ಚಿಕ್ಕಮಗಳೂರು: ಶೋಷಿತರನ್ನು ಸಮಾಜದ ಮುನ್ನಲೆಗೆ ತರುವುದರ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ಕಲ್ಯಾಣ ನಗರದ ಬಸವ ತತ್ವ ಪೀಠದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಜನಿಸದಿದ್ದರೆ ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಕಷ್ಟಸಾಧ್ಯವಾಗುತ್ತಿತ್ತು. ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ಬುದ್ಧರು ಈ ಮಹಾನ್ ಪುರಷರನ್ನು ಕೇವಲ ಒಂದು ಜಾತಿ, ಧರ್ಮ, ಮತಕ್ಕೆ ಸೀಮಿತಗೊಳಿಸದೆ ಇಡೀ ದೇಶ ಪ್ರಪಂಚ ಒಪ್ಪಿರುವುದರಿಂದ ಈ ಮಹಾನ್ ಪುರುಷರ ಜಯಂತಿಯನ್ನು ಸರ್ವರೂ ಒಗ್ಗಟ್ಟಾಗಿ ಆಚರಿಸಬೇಕೆಂದು ತಿಳಿಸಿದರು.
ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈಗಲೂ ಇದ್ದು, ಅಂದೂ ಇದ್ದರು. ಇಂದೂ ಸಹ ತೊಂದರೆಯನ್ನು ಕೊಡುತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ನಂಬಿಕೆ ಇಲ್ಲದೇ ಇರುವ ಪಟ್ಟಭದ್ರ ಹಿತಾಸಕ್ತಿಗಳು ನಶಿಸುತ್ತಾರೆ. ಆದರೆ, ಬಸವಣ್ಣನವರ ವಿಚಾರಧಾರೆಗಳು, ಸಿದ್ಧಾಂತ, ವಚನಗಳು ಪ್ರಪಂಚ ಇರುವವರೆಗೂ ಜೀವಂತವಾಗಿ ಇರುತ್ತವೆ ಎಂದು ತಿಳಿಸಿದರು.
ಬಸವಣ್ಣನವರ ಅನುಯಾಯಿಗಳಾದ ನಾವು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗೋಣ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ಖಜಾಂಚಿ ಸದಾಶಿವಪ್ಪ, ಅರುಣ್ ಕುಮಾರ್, ಜಗದೀಶ್ ಬಾಬು, ಬಿ.ಹೆಚ್. ಹರೀಶ್, ಕುಮಾರ್, ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.
Basavanna worked hard to bring the oppressed to the forefront of society.