ಚಿಕ್ಕಮಗಳೂರು: ಭಾರತ ಪ್ರಾಕೃತಿಕ, ಆಧ್ಯಾತ್ಮಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಂಪದ್ಭರಿತ ದೇಶವಾಗಿದ್ದು, ಇಡೀ ಜಗತ್ತು ಅತ್ಯಂತ ಗೌರವದಿಂದ ನೋಡುವಂತಹ ಆಧ್ಯಾತ್ಮಿಕ ಆತ್ಮ ತೃಪ್ತಿಯನ್ನು ಹೊಂದಿದೆ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಇಲ್ಲಿನ ಬಸವತತ್ವ ಪೀಠದಲ್ಲಿ ಏರ್ಪಡಿಸಲಾಗಿದ್ದ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಚಿಕ್ಕಮಗಳೂರು ಜಿಲ್ಲೆ ಸೌಂದರ್ಯಭರಿತವಾಗಿದ್ದು, ಮಲೆನಾಡು, ಬಯಲು ಪ್ರದೇಶ ಹೊಂದಿರುವ ಅಪರೂಪದ ಜಿಲ್ಲೆ. ಐತಿಹಾಸಿಕ, ಧಾರ್ಮಿಕ ಕೇಂದ್ರಗಳಿರುವುದರ ಜೊತೆಗೆ ನಾನಾ ಕಾರಣಗಳಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು, ಈ ಜಿಲ್ಲೆಯಲ್ಲಿ ಬಸವತತ್ವ ಪೀಠ ಸ್ಥಾಪನೆಯಾಗಿರುವುದು ಆರ್ಥಪೂರ್ಣ ಎಂದರು.
ಧರ್ಮ ಎನ್ನುವುದು ಸಾವಿರಾರು ವರ್ಷಗಳ ವಿಕಾಸವಾಗಿದ್ದು ಈ ಬಗ್ಗೆ ಆತ್ಮಸಾಕ್ಷಿ ನಿರಂತರವಾಗಿ ನಡೆದಿದೆ, ದೊಡ್ಡ ಪರಂಪರೆ ದೇಶದಲ್ಲಿ ಬೆಳೆದಿದೆ. ೧೨ನೇ ಶತಮಾನದಲ್ಲಿ ಆಧ್ಯಾತ್ಮಿಕ ತಿರುವು, ಆಧ್ಯಾತ್ಮಕ ಮಗ್ಗಲು ಬದಲಿಸಿದವರು ವಿಶ್ವಗುರು ಬಸವಣ್ಣನವರು. ಅವರ ಬದುಕೇ ಒಂದು ಪ್ರಯೋಗಶಾಲೆಯಾಗಿತ್ತು ಎಂದು ಹೇಳಿದರು.
ಕಾನೂನಿನ ನೆರಳಿನಿಂದ ಮಾಡಲು ಅಸಾಧ್ಯವಾಗಿರುವುದನ್ನು ಹೃದಯ ವೈಶಾಲ್ಯತೆಯಿಂದ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ವಚನಗಳ ಮೂಲಕ ತೋರಿಸಿದವರು ಬಸವಣ್ಣ ಎಂದು ಬಣ್ಣಿಸಿದರು.
ಕರ್ನಾಟಕ ರಾಜ್ಯದ ಸಾಕ್ಷರತೆಯನ್ನು ಗಮನಿಸಿದರೆ ಬೇರೆ ರಾಜ್ಯಗಳಿಗಿಂತ ಸಾಕ್ಷರತೆ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ರಾಜ್ಯದ ಮಠಮಾನ್ಯಗಳ ಕೊಡುಗೆ ಸಾಕ್ಷರತೆಯ ಬೆಳವಣಿಗೆಗೆ ಪೂರಕವಾಗಿದ್ದು, ಮಠಮಾನ್ಯಗಳು ಲೌಖಿಕ ಬದುಕಿನ ಜೊತೆಗೆ ಆಧ್ಯಾತ್ಮಿಕವನ್ನು ಪಸರಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದರು.
ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ೧೧೦೮ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಸವತತ್ವ ಪೀಠದ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಾಗೆ ಭಕ್ತರು ಹಳೆಯ ಮನಸ್ಸನ್ನು ಕೆಡವಿ ಹೊಸ ಮನಸನ್ನು ಕಟ್ಟಬೇಕು ಆಗಮಾತ್ರ ಬಸವತತ್ವ ಸಮಾವೇಶದ ಆಶೋತ್ತರಗಳು ಪೂರೈಸಿದಂತಾಗುತ್ತದೆ ಎಂದರು.
ವಿಶ್ವಗುರು ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರ ವ್ಯಕ್ತಿತ್ವ-ಬದುಕು ಒಂದು ಮಗ್ಗಲಿಗೆ ಸಂಬಂಧಿಸಿದ್ದಲ್ಲ. ಸಾಮಾಜಿಕ, ಧಾರ್ಮಿಕ, ಆರ್ಥಿಕ ಚಿಂತನೆಯನ್ನು ಕೊಟ್ಟ ಮಹಾನ್ ಕ್ರಾಂತಿ ಪುರುಷ ಎಂದು ಬಣ್ಣಿಸಿದರು.
ವಿಶ್ವಗುರು ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂಬುದನ್ನು ಮೀರಿಸುವಂತದ್ದು ಅವರ ಸಾಮಾಜಿಕ ಪರಿವರ್ತನೆಯ ಕಾಯಕವಾಗಿದ್ದು, ಇದನ್ನು ಬಹಿರಂಗವಾಗಿ ಪ್ರದಿಪಾಧಿಸುತ್ತೇನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಸಾಮಾಜಿಕ, ಧಾರ್ಮಿಕ ಭಾವನೆ ಈ ಕ್ಷೇತ್ರದ ಜನರಲ್ಲಿ ಮೂಡಲು ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಕಾರಣಕರ್ತರಾಗಿದ್ದಾರೆ. ಭಕ್ತರ ಕಡೆ ಗುರುಗಳ ನಡಿಗೆ ಎಂಬ ಬಸವತತ್ವ ಸಮಾವೇಶ ನಡೆಸುವ ಮೂಲಕ ಜನರಲ್ಲಿ ಬಸವಾದಿ ಶರಣರ ತತ್ವಗಳನ್ನು ಮನವರಿಕೆ ಮಾಡಿದ್ದು, ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಬಸವತತ್ವ ಪೀಠವನ್ನು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಿಗೆ ಶ್ರೀಗಳು ವಿಸ್ತರಿಸಿದ್ದಾರೆ ಎಂದರು.
ಇಂದು ಒಂದೇ ವೇದಿಕೆಯಲ್ಲಿ ವಿವಿಧ ಮಠದ ಎಂಟು ಜಗದ್ಗುರುಗಳು ಆಸೀನರಾಗಿರುವುದನ್ನು ನೋಡುವುದು ನಮ್ಮೆಲ್ಲರ ಸೌಭಾಗ್ಯ, ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಶ್ರೀಮಠಕ್ಕೆ ೩ ಕೋಟಿ ಅನುದಾನ ನೀಡಿದ್ದರು ಎಂದು ಹೇಳಿದರು.
ಸರ್ಕಾರಕ್ಕೆ ಸಮಾನವಾಗಿ ವೀರಶೈವ ಲಿಂಗಾಯಿತ ಮಠಗಳು ಜ್ಞಾನ, ಶಿಕ್ಷಣ, ಅನ್ನದಾಸೋಹಗಳನ್ನು ನಡೆಸುತ್ತಾ ಬರುತ್ತಿದ್ದು, ವಚನಗಳ ಮೂಲಕ ಬಸವಣ್ಣ ತಮ್ಮ ತತ್ವಗಳನ್ನು ಸಮಾಜದಲ್ಲಿ ಬಿಂಬಿಸುವ ಮೂಲಕ ಜಗತ್ತಿಗೆ ಬೆಳಕಾಗಿದ್ದರು ಎಂದು ಹೇಳಿದರು.
ಸರ್ಕಾರದ ೧.೫೦ ಕೋಟಿ ರೂ ಅನುದಾನದ ಜೊತೆಗೆ ಭಕ್ತರ ದೇಣಿಗೆಯಿಂದ ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗುರುವಿನ ನಡಿಗೆ ಭಕ್ತರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಭಕ್ತರನ್ನು ಸಂಪರ್ಕಿಸಿ ಧರ್ಮ ಜಾಗೃತಿ ಮೂಡಿಸಿ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದರು ಎಂದು ತಿಳಿಸಿದರು.
ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬಸವತತ್ವ ಪೀಠ ಇಂದು ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂಬುದಕ್ಕೆ ಇಂದು ಇಲ್ಲಿ ಸೇರಿರುವ ಜನಸ್ತೋಮವೇ ಹೇಳುತ್ತಿದೆ ಎಂದರು.
ಮಠಮಾನ್ಯಗಳು, ಗುರುವರಿಯರು ಸಮಾಜಕ್ಕೆ ಮಾರ್ಗ ತೋರಿಸಲು ಕಾಯಕ ಮಾಡುತ್ತಿವೆ. ಹಿಂದುತ್ವದ ಸನಾತನ ಧರ್ಮದ ವಿಶ್ವಾಸವನ್ನು ವೃದ್ಧಿಗೊಳಿಸುವ ಸಲುವಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಭೀತಿ ರಾಜಕಾರಣ ಮಾಡದೆ ಪ್ರೀತಿ ರಾಜಕಾರಣವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿರಿಗೆರೆ ಶ್ರೀಗಳನ್ನು ಆಧುನಿಕ ಭಗೀರಥ ಎಂದು ಕರೆಯುತ್ತಿದ್ದಾರೆ, ಅದಕ್ಕೆ ಅವರು ಕೈಗೊಂಡ ಕೆರೆ ತುಂಬಿಸುವ ಕಾಯಕ ಯೋಜನೆಗೆ ಬಲವಾಗಿ ನಿಂತು ನಮ್ಮಂತವರ ಕಿವಿ ಹಿಂಡಿ ಕೆಲಸ ಮಾಡಿಸಿ ಜನಸಾಮಾನ್ಯರಿಗೆ ನೀರೊದಗಿಸುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.
ಆನೆ ಮತ್ತು ಆಸೆ ಎರಡಕ್ಷರದ ಆನೆ ಹೊಟ್ಟೆ ತುಂಬಿಸಿದೆವು ಆದರೆ, ಆಸೆ ಹೊಟ್ಟೆ ತುಂಬಿಸಲಾಗಿಲ್ಲ, ಜನಪ್ರತಿನಿಧಿಗಳಾದವರು ಶಾಸಕರಾದರೆ ಮಂತ್ರಿಯಾಗಬೇಕು, ಮಂತ್ರಿಯಾದರೆ ಮುಖ್ಯಮಂತ್ರಿಯಾಗಬೇಕು ಎಂಬ ರಾಜಕೀಯದ ಹುದ್ದೆ ಆಸೆಗಳ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಸಿದ್ದ ಸಂಸ್ಥಾನ ಮಠದ ಮನ್ಯಹಾರಾಜ ನಿರಂಜನ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿ, ಶಿವಮೊಗ್ಗದ ಮುರುಗರಾಜೇಂದ್ರ ಸಂಸ್ಥಾನ ಮಠದ ಮಲ್ಲಿಕಾರ್ಜುನ ಮುರುಗರಾಜೇಂದ್ರ ಮಹಾಸ್ವಾಮಿ, ಗದಗದ ಸಿದ್ದರಾಮ ಮಹಾಸ್ವಾಮೀಜಿ, ಪುಷ್ವಗಿರಿಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡಿದರು. ಶಾಸಕರಾದ ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೆ.ಸಿ. ವಿರೂಪಾಕ್ಷ, ಗಾಯಿತ್ರಿಶಾಂತೇಗೌಡ, ಬಿ.ಹೆಚ್. ಹರೀಶ್, ಎಂ.ಸಿ. ಶಿವಾನಂದಸ್ವಾಮಿ, ಮಹಡಿಮನೆ ಸತೀಶ್, ಚಿದಾನಂದ್, ಡಾ. ಎಸ್. ವಿನಾಯಕ್, ಹೆಚ್.ಎಸ್. ರಾಜಶೇಖರ್, ಬಿ.ಆರ್. ಲೋಕೇಶ್, ಎ.ಆರ್. ರವಿ, ಪೌರಾಯುಕ್ತರಾದ ಬಸವರಾಜ್, ಮತ್ತಿತರರು ಉಪಸ್ಥಿತರಿದ್ದರು.
Inauguration ceremony of the new building of Basavatatva Srimatthi