ಚಿಕ್ಕಮಗಳೂರು: ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದ್ದು ಭಕ್ತರ ಹೃದಯದಲ್ಲಿ ದೇವರ ಪ್ರತಿಷ್ಠಾಪನೆ ಆಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪರಮ ಪೂಜ್ಯ ಶ್ರೀ ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.
ಅವರು ಇಂದು ಕಡೂರು ತಾಲ್ಲೂಕು ನಿಡಘಟ್ಟ ಗ್ರಾಮದಲ್ಲಿ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಲ್ಲೇಶ್ವರ ಸ್ವಾಮಿಯವರ ನೂತನ ದೇವಾಲಯ ಮತ್ತು ಗೋಪುರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ದೇವಸ್ಥಾನಕ್ಕೆ ೧೧೪೦ ಇಸವಿಯಲ್ಲಿ ನಿರ್ಮಿಸಿರುವ ಶಾಸನವಿದ್ದು, ದೇವಾಲಯ ನಿರ್ಮಾಣ ಮಾಡಲು ಜಮೀನು ದಾನ ಮಾಡಿದ್ದಾರೆ, ಈ ರೀತಿಯ ದೇವರಿಗೆ ಮೀಸಲಿಟ್ಟ ಜಮೀನನ್ನು ಅಪಹರಿಸಿದರೆ ಸಾವಿರಾರು ವರ್ಷಗಳ ಕಾಲ ಕ್ರಿಮಿ-ಕೀಟಗಳಾಗಿ ಜನಿಸುತ್ತಾರೆ ಎಂಬ ಉಲ್ಲೇಖ ಇದೆ ಎಂದು ಹೇಳಿದರು.
ಸರ್ಕಾರ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡಿದ ನಂತರ ಭೂಮಿಯನ್ನು ಅಪಹರಿಸಿರುವ ಉದಾಹಣೆಗಳಿವೆ ಇದು ಈ ಶಾಸನಕ್ಕೆ ತದ್ವಿರುದ್ದವಾಗಿರುವುದನ್ನು ಮನಗಾಣಬಹುದಾಗಿದೆ, ಕನ್ನಡ ನಾಡಿನಲ್ಲಿ ಹಳ್ಳಿ ಹೆಸರಿನಲ್ಲಿ ಇನ್ಷಿಯಲ್ ಇದೆ ಉದಾಹರಣೆಗೆ ಎಸ್.ಬಿದರೆ, ಕೆ.ಬಿದರೆ ಎಂಬುದು ಹಳ್ಳಿಗಳ ವೈಶಿಷ್ಟ್ಯ ಎಂದರು.
ಯಾವ ದೇವರ ಹೆಸರಿನಲ್ಲಿ ಹಿಂದೆ ಕೊಟ್ಟಿರುವ ಭೂಮಿಗೆ ಆ ದೇವರೆ ಮಾಲಿಕ ಎಂದು ಸುಪ್ರಿಮ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ, ಈ ನಿಟ್ಟಿನಲ್ಲಿ ಹಿಂದಿನವರ ಶ್ರದ್ಧಾ-ಭಕ್ತಿ ಕಣ್ಮರೆಯಾಗಿದೆ ಎಂದು ಭಾವಿಸುವುದಿಲ್ಲ, ಎಲ್ಲಾ ಕಾಲದಲ್ಲು ಸಜ್ಜನರು, ದುರ್ಜನರು ಇದ್ದಾರೆ ಈಗಾಗಿ ಹಿಂದಿನ ಕಾಲ ಚೆನ್ನಾಗಿತ್ತು ಈಗ ಎಲ್ಲಾ ಕೆಟ್ಟುಹೋಗಿದೆ ಎಂಬ ಬಗ್ಗೆ ದೋಷಾರೋಪಣೆ ಮಾಡುವುದಿಲ್ಲ ಎಂದು ಅವರು ಹೇಳಿದರು.
ಕೆರೆ ಕಟ್ಟಿಸು, ದೇವಾಲಯ ನಿರ್ಮಿಸು ಎಂಬ ಬಗ್ಗೆ ತಿಳಿಸಿದ ಶ್ರೀಗಳು, ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು, ವಿದ್ಯೆ ಕ್ಷೇತ್ರಗಳಾಗಿದ್ದವು ಇವುಗಳು ಭಾರತದ ಪರಂಪರೆಯಲ್ಲಿ ಬಂದಿವೆ ಎಂದು ಉಲ್ಲೇಖಿಸಿದರು.
