹಕರಿಸುವಂತೆ ವಿನಂತಿಸಿದರು.
ಶ್ರೀವತ್ಸ ವೇದಘೋಷ, ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಸುಮಾ ಪ್ರಸಾದ್ ಸ್ವಾಗತ, ಸತ್ಯವತಿ ಕಾರ್ಯಕ್ರಮ ನಿರೂಪಣೆ, ಬಿ.ಎಂ.ಎಸ್.ನಿರ್ದೇಶಕಿ ಎಸ್.ಶಾಂತಕುಮಾರಿ ವಂದನಾರ್ಪಣೆ ನೆರವೇರಿಸಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು.
Sri Vishwa Veeranjaneya Swamiji