ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ಮನೆ ಮನಗಳಲ್ಲಿ ಕನ್ನಡ ಅಭಿಯಾನವನ್ನು ಅ.೨೯ ರಂದು ಬುಧವಾರ ಚಿಕ್ಕಮಗಳೂರು ನಗರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಐಸಿರಿ ಫೌಂಡೇಶನ್ ಅಧ್ಯಕ್ಷ ಹಾಗೂ ಕ.ಸಾ.ಪ ತಾಲ್ಲೂಕು ಯುವಘಟಕದ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಐಸಿರಿ ಫೌಂಡೇಶನ್ ಮತ್ತು ಕ.ಸಾ.ಪ ತಾಲ್ಲೂಕು ಯುವ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ೬೯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ಕನ್ನಡ ಅಭಿಯಾನ ಚಾಲನೆಗೊಳ್ಳಲಿದೆ ಎಂದರು.
ನಟ ಪುನೀತ್ ರಾಜ್ ಕುಮಾರವರ ಪುಣ್ಯಸ್ಮರಣೆಯ ದಿನದಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು ನಗರದ ನಾಗರೀಕರು ತಮ್ಮ ಕನ್ನಡಾಭಿಮಾನವನ್ನು ತಮ್ಮ ಮನೆಮನೆಗಳಲ್ಲಿ ಕುಟುಂಬ ಸಮೇತರಾಗಿ ಕನ್ನಡ ಧ್ವಜ ಹಾರಿಸಿ ಫೋಟೋ ಅಥವಾ ವೀಡೀಯೋವನ್ನು ಐಸಿರಿ ಕಛೇರಿಯ ವಾಟ್ಸಪ್ ಸಂಖ್ಯೆ:೭೯೭೫೪೦೮೧೬೨ ಕ್ಕೆ ಸ್ವ-ವಿವರ ಹಾಗೂ ಸ್ಥಳದೊಂದಿಗೆ ಕಳಿಸಿಕೊಡುವಂತೆ ಮನವಿ ಮಾಡಿದರು .
ಐಸಿರಿ ಫೌಂಡೇಶನ್ ಸಂಸ್ಥೆಯು ಭರವಸೆ ಮತ್ತು ಸುಧಾರಣೆ ಕಾರ್ಯದ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ಈಗಾಗಲೆ ಸಮಾಜಮುಖಿ ಕಾರ್ಯಗಳಲ್ಲಿ ದಿಟ್ಟ ಹೆಜ್ಜೆಗಳನಿಟ್ಟು ಯೋಜನೆಯತ್ತ ಮುನ್ನೆಡೆಸುತ್ತಿದೆ ಐಸಿರಿ ಪರ್ಸ್ಪೆಕ್ಟಿವ್ ಎಂಬ ಆಯಾಮದಡಿಯಲ್ಲಿ ಜ್ಞಾನ ಶಿಬಿರ ನಡೆಸಿಕೊಂಡು ಬರುತ್ತಿದೆ ಎಂದರು.
ಐಸಿರಿ ಸಸ್ಟೇನೆಬಿಲಿಟಿ ಎಂಬ ಆಯಾಮದಡಿಯಲ್ಲಿ ಹಸಿರು ಸಮರ್ಥನೆಯ ಭವಿಷ್ಯಕ್ಕೆ ಮತ್ತು ಐಸಿರಿ ಇಂಡಿಯಾ ಆಯಾಮದಡಿಯಲ್ಲಿ ನಾಗರೀಕ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸುತ್ತಿರುವ ಮನೆಮನಗಳಲ್ಲಿ ಕನ್ನಡ ಅಭಿಯಾನ ಕಾರ್ಯಕ್ರಮವನ್ನು ಸರ್ವರೂ ಆಚರಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ ತಾಲ್ಲೂಕು ಯುವಘಟಕದ ಮುಖಂಡರುಗಳಾದ ವೀಣಾ ಮಲ್ಲಿಕಾರ್ಜುನ್ , ವಿಜಯಲಕ್ಷ್ಮೀ, ರೂಪ ನಾಯಕ್ , ಸಚಿನ್ ಸಿಂಗ್ ಉಪಸ್ಥಿತರಿದ್ದರು.
Kannada campaign in homes on October 29th
