ಚಿಕ್ಕಮಗಳೂರು: : ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಕಳೆದರೂ ಪೂರ್ಣಗೊಳಿಸದಿರುವ ಬಗ್ಗೆ ಫಲಾನುಭವಿಗಳು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಲ್ಲಿ ಅಳಲು ತೋಡಿಕೊಂಡರು.
ಬುಧವಾರ ಬೆಳಗ್ಗೆ ನಗರದ ೧೧ ಮತ್ತು ೧೩ ರ ಶಂಕರಪುರ ಹಾಗೂ ಪಂಪಾನಗರಕ್ಕೆ ಭೇಟಿ ನೀಡಿ ಸ್ಲಂಬೋರ್ಡ್ನಿಂದ ಮಂಜೂರಾಗಿದ್ದ ಮನೆಗಳ ಕಾಮಗಾರಿ ಪರಿಶೀಸಿದ ವೇಳೆ ಫಲಾನುಭವಿಗಳಾದ ಆರ್ಮುಗಂ ಮತ್ತು ಶಾಂತಮ್ಮ ಎಂಬುವವರು ಮಾತನಾಡಿ ಗುಡಿಸಲುಗಳಲ್ಲಿ ವಾಸವಿದ್ದ ನಮಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಆದರೆ ೨ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡು ಬೀದಿಗೆ ಬಿದ್ದಿದ್ದೇವೆ ಎಂದು ಕಣ್ಣೀರಿಟ್ಟರು.
ಈ ವೇಳೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಸರ್ಕಾರ ಇದ್ದಾಗ ಬಡವರಿಗಾಗಿ ಸ್ಲಂ ಬೋರ್ಡ್ನಿಂದ ೨೫ ಮನೆಗಳನ್ನು ಮಂಜೂರು ಮಾಡಿಸಿದ್ದೆವು. ಅಂದು ಫಲಾನುಭವಿಗಳಿಂದ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಉಳಿದದ್ದನ್ನು ಸರ್ಕಾರ ಭರಿಸಿ ಮನೆ ಕಟ್ಟಿಸಿಕೊಡಲು ಟೆಂಡರ್ ಆಗಿ ಕೆಲವು ಮನೆಗಳನ್ನು ನಿರ್ಮಿಸಲಾಯಿತು. ಉಳಿದವಕ್ಕೆ ಈಗಿನ ಸರ್ಕಾರ ಹಣ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಪೂರ್ಣಗೊಂಡಿಲ್ಲ ಎಂದರು.
ಈ ನಡುವೆ ಸಿದ್ದರಾಮಯ್ಯ ಅವರ ಸರ್ಕಾರ ಸುತ್ತೋಲೆ ಹೊರಡಿಸಿ ಫಲಾನುಭವಿಗಳು ೧೦ ಸಾವಿರದ ಬದಲಿಗೆ ೧ ಲಕ್ಷ ರೂ. ಕಟ್ಟಬೇಕು ಎಂದು ಸೂಚನೆ ನೀಡಿದೆ. ಇದರಿಂದ ಮುಂಗಡ ಕಟ್ಟಲಾಗದ ಫಲಾನುಭವಿಗಳು ಬೀದಿಗೆ ಬಂದಿದ್ದಾರೆ. ಕೆಲವರು ಗುಡಿಸಲಿನಲ್ಲಿ, ಮರದಡಿಯಲ್ಲಿ, ಶಾಲೆಯಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಮನೆ ಕೆಡವಿ ಒಂದೂವರೆ ವರ್ಷವಾದರೂ ಇಂದಿಗೂ ಮನೆ ಪೂರ್ಣಗೊಂಡಿಲ್ಲ. ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಹಿಂದೆ ನಾವು ಗುಂಪು ಮನೆ ನಿರ್ಮಾಣಕ್ಕೆ ಉಪ್ಪಳ್ಳಿ ಬಳಿ ಮಂಜೂರಾದ ಯೋಜನೆಯೂ ಅರ್ಧಂಬರ್ಧವಾಗಿದೆ. ಡೋಂಗ್ರಿಗರೇಶಿಯಾ ಜನಾಂಗಕ್ಕೆಂದು ೭೦ ಮನೆಗಳನ್ನು ಅಲೆಮಾರಿ ಕೋಶದಿಂದ ಮಂಜೂರು ಮಾಡಿಸಿದ್ದೆವು. ಅವು ಇಂದಿನ ವರೆಗೆ ಪೂರ್ಣಗೊಳ್ಳದೆ ಅವರೂ ಬೀದಿಗೆ ಬಿದ್ದಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು, ಎಂಡಿ ಗಮನಕ್ಕೂ ತಂದಿದ್ದೇವೆ. ಅನುದಾನ ಇಲ್ಲ ಎನ್ನುತ್ತಾರೆ, ಗುತ್ತಿಗೆದಾರರು ಪರ್ಸೆಂಟೇಜ್ ಜಾಸ್ತಿ ಕೇಳುತ್ತಾರೆ ಎನ್ನುತ್ತಾರೆ. ಜನ ಬೀದಿಗೆ ಬಿದ್ದಿದ್ದಾರೆ. ಅವರ ಗೋಳು ಯಾರಿಗೆ ಹೇಳಬೇಕು. ಈಗ ಜನರನ್ನು ಕಟ್ಟಿಕೊಂಡು ಹೋರಾಟ ಮಾಡುವುದೊಂದೇ ದಾರಿ ಎಂದರು.
