July 27, 2024

ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ

0
ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್‍ಯಕ್ರಮ

ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್‍ಯಕ್ರಮ

ಚಿಕ್ಕಮಗಳೂರು:  ವರ್ತಮಾನದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕ ಪ್ರೊ.ವಿಷ್ಣುಮೂರ್ತಿ ನುಡಿದರು.

ಐಡಿಎಸ್‌ಜಿ ಸರ್ಕಾರಿ ಕಾಲೇಜು, ಕಾಲೇಜು ಶಿಕ್ಷಣ ಇಲಾಖೆ, ವಾದ್ವಾನಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮತ್ತು ಶನಿವಾರ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ್ಯ ತರಬೇತಿ ಕಾರ್‍ಯಕ್ರಮ ಹಾಗೂ ಜಿಲ್ಲೆಯ ಬೋಧಕರ ತರಬೇತಿ ಕಾರ್‍ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಿಲ್ಲೊಂದು ರೀತಿಯ ಕೌಶಲ್ಯ ಹೊಂದಿರುತ್ತಾನೆ. ಅದನ್ನು ಗುರುತಿಸಿ ಪೋಷಿಸುವ ಕೆಲಸ ಆಗಬೇಕು. ನಾಲ್ಕುಗೋಡೆಗಳ ನಡುವೆ ಕಲಿಸುವ ಶಿಕ್ಷಣದಿಂದ ಇಂದು ಉದ್ಯೋಗಾವಕಾಶ ಗಳಿಸುವುದು ಕಷ್ಟಕರ. ವರ್ತಮಾನದ ಸ್ಪರ್ಧೆಗಳಿಗೆ ಅಗತ್ಯವಾದ ಕೌಶಲ್ಯಗಳ ಮೂಲಕ ಯುವಜನರನ್ನು ಸಜ್ಜುಗೊಳಿಸಬೇಕಾಗಿದೆ. ಸಂವಹನಕೌಶಲ್ಯ, ಮಾನಸಿಕ ಸಾಮರ್ಥ್ಯದ ಕುಶಲತೆಗಳು, ವಿಶ್ಲೇಷಣಾತ್ಮಕತೆ, ಆಧುನಿಕ ತಂತ್ರಜ್ಞಾನ ಮತ್ತಿತರ ಸಂಗತಿಗಳಲ್ಲಿ ವರ್ತಮಾನದ ಉದ್ಯೋಗಕ್ಕೆ ತಕ್ಕಂತೆ ಸಿದ್ಧತೆಗಳಿ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿ ಹಿಂಜರಿಕೆ, ಅಳುಕು ಇರುತ್ತದೆ. ಇವುಗಳಿಂದ ಹೊರಬಂದು ಔದ್ಯೋಗಿಕ ರಂಗದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಸ್ವಾಭಿಮಾನವನ್ನು ಪ್ರೇರೇಪಿಸುವ ಕಾರ್‍ಯವಾಗಬೇಕೆಂದು ಅವರು ನುಡಿದರು.

ಅಧ್ಯಾಪಕರಲ್ಲಿ ಸಮರ್ಪಣಾ ಮನೋಭಾವ ಜಾಗೃತಗೊಳ್ಳಬೇಕು. ಇದರ ಮಹತ್ವವನ್ನು ಅರ್ಥಮಾಡಿಕೊಂಡು ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿಯುತ ಹಾಗೂ ಸಾರ್ಥಕ ಕೆಲಸ ಆಗಬೇಕಾಗಿದೆ ಎಂದ ಪ್ರೊ.ವಿಷ್ಣುಮೂರ್ತಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತವಾಗಿ ತರಬೇತಿ ನೀಡಿ, ಬದುಕು ಕಟ್ಟಿಕೊಳ್ಳಲು ನೆರವು ನೀಡುವ ಪ್ರಯತ್ನವಿದು. ಪದವಿಯ ಶಿಕ್ಷಣದ ನಂತರ ಉದ್ಯೋಗಾವಕಾಶಗಳಿಗೆ ಅಣಿಗೊಳಿಸುವ ಕಾರ್ಯವಿದು ಎಂದ ಅವರು, ಪ್ರಸ್ತುತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ಅಧ್ಯಕ್ಷತೆವಹಿಸಿದ್ದ ಐಡಿಎಸ್‌ಜಿ ಪದವಿ ಕಾಲೇಜು ಪ್ರಾಂಶುಪಾಲೆ ಕೆ.ಸಿ.ಚಾಂದಿನಿ ನುಡಿದರು.

ವಾದ್ವಾನಿ ಫೌಂಡೇಶನ ಮುಖ್ಯ ತರಬೇತುದಾರರಾದ ಸ್ವಾತಿಪುತ್ರನ್ ಉದ್ಯೋಗ ಕೌಶಲ್ಯ ತರಬೇತಿಗೆ ಅಗತ್ಯವಾದ ಪೂರ್ವ ತಯಾರಿ ಕುರಿತಂತೆ ಮಾಹಿತಿ ನೀಡಿದರು. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿಯ ವಿಷೇಶಾಧಿಕಾರಿ ಡಾ.ಎ.ಅನಿತಾ, ಐಕ್ಯೂಎಸಿ ಸಂಯೋಜಕಿ ಡಾ.ಕಲಾವತಿ, ಹಿರಿಯ ಉಪನ್ಯಾಸಕರಾದ ಡಾ.ಎಸ್.ಇ.ನಟರಾಜ್ ಮತ್ತಿತರರು ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಸಂವಾದಿಸಿದರು.

ಜಿಲ್ಲೆಯ ಸರ್ಕಾರಿ ಪದವಿಕಾಲೇಜು ಮತ್ತು ಪಾಲಿಟೆಕ್ನಿಕ್‌ನ ೨೫ಬೋಧಕರು ಎರಡುದಿನಗಳ ಕಾರ್‍ಯಾಗಾರದಲ್ಲಿ ಭಾಗವಹಿಸಿದ್ದರು. ಪದವಿ ವಿಭಾಗ ಉದ್ಯೋಗ ಕೋಶದ ಸಂಚಾಲಕ ಡಾ.ಆರ್.ರಾಧಾಕೃಷ್ಣನ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಉದ್ಯೋಗಕೋಶದ ಸಂಯೋಜಕ ಡಾ.ಕೆ.ಎಂ.ಜಗದೀಶ್ ವಂದಿಸಿದರು.

Job Skill Training Program organized by IDSG Government College

About Author

Leave a Reply

Your email address will not be published. Required fields are marked *