ಚಿಕ್ಕಮಗಳೂರು: ಜೂ.೯ ರಂದು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಐತಿಹಾಸಿಕ ಸಮಾವೇಶಕ್ಕೆ ಎಲ್ಲಾ ರೈತ ಭಾಂದವರು, ನಿವೇಶನರಹಿತರು ಮತ್ತು ಸಾರ್ವಜನಿಕರು ಸಹಕಾರ ನೀಡಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್ ಕುಮಾರ್ ಹೇಳಿದರು
ಡೀಮ್ ಫಾರೆಸ್ಟ್, ಸೆಕ್ಷನ್ 4(1), ಫಾರಂ 57, ನಿವೇಶನ ಸಮಸ್ಯೆ ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ. ಅಂತರದ ಒಳಗಿನ ಮಂಜೂರಾತಿ ಭೂಮಿಗಳ ಸಮಸ್ಯೆ, ರೈತರ ರಸ್ತೆ ಸಮಸ್ಯೆ ಸೇರಿದಂತೆ ಇನಾಂ ಭೂಮಿ, ಸೊಪ್ಪಿನ ಬೆಟ್ಟ ರೈತರ, ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕಾಗಿ ನಗರದ ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಬಂದು ಆಜಾದ್ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜಿಲ್ಲೆಯ ನಮ್ಮ ಸಹಭಾಗ ಸಂಘಟನೆಗಳಾದ ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ರೈತ ಹಿತರಕ್ಷಣಾ ಶೃಂಗೇರಿ ಕ್ಷೇತ್ರ ಸಮಿತಿ, ಅಡಿಕೆ ಬೆಳೆಗಾರರ ಸಂಘ ಕೊಪ್ಪ, ಸಹ್ಯಾದ್ರಿ ಬೆಳೆಗಾರರ ಸಂಘ, ಬಾಳೆಹೊನ್ನೂರು, ರೈತ ಹಿತರಕ್ಷಣಾ ಸಮಿತಿ, ಮೂಡಿಗೆರೆ ಮತ್ತು ಒಕ್ಕಲಿಗ ಮಹಿಳಾ ಮಂಡಳಿ ಹಾಗೂ ಇತರೇ ಮಹಿಳಾ ಮಂಡಳಿಗಳು ಸೇರಿದಂತೆ ಎಲ್ಲಾ ರೈತ ಮುಖಂಡರು ಸಮಾವೇಶಕ್ಕೆ ತಯಾರಿ ನಡೆಸಲಾಗಿದೆ ಎಂದರು.
ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ರೈತರ ಸಮಸ್ಯೆಗಳ ಅಹವಾಲಗಳನ್ನು ಆಲಿಸಿ, ಸಮಸ್ಯೆಗೆ ಸೂಕ್ತ ಪರಿಹಾರಕ್ಕಾಗಿ ಚಿಂತನೆ ನಡೆಸುವ ಸಮಾವೇಶ ಆಗಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಪಕ್ಷಾತೀತವಾಗಿ ಬೆಂಬಲ ನೀಡಿದ್ದು, ಇದರಿಂದ ಸುಮಾರು 60 ವರ್ಷದ ಸಮಸ್ಯೆಗೆ ಪರಿಹಾರ ದೊರಕುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಸಂಚಾಲಕ ರಘು, ಪೂರ್ಣೇಶ್ ಮೈಲಿಮನೆ, ಈಶ್ವರ್, ಕುಮಾರ್, ರವಿ ಕುಮಾರ್ ಉಪಸ್ಥಿತರಿದ್ದರು.
Huge farmers’ convention in Chikkamagaluru city on June 9th