ಚಿಕ್ಕಮಗಳೂರು: ಕಳೆದ ೧೦ ತಿಂಗಳ ಅವಧಿಯಲ್ಲಿ ಚಿಕ್ಕಮಗಳೂರು ಜನತೆಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ನಗರಸಭೆ ಅಧ್ಯಕ್ಷೆ ಸುಜಾತಶಿವಕುಮಾರ್ ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆ, ಇಂದು ನಗರಸಭೆಯಿಂದ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.
ಅಧ್ಯಕ್ಷೆಯಾಗಿ ನನ್ನ ಕರ್ತವ್ಯವನ್ನು ನಾನು ನಿರ್ವಹಣೆ ಮಾಡಿದ್ದೇನೆ. ಆ ಕೆಲಸ ನನಗೆ ತೃಪ್ತಿತಂದಿದೆ. ನನ್ನಂತೆಯೇ ಸಮಾಜಕ್ಕೆ ಸೇವೆ ಸಲ್ಲಿಸುವವರು ಇನ್ನೂ ಅನೇಕರಿದ್ದಾರೆ. ಹೀಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನನ್ನ ಸ್ಥಾನ ತೆರವು ಮಾಡಿಕೊಡುತ್ತಿದ್ದೇನೆ ಎಂದರು.
೧೦ ತಿಂಗಳ ಕಾಲ ಎಲ್ಲರೂ ಒಂದು ಕುಟುಂಬದವರಂತೆ ಇದ್ದೆವು. ನನ್ನ ಅವಧಿಯಲ್ಲಿ ೫.೫೦ ಕೋಟಿ ರೂ ಬಜೆಟ್ ಮಂಡಿಸಿದ್ದೆವು. ಅನೇಕ ಕೆಲಸಗಳು ಚಾಲ್ತಿಯಲ್ಲಿವೆ. ಈಗ ಸರಕಾರದ ೧೦ ಕೋಟಿ ರೂ.ಅನುದಾನ ಬಂದಿದೆ, ಮಳೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ೧೫ನೇ ಹಣಕಾಸು, ನಗರಸಭೆ ಅನುದಾನದಿಂದ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಮುಂದೆ ಬಂದವರು ಅದನ್ನು ಕಾರ್ಯನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.
ಕನ್ನಡ ಭವನವನ್ನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಲೈಬ್ರರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡುತ್ತೇನೆ. ಮುಂದೆಯೂ ನನ್ನ ವಾರ್ಡಿನ ಜನತೆಗೆ ನ್ಯಾಯ ಒದಗಿಸುತ್ತೇನೆ. ನಗರಸಭೆ ಎಲ್ಲ ಅಧಿಕಾರಿ, ಸಿಬ್ಬಂದಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಿದ್ದರಿಂದ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ರೇವಣಸಿದ್ದೇಶ್ವರ ಮಹಸಭಾದ ಜಿಲ್ಲಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದು ಅಲ್ಲೂ ಒಂದು ಸೇವೆ ಮಾಡಲು ನನಗೆ ಅವಕಾಶ ದೊರೆತಿದೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ಅಧ್ಯಕ್ಷರು ಅಲ್ಪ ಅವಧಿಯಲ್ಲೇ ಉತ್ತಮವಾದ ಸೇವೆ ಸಲ್ಲಿಸಿದ್ದಾರೆ. ಇವರು ಅಧ್ಯಕ್ಷರಾದ ನಂತರ ಪಾರ್ಕ್ ಉದ್ಘಾಟನೆ, ಡಿಜಿಟಲ್, ಓಪನ್ಏರ್ ಥೀಯೇಟರ್, ಐಡಿಎಸ್ಜಿ ಕಾಲೇಜ್ ಆವರಣದಲ್ಲಿ ೨ ಶೌಚಾಲಯ ಮತ್ತಿತರೆ ಅನೇಕ ಕಾಮಗಾರಿಗಳು ಉದ್ಘಾಟನೆ ನೆರವೇರಿವೆ ಎಂದು ಹೇಳಿದರು.
ಅಧ್ಯಕ್ಷೆ ಸುಜಾತ ಶಿವಕುಮಾರ್ ಅವಧಿಯಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ತಾಪನೆ ನೆರವೇರಿಸಿದ್ದೇವೆ. ಇದಲ್ಲದೆ ನಗರಸಭೆಯ ೮-೬೦ ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ ಮತ್ತಿತರೆ ಕಾಮಗಾರಿ ನಡೆಸಲಾಗಿದೆ. ಇದ್ದಷ್ಟು ಕಾಲ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನ ಮುಂದೆಯೂ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ನಗರಸಭೆ ಸದಸ್ಯರು, ಅಧಿಕಾರಿಗಳಾದ, ವ್ಯವಸ್ಥಾಪಕ ರವಿ, ಲತಾಮಣಿ, ಚಂದ್ರಶೇಖರ್, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಕಮಲಮ್ಮ, ಮಿಥುನ, ಸಿಬ್ಬಂದಿಗಳು ಉಪಸ್ಥಿತರಿದ್ದರು.
The service rendered to the people has brought satisfaction.