ದೇವಾಲಯ ನಿರ್ಮಾಣದ ಜೊತೆಗೆ ಪ್ರೌಢಶಾಲೆಯಿಂದ ಕಾಲೇಜು ಕಟ್ಟಡವನ್ನು ನಿರ್ಮಿಸುವಂತೆ ಯುವಕರು ಮುಂದಾಗಬೇಕು, ಇದಕ್ಕೆ ಬೇಕಾಗುವ ಆರ್ಥಿಕ ನೆರವನ್ನು ಮಠದ ವತಿಯಿಂದ ನೀಡುವುದಾಗಿ ಭರವಸೆ ನೀಡಿದರು ಈ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ವಿದ್ಯಾ ದೇಗುಲವನ್ನು ನಿರ್ಮಿಸಲು ಯುವಕರು ಮುಂದಾಗಬೇಕು, ಕಟ್ಟಡ ಉದ್ಘಾಟನೆಗೆ ಮತ್ತೆ ಬರುವಂತೆ ನೀವು ಮಾಡಬೇಕೆಂದು ಹೃದಯ ತುಂಬಿ ಹಾರೈಸಿದರು.
ಮಗುವಿಗೆ ಜನ್ಮ ನೀಡಿದರೆ ಮಾತ್ರ ತಾಯಿ ಎಂಬ ಬಿರುದು ಸಿಗುತ್ತದೆ, ಮಗುವಿನಿಂದಾಗಿ ತಾಯಿಗೆ ಜೀವಂತ ಬದುಕಿನಲ್ಲಿ ಮರುಜನ್ಮ ಸಿಗುತ್ತದೆ, ದೇವರೆ ನಮಗೆ ಪ್ರಾಣ ಕೊಟ್ಟಿದ್ದರು ಪುನಃ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತೇವೆ ಈ ಹಿನ್ನಲೆಯಲ್ಲಿ ಕಲ್ಲಿಗೆ ದೇವರೆಂಬ ಸಂಸ್ಕಾರ ಬರುವುದು ನಿಮ್ಮಂತಹ ತಾಯಿಂದ ಎಂದು ಹೇಳಿದರು.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಧಾರ್ಮಿಕ ದತ್ತಿ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಮಠಮಾನ್ಯಗಳ ಬಗ್ಗೆ ಅಧ್ಯಯನ ಮಾಡುತ್ತಾ ಸಿರಿಗೆರೆ ಮಠಕ್ಕೆ ಬೇಟಿ ನೀಡಿದಾಗ ಅನೇಕ ವಿಶಿಷ್ಟ, ವೈಶಿಷ್ಟ್ಯಗಳನ್ನು ಕಂಡುಕೊಂಡೆ, ಸರ್ಕಾರಕ್ಕೆ ಸಮಾನಾಂತರವಾಗಿ ನ್ಯಾಯದಾನ ಮಾಡುವಂತಹ ಮಠವಿದ್ದರೆ ಅದು ಸಿರಿಗೆರೆ ಮಠ ಎಂದು ಸದನದಲ್ಲಿ ಪ್ರಸ್ತಾಪಿಸಿದೆ ಎಂದು ತಿಳಿಸಿದರು.
ರಾಜಕೀಯ ಧೃವೀಕರಣದಿಂದಾಗಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅನಿವಾರ್ಯ ಹಾಗೂ ಅಗತ್ಯ ಕಾರಣಗಳಿಂದಾಗಿ ಸ್ಪರ್ಧಿಸಬೇಕಾಯಿತು, ಈ ಬಗ್ಗೆ ಶ್ರೀಗಳ ಬಳಿಗೆ ಹೋಗಿ ಆಶೀರ್ವಾದ ಕೇಳಿದಾಗ ತಮ್ಮದೇ ಆದ ಕಟ್ಟುಪಾಡುಗಳು, ನಿಯಮಗಳು, ಸಂಸ್ಕೃತಿಯನ್ನು ಅಳವಡಿಸಿಕೊಂಡ ಶ್ರೀಗಳು ಆಶೀರ್ವದಿಸಿದರು ಎಂದು ಹೇಳಿದರು.
