ಚಿಕ್ಕಮಗಳೂರು: ಗಡಿ ಕಾಯುವ ಸೈನಿಕರು ಮತ್ತು ಆರ್ಥಿಕತೆಗೆ ಬೆನ್ನೆಲುಬಾದ ಉದ್ಯಮಶೀಲರಿಂದ ಸುಭದ್ರಭಾರತ ನಿರ್ಮಾಣ ಸಾಧ್ಯ ಎಂದು ಲೈಫ್ಲೈನ್ ಫೀಡ್ಸ್ ಆಡಳಿತ ನಿರ್ದೇಶಕ ಕಿಶೋರಕುಮಾರ್ ಹೆಗ್ಡೆ ವ್ಯಾಖ್ಯಾನಿಸಿದರು.
ಎಂಎಲ್ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.
ಸೈನಿಕರು ದೇಶವನ್ನು ಸಂರಕ್ಷಿಸುತ್ತಿರುವುದರಿಂದ ನಾವು ಸುರಕ್ಷಿತವಾಗಿ ಜೀವನ ಸಾಗಿಸುತ್ತಿದ್ದೇವೆ. ವ್ಯವಹಾರಸ್ಥರ ವಹಿವಾಟಿಯಿಂದ ದೇಶದಲ್ಲಿ ಆರ್ಥಿಕತೆಯ ಸಂಚನಲವಾಗುತ್ತಿದೆ. ದೇಶದ ಬೆಳವಣಿಗೆಗೆ ಇವರಿಬ್ಬರ ಪಾತ್ರ ಅಮೂಲ್ಯ. ವಿದ್ಯಾರ್ಥಿ ಯುವಜನರಿಗೆ ಚಲನಚಿತ್ರ ನಾಯಕ ನಾಯಕಿಯರು ಮಾದರಿಯಾಗುವ ಬದಲು ಯಶಸ್ವಿ ವಾಣಿಜ್ಯೋಮಿಗಳು ಮಾದರಿಯಾದರೆ ದೇಶದ ಸ್ಥಿತಿ ಉತ್ತಮವಾಗುತ್ತದೆ ಎಂದರು.
ಪಿಯು ಡಿಡಿಪಿಐ ಪುಟ್ಟಾನಾಯ್ಕ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಶಿಕ್ಷಣಕ್ಷೇತ್ರ ಇಂದು ವಾಣಿಜ್ಯೀಕರಣಗೊಳ್ಳುತ್ತಿರುವುದು ವಿಷಾದನೀಯ. ಸಮಾಜದ ಎಲ್ಲ ರಂಗಗಳಿಗೂ ಶಿಕ್ಷಣ ಕ್ಷೇತ್ರವೇ ಮೂಲವೆಂಬುದನ್ನು ಮರೆಯಬಾರದು. ಕರ್ತವ್ಯಶೀಲತೆಯೆ ಮಾನವನಿಗೆ ರಾಜಮಾರ್ಗ. ಪರಿಸರ ಸನ್ನಿವೇಶಗಳು ನಮ್ಮನ್ನು ರೂಪಿಸುತ್ತವೆ ಎಂದರು.
ದ್ವಿತೀಯಪಿಯು ಪರೀಕ್ಷೆಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಳಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ನಿವೃತ್ತ ಪ್ರಾಂಶುಪಾಲರುಗಳಾದ ಚನ್ನಬಸಪ್ಪ, ಕೆ.ಎಸ್.ಶೇಷಾದ್ರಿ, ಚಂದ್ರಕಾಂತಪಾಟೀಲ, ಕೆಂಪಸಿದ್ಧಯ್ಯ, ರೇವಣ್ಣ, ಜಯಶ್ರೀ, ಶಿವಮೂರ್ತಿ ಅವರ ಸೇವೆಯನ್ನು ಸ್ಮರಿಸಿ ಸಂಘದ ಪದಾಧಿಕಾರಿಗಳು ಗೌರವ ಸಮರ್ಪಿಸಿದರು.
ಪಿಯು ಉಪನಿರ್ದೇಕರ ಕಛೇರಿ ನವೀಕರಣಕ್ಕೆ ನೆರವುನೀಡಿದ ಕಿಶೋರಕುಮಾರಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಅರ್ಥಶಾಸ್ತ್ರದಲ್ಲಿ ಶೇ.೧೦೦ಅಂಕಪಡೆದ ಜಿಲ್ಲೆಯ ೧೧ವಿದ್ಯಾರ್ಥಿಗಳಿಗೆ ತಲಾ ೨,೦೦೦ರೂ.ಗಳ ನಗದು ಬಹುಮಾನವನ್ನು ಯಶೋಧಮ್ಮಗುರುಮೂರ್ತಿ ನೀಡಿದರು. ಜುಡೋ ರಾಷ್ಟ್ರೀಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಿಂಚರಾಳನ್ನು ಗೌರವಿಸಲಾಯಿತು.
ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸೋಮಶೇಖರ್ ಸ್ವಾಗತಿಸಿ, ಅಧ್ಯಕ್ಷ ಉಮಾಮಹೇಶ್ವರಯ್ಯ ಪ್ರಾಸ್ತಾವಿಸಿದರು. ಕಳಸಾಪುರ ಪ.ಪೂ.ಕಾಲೇಜು ಪ್ರಾಂಶುಪಾಲ ಎಚ್.ಎಂ.ನಾಗರಾಜರಾವ್ಕಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿದ್ದು, ಬಾಳೆಹೊನ್ನೂರು ಬಿಜಿಎಸ್ ಪ್ರಾಂಶುಪಾಲ ಸುರೇಶ್ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ತಸ್ನಿಮ್ಫಾತಿಮಾ, ಮಿನಿಥಾಮಸ್, ತೇಜಸ್ವಿನಿ, ರವಿಕಾಂತ್ ಮತ್ತಿತರರು ವೇದಿಕೆಯಲ್ಲಿದ್ದರು.
Building Subhadrabharat through entrepreneurship