ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಭಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ ಪ್ರಕರಣಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಕಾಫಿ ನಾಡಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಮಳೆ ಸಂಪೂರ್ಣವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಲಾಗಿದೆ.
ಮಳೆಗಾಲದಲ್ಲಿ ಕಾಫಿನಾಡಿನ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಈ ಬಾರಿ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದ್ದರಿಂದಾಗಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಇನ್ನು ಉಳಿದ ಪ್ರವಾಸಿ ತಾಣಗಳಿಗೆ ಸಧ್ಯಕ್ಕೆ ಯಾರೂ ಆಗಮಿಸದಂAತೆ ಮನವಿ ಮಾಡಲಾಗಿತ್ತು.
ಕಾಫಿನಾಡಿಗೆ ಅದರಲ್ಲೂ ಚಂದ್ರದ್ರೋಣ ಪರ್ವತಕ್ಕೆ ಬರುವ ಪ್ರವಾಸಿಗರೇ ಹೆಚ್ಚಿದ್ದರು. ಇದೀಗ ಬುಧವಾರದಿಂದ ದತ್ತಪೀಠ ಹೊರತುಪಡಿಸಿ ಉಳಿದ ಭಾಗಗಳಿಗೆ ಪ್ರವಾಸಿಗರು ತೆರಳಲು ಅವಕಾಶ ಮಾಡಿಕೊಡಲಾಗಿದೆ. ಮುಳ್ಳಯ್ಯನ ಗಿರಿ ಮಾರ್ಗದ ಸೀತಾಳಯ್ಯನ ಗಿರಿವರೆಗೆ ಮಾತ್ರ ಪ್ರವಾಸಿಗರು ವಾಹನದಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಂದ ಪ್ರವಾಸಿಗರು ಮುಳ್ಳಯ್ಯನ ಗಿರಿಗೆ ತೆರಳಬೇಕು ಎಂದಾದಲ್ಲಿ ಟ್ರಕ್ಕಿಂಗ್ ಮೂಲಕವೇ ಹೋಗುವಂತೆ ಸೂಚನೆ ನೀಡಲಾಗಿದೆ.
ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನ ಗಿರಿಗೆ ತೆರಳುವ ರಸ್ತೆಗೆ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು, ಇಲ್ಲಿ ವಾಹನ ಚಾಲನೆ ಮಾಡುವುದು ಅಪಾಯಕಾರಿಯಾಗಿದೆ. ಇದೇ ಕಾರಣದಿಂದಲೇ ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನ ಗಿರಿಗೆ ಪ್ರವಾಸಿಗರು ಕಾಲ್ನಡಿಗೆಯಲ್ಲಿಯೇ ತೆರಳುವಂತೆ ಸೂಚನೆ ನೀಡಲಾಗಿದೆ.
Restrictions on tourist spots will be lifted in the district from today