ಚಿಕ್ಕಮಗಳೂರು: ಸದೃಢ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ. ಆರೋಗ್ಯವೇ ಭಾಗ್ಯ. ಈ ನಿಟ್ಟಿನಲ್ಲಿ ನಗರದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿದ್ದು ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಆಜಾದ್ ಪಾರ್ಕಿನ ಬಳಿ ನಿರ್ಮಿಸಿರುವ ನೂತನ ಜೈಭೀಮ್ ವ್ಯಾಯಾಮ ಶಾಲೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಂಬೇಡ್ಕರ್ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಹೋರಾಡಿದ್ದಾರೆ. ಜಗತ್ತೇ ಮೆಚ್ಚುವಂತಹ ಸಂವಿಧಾನ ರಚಿಸಿದ್ದಾರೆ. ಅವರ ಜನ್ಮದಿನದಂದೇ ಜೈಭೀಮ್ ವ್ಯಾಯಾಮ ಶಾಲೆ ಉದ್ಘಾಟಿಸುತ್ತಿರುವುದು ಸಂತಸದ ಕ್ಷಣವಾಗಿದೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ೬೪ ಲಕ್ಷ ರೂ.ವೆಚ್ಚದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿ ಉದ್ಘಾಟನೆ ಆಗುತ್ತಿದೆ. ಯುವಕರು ಬಾಹುಬಲಕ್ಕೆ ವ್ಯಾಯಾಮಶಾಲೆ ಉಪಯೋಗಿಸಿಕೊಳ್ಳಿ, ಬುದ್ದಿ ಬಲಕ್ಕೆ ಗ್ರಂಥಾಲಯ ಬಳಸಿಕೊಳ್ಳಿ. ಬುದ್ದಿ ಮತ್ತು ಬಾಹುಬಲ ಸಮಾಜದ ಉನ್ನತಿ, ರಾಷ್ಟ್ರ ನಿರ್ಮಾಣಕ್ಕೆ ಉಪಯೋಗವಾಗುತ್ತದೆ. ಸಮಾಜಕ್ಕೆ ಉಪಯೋಗವಾಗದ ಬುದ್ದಿ ಮತ್ತು ಬಾಹುಬಲ ರಾಕ್ಷಸ ಬಲವಾಗಿ ಪರಿವರ್ತನೆಯಾಗವ ಅಪಾಯವಿದೆ ಎಂದರು.
ಇಲ್ಲಿನ ವ್ಯಾಯಾಮ ಶಾಲೆಗೆ ಸುದೀರ್ಘ ಇತಿಹಾಸವಿದೆ. ಈ ಹಿಂದೆ ಸಿಟಿ ಜಿಮ್ ಇತ್ತು. ಸಿಎಸ್ಆರ್ ಫಂಡ್ನಲ್ಲಿ ಕಾಲೇಜು ಕಟ್ಟಡ ನಿರ್ಮಿಸುವಾಗ ಅದು ತೆರವಾಗಿತ್ತು. ಮಾತುಕೊಟ್ಟಂತೆ ವ್ಯಾಯಾಮ ಶಾಲೆಯನ್ನು ನಿರ್ಮಿಸಿದ್ದೇವೆ. ಜೈಭೀಮ್ ಎಂಬ ಹೆಸರಿಡಬೇಕು ಎಂದಾಗ ತಕರಾರಿಲ್ಲದೆ ಇಟ್ಟಿದ್ದೇವೆ ಅಂಬೇಡ್ಕರ್ಜನ್ಮದಿನದಂದೇ ಉದ್ಘಾಟಿಸಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷೆ ಸಜಾತ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಾಯಾಮ ಶಾಲೆ ಯುವಕರಿಗೆ ಅನುಕೂಲ ಆಗಲಿ. ಕಟ್ಟಡ ಮತ್ತು ಸಲಕರಣೆಗಳನ್ನು ಹಾಳುಮಾಡದೆ ತಮ್ಮದೆಂದು ಸದ್ಬಳಕೆ ಮಾಡಿಕೊಳ್ಳಬೇಕು. ರಿಯಾಯಿತಿ ದರ ನಿಗ ಮಾಡಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಆಯುಕ್ತ ಬಸವರಾಜು, ಮಾಜಿ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ರಾಧಕೃಷ, ಶ್ರೀನಿವಾಸ್, ವೆಂಕಟೇಶ್, ನಗರಸಭೆ ಸದಸ್ಯರು, ಮತ್ತಿರರು ಉಪಸ್ಥಿತರಿದ್ದರು.
New Jaibhim Gymnasium inaugurated