ಚಿಕ್ಕಮಗಳೂರು: ಸರಿಯಾದ ಹಣಕಾಸಿನ ವ್ಯವಸ್ಥೆ ಇದ್ದಾಗ ಮಾತ್ರ ಉದ್ಯಮ ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ದೊರೆಯುವ ಸಾಲಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಉದ್ಯಮಿ ಮುನೀರ್ ಅಹಮದ್ ಹೇಳಿದರು.
ಅವರು ಇಂದು ಡಿಐಸಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ ಕಾಪರ್ ಸಲ್ಫೇಟ್ ಕೇರಳದಿಂದ ರಾಜ್ಯಕ್ಕೆ ಬರುತ್ತಿತ್ತು. ಇದು ದುಬಾರಿಯಾಗಿದ್ದನ್ನು ಮನಗಂಡು ಉದ್ಯಮವನ್ನು ಸ್ಥಾಪಿಸಿ ಟನ್ಗೆ ೫ ಸಾವಿರ ರೂ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಿದ ಪರಿಣಾಮ ಉದ್ಯಮ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಇಂತಹ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ ಎಂದು ಸಲಹೆ ನೀಡಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಾಂತರಾಂ ಹೆಗಡೆ ಮಾತನಾಡಿ, ಹೇಳಿದರೆ ಕೇಳಿದವರಿಗೆ ಲಾಭ ಎಂಬಂತೆ ಇಂದಿನ ಕಾರ್ಯಾಗಾರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದು, ಅವರ ಉಪಯುಕ್ತವಾದ ಮಾಹಿತಿಗಳನ್ನು ಪಡೆದು ಉದ್ಯಮಶೀಲರಾಗಿ ಎಂದು ಹೇಳಿದರು.
ಕಾಫಿ ಡೇ ಸಿದ್ಧಾರ್ಥ ಹೆಗ್ಡೆ ಅವರು ದೇಶಾದ್ಯಂತ ಉದ್ಯೋಗ ಕಲ್ಪಿಸುವಲ್ಲಿ ಹೆಸರು ಮಾಡಿದ್ದು, ಈ ಸಭೆಯಲ್ಲಿ ಬ್ಯಾಂಕಿನ ಉದ್ಯೋಗಿಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದು, ಹಿಂದೆ ವ್ಯಾಪಾರ ಪರವಾನಗಿ, ಸಾಲಕ್ಕೆ ವರ್ಷಾನುಗಟ್ಟಲೆ ಸುತ್ತಾಡಬೇಕಿತ್ತು, ಇಂದು ಸೌಲಭ್ಯ ನೀಡಲು ಅವರೇ ಆಗಮಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಕೇಂದ್ರಸರ್ಕಾರ ರ್ಯಾಂಪ್ ಯೋಜನೆಯಡಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿದ್ದು, ಅಂತಿಮ ವರ್ಷದ ತಾಂತ್ರಿಕ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದ್ದು, ಸ್ವ-ಉದ್ಯೋಗ ಸ್ಥಾಪನೆಗೆ ಬೇಕಾದ ಜ್ಞಾನವನ್ನು ಕೊಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಹೇಶ್, ಕುಮಾರ್, ರಘು ಪ್ರಸಾದ್, ಚಿಕ್ಕಪ್ಪ ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದರು.
Get a bank loan and start a business