ಚಿಕ್ಕಮಗಳೂರು: ಸಮಾಜದಲ್ಲಿ ವ್ಯಕ್ತಿಯನ್ನು ದೇಶಭಕ್ತಿ, ಸೇವೆ, ಶಿಸ್ತು, ಸಂಯಮದಿಂದ ಪರಿವರ್ತಿಸುವಂತೆ ಮಾಡುವುದೇ ಭಾರತ ಸೇವಾದಳದ ಪ್ರಮುಖ ಉದ್ದೇಶ ಎಂದು ಮಾಜಿ ಶಾಸಕ ಹಾಗೂ ಸೇವಾದಳದ ರಾಜ್ಯ ಸಮಿತಿ ಸದಸ್ಯ ಐ.ಬಿ. ಶಂಕರ್ ಹೇಳಿದರು.
ಅವರು ಇಂದು ಅಜಾದ್ ವೃತ್ತದ ಶಿಕ್ಷಕರ ಭವನದಲ್ಲಿ ಭಾರತ ಸೇವಾದಳದ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಭಾರತ ಸೇವಾದಳದ ೭೫ನೇ ಅಮೃತ ಮಹೋತ್ಸವ ಹಾಗೂ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೧೩೬ನೇ ನಾ.ಸು. ಹರ್ಡೀಕರ್ರವರ ಜನ್ಮದಿನ ಮತ್ತು ಭಾರತ ಸೇವಾದಳ ಸ್ಥಾಪನೆಯಾಗಿ ೭೫ ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ವೈಭವದಿಂದ ಆಚರಿಸಬೇಕಾಗಿತ್ತು. ಶಿಕ್ಷಕರ ಸಹಭಾಗಿತ್ವ ಇಲ್ಲದಿರುವುದು ವಿಷಾಧನೀಯ ಎಂದರು.
ಸರ್ಕಾರದ ಆದೇಶದಂತೆ ಜಾತಿಗಣತಿ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗಿಯಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿ ೧೯೫೦ ರಲ್ಲಿ ಭಾರತ ಸೇವಾದಳ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ನಾ.ಸು. ಹರ್ಡೀಕರ್ರವರ ಕಂಚಿನ ಪ್ರತಿಮೆ ಮಾಡಲಾಗಿದೆ ಇಂದು ನಾವೆಲ್ಲರು ತೆರಳಿ ಮಾಲಾರ್ಪಣೆ ಮಾಡಿದ್ದೇವೆ ಎಂದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ಸೇವಾದಳ ನಿವೃತ್ತ ದಳಪತಿ ಚಂದ್ರಶೇಖರ್ ಮಾತನಾಡಿ, ಇಂದು ಸಮಾಜದಲ್ಲಿ ಎಲ್ಲೆಡೆ ಶಿಸ್ತು, ಸಂಯಮ, ದೇಶಭಕ್ತಿ ಇರುವುದಕ್ಕೆ ಪ್ರಮುಖ ಕಾರಣ ಭಾರತ ಸೇವಾದಳ ಕೊಟ್ಟ ಕೊಡುಗೆ, ನಾ.ಸು ಹರ್ಡೀಕರ್ ಹಾಕಿಕೊಟ್ಟ ಮಾರ್ಗ ಎಂದು ಬಣ್ಣಿಸಿದರು.
೧೮೮೯ ರ ಮೇ.೭ ರಂದು ಜನಿಸಿದ ನಾ.ಸು. ಹರ್ಡೀಕರ್ರವರು ತಮ್ಮನ್ನು ದೇಶ ಸೇವೆಗೆ ತೊಡಗಿಸಿಕೊಂಡು ಬೋಲೋ ಭಾರತ್ ಮಾತಾಕಿ ಜೈ ಎಂಬ ಘೋಷಣೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ಸ್ವಾತಂತ್ರ ಹೋರಾಟಗಾರ ಎಂದು ಹೇಳಿದರು.
ದೇಶಾದ್ಯಂತ ಪ್ಲೇಗ್ ಮಹಾಮಾರಿ ರೋಗ ವ್ಯಾಪಕವಾಗಿ ಹರಡಿದ ಪರಿಣಾಮ ತಂದೆ-ತಾಯಿ ಸೇರಿದಂತೆ ಎಲ್ಲಾ ಬಂಧುಗಳನ್ನು ಕಳೆದುಕೊಂಡು ಹರ್ಡೀಕರ್ ಒಂಟಿಯಾಗಿ ಹುಬ್ಬಳ್ಳಿಯ ತನ್ನ ಮಾವನ ಮನೆಗೆ ಹೋದರು. ಅಲ್ಲಿಯೂ ಇರಲಾರದೆ ಹೊರಬಂದ ಅವರು ಬಡತನದಿಂದ ಬೇಸತ್ತಿದ್ದು, ಶಾಲೆಯ ಶುಲ್ಕ ಪಾವತಿಸಲು ತಾನು ದುಡಿದ ೧೨ ಪೈಸೆ ಹಣವನ್ನು ಮಾರ್ಗಮಧ್ಯೆ ಓರ್ವ ಮಹಿಳೆ ಅರೆಬೆತ್ತಲೆಯಲ್ಲಿ ಇರುವುದನ್ನು ಕಂಡು ಈ ಹಣವನ್ನು ಆಕೆಗೆ ನೀಡಿ ಹೋದ ಅವರೊಬ್ಬ ತ್ಯಾಗಜೀವಿ ಎಂದರು.
ಪ್ರಾಸ್ತಾವಿಕವಾಗಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಲೋಕೇಶ್ವರಾಚಾರ್ಯ ಮಾತನಾಡಿದರು. ಭಾರತ ಸೇವಾದಳ ಕಾರ್ಯದರ್ಶಿ ಹಂಪಯ್ಯ ಮೊದಲಿಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ನರೇಂದ್ರ ಪೈ, ಖಜಾಂಚಿ ಜಗದೀಶಾಚಾರ್, ವೀಣಾ ಶೆಟ್ಟಿ, ಜಸಂತಾ ಅನಿಲ್ಕುಮಾರ್, ಷೇರ್ ಅಲಿ, ಬಸವರಾಜ್, ಶಾಂತ್ಕುಮಾರ್, ಈರೇಗೌಡ, ಕಾಳಯ್ಯ, ಅಮೀದ್, ವೀರಭದ್ರಪ್ಪ, ಪ್ರಕಾಶ್ ಮೂರ್ತಿ, ಶ್ರೀನಿವಾಸ್, ಮಹೇಶ್ವರಪ್ಪ, ಜಗಧೀಶ್, ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು
Dr. N.S. Hardikar’s birthday celebration