ಬಡವರ ಮನೆ ಕಟ್ಟುವುದರಲ್ಲೂ ಲಂಚ ಕೇಳಿದರೆ ಅವರ ಶಾಪ ತಟ್ಟದೇ ಇರುತ್ತದೆಯಾ, ಎಷ್ಟೆಂದು ಸಹಿಸುತ್ತಾರೆ. ಮನೆ ಕಟ್ಟಿಸಿಕೊಡುವ ಜವಾಬ್ದಾರಿ ಯಾರದ್ದು ಎಂದು ಪ್ರಶ್ನಿಸಿದರು.
ಸ್ಥಳೀಯ ನಗರಸಭೆ ಸದಸ್ಯ ಗೋಪಿ ಮಾತನಾಡಿ, ೧ ವರ್ಷ ೮ ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿ ಹೆಂಚಿನ ಮನೆ, ಶೀಟಿನ ಮನೆಯಲ್ಲಿದ್ದ ಬಡವರನ್ನು ತೆರವು ಮಾಡಿದ್ದರು. ಆದರೆ ಇಂದಿಗೂ ಅವರೆಲ್ಲರೂ ಬೀದಿಗೆ ಬಂದಿದ್ದಾರೆ. ಗುತ್ತಿಗೆದಾರರನ್ನು ಕೇಳಿದರೆ ನಮಗೆ ಬಿಲ್ ಆಗಿಲ್ಲ ನಾವೆಲ್ಲಿಂದ ಹಣ ತರಬೇಕು. ನಾವು ವಿಷ ಕುಡಿಯಬೇಕಾಗುತ್ತದೆ ಎನ್ನುತ್ತಾರೆ. ಬಡವರಿಗೆ ನಾವು ಏನು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದರು.
ಸ್ಥಳೀಯ ನಿವಾಸಿ ರಾಜೇಶ್ ಮಾತನಾಡಿ, ಸಿ.ಟಿ.ರವಿ ಶಾಸಕರಾಗಿದ್ದಾಗ ಎಂಟತ್ತು ತಿಂಗಳಲ್ಲಿ ೫೦ ಮನೆಗಳ ನಿರ್ಮಾಣ ಪೂರ್ಣಗೊಂಡಿತ್ತು. ಪಕ್ಕದ ವಾರ್ಡ್ನವರು ಇದೇ ನಿರೀಕ್ಷೆಯಿಂದ ೩೦ ರಿಂದ ೩೫ ಮಂದಿ ಮುಂಗಡ ಕಟ್ಟಿದರು ಆ ವೇಳೆಗೆ ಚುನಾವಣೆ ನಡೆದು ಹೊಸ ಸರ್ಕಾರ ಬಂತು. ನಂತರ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಗುತ್ತಿಗೆದಾರರನ್ನು ಕೇಳಿದರೆ ಈಗಿನ ಸರ್ಕಾರ ಪರ್ಸೆಂಟೇಜ್ ಹೆಚ್ಚು ಕೇಳುತ್ತಾರೆ. ಎಲ್ಲಿಂದ ತರುವುದು ಎನ್ನುತ್ತಾರೆ ಎಂದು ದೂರಿದರು.
ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಎಸ್ಡಿಎಂ ಮಂಜುನಾಥ್, ಶಶಿಧರ್, ಜಿ.ಶಂಕರ್, ಜಗಧೀಶ್, ಕುಮಾರ್, ಮುನಿ, ರವಿ ಇತರರು ಇದ್ದರು.
Congress government is playing with the lives of the poor