ಚಿಕ್ಕಮಗಳೂರು: ರಾಜ್ಯದಲ್ಲಿ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅರ್ಚಕರಿಗೆ ನೀಡಲಾಗುತ್ತಿದ್ದ ೧೦ ವರ್ಷಗಳ ಸಂಬಳವನ್ನು ವಾಪಸ್ ನೀಡುವಂತೆ ಸರ್ಕಾರದಿಂದ ಎಲ್ಲ ಅರ್ಚಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹೌದು, ರಾಜ್ಯ ಸರ್ಕಾರ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನ ವಾಪಸ್ ಕೇಳಿದೆ. ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತದಿಂದ ವೇತನ ತಡೆ ಹಿಡಿದು ನೋಟಿಸ್ ನೀಡಲಾಗಿದೆ.
ನಿಮ್ಮ ದೇವಾಲಯದ ಆದಾಯ ಕಡಿಮೆಯಾಗಿದೆ. ಆದರೆ ನಿಮಗೆ ಸರ್ಕಾರದಿಂದ ಸಂಬಳ ಹೆಚ್ಚು ನೀಡಲಾಗಿದೆ. ಆದ್ದರಿಂದ ನೀವು ಮಾಸಿಕ ೪,೫೦೦ ರೂಪಾಯಿಯಂತೆ ಕಳೆದ ೧೦ ವರ್ಷದ ಸಂಬಳದ ಹಣವನ್ನ ವಾಪಸ್ ನೀಡಲು ಸೂಚನೆ ನೀಡಲಾಗಿದೆ.
ಇನ್ನು ಹಿರೇಮಗಳೂರು ಕಣ್ಣನ್ ಅವರು ಹಲವು ವರ್ಷಗಳಿಂದ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದಾರೆ. ಹಿರೇಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ ಕಣ್ಣನ್ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು ೭,೫೦೦ ಸಂಬಳವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆಮ ನಿಮ್ಮ ದೇವಾಲಯದ ಆದಾಯ ಕಡಿಮೆ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡಬೇಕಾಗಿದೆ. ನಿಮ್ಮ ವೇತನ ತಡೆ ಹಿಡಿಯಲಾಗಿದ್ದು, ಈ ನೋಟಿಸ್ ತಲುಪಿದ ಕೂಡಲೇ ಹಣ ವಾಪಸ್ ನೀಡುವಂತೆ ತಿಳಿಸಲಾಗಿದೆ. ಮಾಸಿಕ ೭೫೦೦ ರೂಪಾಯಿ ನೀಡಿದ ಸಂಬಳದಲ್ಲಿ ೪೫೦೦ ವಾಪಸ್ ನೀಡಬೇಕು.ಕಳೆದ ೧೦ ವರ್ಷದ ೪,೭೪,೦೦೦ ರೂಪಾಯಿ ವಾಪಸ್ ನೀಡುವಂತೆ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಲ್ಲ ಜಿಲ್ಲೆಗಳಲ್ಲಿ ಆದಾಯ ಕಡಿಮೆಯಿರುವ ದೇವಸ್ಥಾನಗಳ ಅರ್ಚಕರಿಗೆ ಜಿಲ್ಲಾಡಳಿತದಿಂದ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ, ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ಅವರಿಂದ ಹಿರೇಮಗಳೂರು ಕಣ್ಣನ್ ಅವರಿಗೂ ನೋಟಿಸ್ ನೀಡಲಾಗಿದೆ.
ಇನ್ನು ಕನ್ನಡದ ಪಂಡಿತ, ಸಾಹಿತಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ಅವರು ಕಳೆದ ೫೦ ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಈಗ ಸರ್ಕಾರ ಏಕಾಏಕಿ ನೀಡಿರುವ ನೋಟಿಸ್ ನೋಡಿ ಆತಂಕಗೊಂಡಿದ್ದಾರೆ.
Hiremagaluru Kannan notice issued