ಸಮಾಜದ ಸುಸ್ಥಿರವಾದಂತಹ ಚಟುವಟಿಕೆಗಳು ನಡೆದಾಗ ಮಾತ್ರ ಇಡೀ ಭಾರತವನ್ನು ಶಕ್ತಿಯುವ ರಾಷ್ಟ್ರವನ್ನಾಗಿ ಕಟ್ಟಲು ಸಾಧ್ಯ ಎಂಬುದು ಕಟು ಸತ್ಯ, ದೇಶದ ಗಡಿಭಾಗದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ, ಒಬ್ಬ ವ್ಯಕ್ತಿಯಾಗಿ, ಧರ್ಮವಾಗಿ, ಒಂದು ಜಾತಿಯಾಗಿ ನೀಡಬಾರದು, ಬದಲಾಗಿ ದೇಶವಾಗಿ ನೀಡಬೇಕು, ಆ ಹಿನ್ನಲೆಯಲ್ಲಿ ಸಮೃದ್ಧ, ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಭಾರತ ನಿರ್ಮಾಣವಾಗಬೇಕಾದರೆ, ನಾಗರೀಕರಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಭಾರತದ ಧರ್ಮ, ಸಂಸ್ಕಾರ, ಸಂಸ್ಕೃತಿ, ಧಾರ್ಮಿಕತೆ ಮೊದಲು ಉಳಿಯಬೇಕು ಇಲ್ಲದಿದ್ದರೆ ದೇಶದ ಭವಿಷ್ಯ ಮುಂದಿನ ದಿನಗಳಲ್ಲಿ ಕಷ್ಟಸಾಧ್ಯ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆ ವೈವಿದ್ಯತೆ ಕಾಣುವಂತ ದೇಶ ಪ್ರಪಂಚದಲ್ಲೇ ಭಾರತ ಮಾತ್ರ, ದೇವನೊಬ್ಬ ನಾಮ ಹಲವು, ಸಾವಿರಾರು ಸಂಸ್ಕಾರದಿಂದ ಕೂಡಿದ ಧರ್ಮಗಳಿರುವ ಈ ದೇಶದಲ್ಲಿ ಹಿಂದೆ ಘಜನಿ ಮೊಹಮ್ಮದ್, ಬ್ರಿಟೀಷರ ಆಳ್ವಿಕೆ ಇದ್ದರು ಭಾರತದಲ್ಲಿ ಸಂಸ್ಕಾರ ಧರ್ಮ ಉಳಿದಿದ್ದರೆ ವಿವಿಧತೆಯಲ್ಲಿ ವೈವಿದ್ಯೆತೆ ಕಾರಣ ಎಂದರು.
ದೇವಾಲಯದ ಗರ್ಭಗುಡಿಯೋಳಗೆ ತೆಗೆದುಕೊಂಡು ಹೋದ ನೀರು ತೀರ್ಥವಾಗುತ್ತದೆ, ಹಣ್ಣು ಹೂವು ಕಾಯಿ, ಪೂಜೆ ನಂತರ ಪ್ರಸಾದವಾಗುತ್ತದೆ ಈ ರೀತಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಪ್ರತಿಯೋಬ್ಬರು ಸಂಸ್ಕಾರವಂತ ಪ್ರಜೆಗಳಾಗಬೇಕು ಎಂದರು.
ನ್ಯಾಯಾಲಕ್ಕೆ ಹೋಗಲು ಭಕ್ತರಿಗೆ ತೊಂದರೆಯಾಗುತ್ತಿರುವುದನ್ನು ಮನಗೊಂಡು ಮಠದಲ್ಲಿ ಉಚಿತವಾಗಿ ಕೇಸು ನಡೆಸುವ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನ್ಯಾಯಪೀಠ ಸ್ಥಾಪಿಸಿದ್ದಾರೆ ಎಂದು ಬರ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ ಭಾರತ ದೇಶದಲ್ಲಿ ಅಮೋಘವಾದ ಪರಂಪರೆಯನ್ನು ನಮ್ಮ ಪೂರ್ವಿಕರು ಬಿಟ್ಟು ಹೋಗಿದ್ದಾರೆ ನೂರಾರು ಗುಡಿಗಳನ್ನು ಕಟ್ಟಿ, ನೂರಾರು ಹೆಸರುಗಳನ್ನುಟ್ಟು ಪೂಜಿಸಿದರು ಮೂಲತತ್ವ ಒಂದೇ ಆಗಿದೆ, ದೇವನೊಬ್ಬ ನಾಮ ಹಲವು ಎಂಬಂತೆ ದೇವರನ್ನು ಪೂಜಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಮರುಳುಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೆ ಇದ್ದ ಶ್ರೀಕಲ್ಲೇಶ್ವರಸ್ವಾಮಿ ಹಳೆಯ ದೇವಾಲಯವನ್ನು ಕೆಡವಿ ೨೦೧೫ ರಿಂದ ನೂತನ ದೇವಾಲಯ ನಿರ್ಮಿಸಲು ಅಡಿಗಲ್ಲು ಹಾಕಿದೆವು. ಇದೀಗ ಸರಕಾರ, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ೧.೫೦ ಕೋಟಿ ರೂ .ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಎಂದರು.
ಅಧ್ಯಕ್ಷತೆಯನ್ನು ಮಲ್ಲೇಗೌಡ ವಹಿಸಿದ್ದರು, ವೇದಿಕೆಯಲ್ಲಿ ಮಹಡಿಮನೆ ಸತೀಶ್, ಬಿ.ಹೆಚ್ ಹರೀಶ್, ಡಾ. ಆನಂದ್, ಡಾ. ವಿನಾಯಕ್, ಹೆಚ್.ಸಿ ಕಲ್ಮುರುಡಪ್ಪ, ಚಿದಾನಂದ್, ನಿರಂಜನ್, ಶೇಖರಪ್ಪ, ಕಾಂತರಾಜು, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.ಮಲ್ಲಿಕಾರ್ಜುನ್ ಸ್ವಾಗತಿಸಿ ಅರ್ಚನಾ ನಿಲಕಂಠಪ್ಪ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
Temples are a symbol of religious devotion.