ಚಿಕ್ಕಮಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯ ೨,೬೧,೪೧೫ ಮಂದಿ ಯಜಮಾನಿಯರಿಗೆ ೫೨.೨೮ ಕೋಟಿ ರೂ. ನೇರವಾಗಿ ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ ಸಾರಿಗೆ ಸಂಸ್ಥೆಗೆ ಸರ್ಕಾರ ಶಕ್ತಿ ಯೋಜನೆಯಡಿ ಭರಪೂರ ಅನುದಾನ ಸರ್ಕಾರ ಬಿಡುಗಡೆ ಮಾಡಿರುವುದರಿಂದ ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ರಸ್ತೆ ಸಾರಿಗೆ ನಿಗಮದ ೪೭ ಹೊಸ ಬಸ್ಗಳು ಜಿಲ್ಲೆಗೆ ಬಂದಿದ್ದು.ಅವುಗಳನ್ನು ಅಗತ್ಯವಿರುವ ಹೆಚ್ಚು ಜನದಟ್ಟಣೆ ಇರುವ ಮಾರ್ಗಗಳಲ್ಲಿ ಸಂಚರಿಸಲು ಒದಗಿಸಲಾಗುವುದು ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಪಾವತಿದಾರರು ಹಾಗೂ ಜಿ.ಎಸ್.ಟಿ. ಪಾವತಿದಾರ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭವಾಗದಿರುವ ಬಗ್ಗೆ ಚರ್ಚಿಸಲಾಗಿದ್ದು, ಇದನ್ನು ಈ ಕುಟುಂಬಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
ಅನ್ನಭಾಗ್ಯ ಯೋಜನೆಯಡಿ ಡಿ.೨೪ರವರೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ಜಮಾ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಫಲಾನುಭವಿಗಳಿಗೆ ಹಣದ ಬದಲಾಗಿ ತಲಾ ೫ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಜಿಲ್ಲೆಯ ೫೩೧ ಪಡಿತರ ವಿತರಣಾ ಕೇಂದ್ರಗಳ ಮೂಲಕ ಜಿಲ್ಲೆಯ ೮,೦೧,೫೩೬ ನೀಡಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸವಿತಾ ಸಭೆಗೆ ತಿಳಿಸಿದರು.
ಜಿಲ್ಲೆಯ ೩,೫೪,೧೬೫ ಬಳಕೆದಾರರ (ಮೀಟರ್ಗಳು) ಪೈಕಿ ೩,೧೧,೪೦೯ ಬಳಕೆದಾರರ (ಮೀಟರ್ಗಳು) ಸುಮಾರು ೧೦ ಲಕ್ಷ ಜನರು ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾಹೆಯಾನ ೧೧.೭೯ ಕೋಟಿ ರೂ.ಗಳನ್ನು ಮೆಸ್ಕಾಂಗೆ ಭರಿಸುತ್ತಿದೆ ಎಂದು ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಂಜುನಾಥ್ ಸಭೆಗೆ ತಿಳಿಸಿದರು. ಜನಸಂಪರ್ಕ ಸಭೆಯೂ ಸೇರಿದಂತೆ ಇಲಾಖೆಯ ಹಲವು ವಿಷಯಗಳ ಬಗ್ಗೆ ಸದಸ್ಯರು ಈ ಸಂದರ್ಭದಲ್ಲಿ ಚರ್ಚಿಸಿದರು.
ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದುವರೆಗೂ ೧೮೧೧೧ ಪದವೀಧರರೂ, ೯೬ ಡಿಪ್ಲೊಮಾ ಪದವೀಧರರು ಯುವನಿಧಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಇದುವರೆಗೆ ಸುಮಾರು ೬ ಕೋಟಿ ರೂ. ಭರಿಸಲಾಗಿದೆ ಎಂದು ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ನದಾಫ್ ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯ ಬಸ್ಗಳಲ್ಲಿ ಜೂನ್ ೨೦೨೩ ರಿಂದ ಈವರೆಗೆ ಅಂದರೆ ಮಾರ್ಚ್ ೨೦೨೫ರವರೆಗೆ ೩.೮೪ ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು, ೧೪೭ ಕೋಟಿ ರೂ.ಗಳನ್ನು ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ ಎಂದು ನಿಗಮದ ಸಂಚಾರಿ ವಿಭಾಗದ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಗ್ಯಾರಂಟಿ ಯೋಜನೆಗಳ ನಾಮಫಲಕವನ್ನು ತೂಗು ಹಾಕಬೇಕೆಂದು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನ ತಿಳಿಸಿದರು.
ಪ್ರತೀ ತಿಂಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿದ್ದು, ತಾಲ್ಲೂಕು ಸಮಿತಿಗಳು ತಾಲ್ಲೂಕು ಮಟ್ಟದಲ್ಲಿ ಸಭೆ, ಸಂವಾದ, ಫಲಾನುಭವಿಗಳ ಸಮಾವೇಶಗಳನ್ನು ಅಲ್ಲಲ್ಲಿ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಂಜೀವಿನಿ ಗುಂಪುಗಳನ್ನು ರಚಿಸುವಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ ಅವರು ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಈಗಲೂ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಉಳಿದಿದ್ದು, ಅಧಿಕಾರಿಗಳು ಅದನ್ನು ಉಳಿಸಿಕೊಳ್ಳುವಲ್ಲಿ ಶ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರುಗಳಾದ ಡೈರಿ ಮಂಜಣ್ಣ, ಶಫೀವುಲ್ಲ, ಹೆಚ್.ಎಸ್.ಕೃಷ್ಣೇಗೌಡ, ಡಿ.ಜಿ.ಚಂದ್ರಮೌಳಿ, ಹೇಮಾವತಿ ಸೇರಿದಂತೆ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರುಗಳು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಹೆಚ್.ಜಿ.ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ ಭಜಂತ್ರಿ ಭಾಗವಹಿಸಿದ್ದರು.
೨೪ಸಿಕೆಎಂ ಫೋಟೋ ೩ ಹಾಗೂ ೩ಎ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿದರು.
೨೪ಸಿಕೆಎಂ ಫೋಟೋ ೪: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಇಂದು ಡಾ.ರಾಜ್ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಗೊರವರ, ಪ್ರಾಧಿಕಾರದ ಪದಾಧಿಕಾರಿಗಳು ಇದ್ದರು.
Grihalakshmi facility for 2.61 lakh family heads in the district