ಚಿಕ್ಕಮಗಳೂರು: ಮೈಸೂರಿನ ನೃತ್ಯಗಿರಿ ಪ್ರದರ್ಶನ ಕಲೆಗಳ ಸಂಶೋಧನಾ ಕೇಂದ್ರ ಮತ್ತು ಆರಾಧನಾ ಕಲ್ಚರಲ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅ.೨೭ ರಂದು ಭಾನುವಾರ ಸಂಜೆ ೬ ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಡಾ. ಕೃಪಾ ಪಡ್ಕೆ ಅವರ ಶಿಷ್ಯೆ ಡಾ. ವರ್ಷಿಣಿ. ಎಸ್ ಅವರ ಭರತನಾಟ್ಯ ರಂಗ ಪ್ರವೇಶವನ್ನು ಆಯೋಜಿಸಲಾಗಿದೆ ಎಂದು ಸಂಗೀತ ಶಿಕ್ಷಕಿ ಸುಮಾ ಪ್ರಸಾದ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ತಮ್ಮ ಮಗಳು ಆದ ಡಾ. ವರ್ಷಿಣಿ ರಂಗ ಪ್ರವೇಶಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ್ಯದ ಅಧ್ಯಕ್ಷರಾದ ಕೆ. ಸುಚೇಂದ್ರ ಪ್ರಸಾದ್ ಅವರು ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್, ಹಾಸನದ ನಾಟ್ಯ ಕಲಾ ನಿವಾಸದ ಕಲಾ ನಿರ್ದೇಶಕ ವಿದ್ವಾನ್ ಉನ್ನತ್ ಹೆಚ್.ಆರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇದೇ ವೇದಿಕೆಯಲ್ಲಿ ಮೈಸೂರಿನ ನೃತ್ಯಗಿರಿ ಸಂಸ್ಥೆಯ ಗುರು ವಿದುಷಿ ಡಾ. ಕೃಪಾ ಪಡ್ಕೆ ಶ್ರೀಕಂಠೇಶ್ವರ ಕಲಾ ಮಂದಿರದ ವಿದುಷಿ ಶ್ರೀಮತಿ ಸುಮನಾ ರಾಮಚಂದ್ರ, ಭರತ ಕಲಾಕ್ಷೇತ್ರದ ಶ್ರೀಮತಿ ವೀಣಾ ಅರವಿಂದ್, ಕೂದುವಳ್ಳಿಯ ಸುಸ್ವರ ಸಂಗೀತಾಲಯದ ವಿದುಷಿ ಉಮಾ ನಾಗರಾಜ್ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕುಮಾರಿ ವರ್ಷಿಣಿ ಬಾಲ್ಯದಿಂದಲೇ ನೃತ್ಯ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು ಅತ್ಯಂತ ಕಿರಿಯ ವಯಸ್ಸಿನಲ್ಲೇ ನಾಟ್ಯಾರಂಭ ಮಾಡಿದ್ದು, ಚಿಕ್ಕಮಗಳೂರಿನ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀಕಂಠೇಶ್ವರ ಕಲಾಮಂದಿರದ ಸುಮನಾ ರಾಮಚಂದ್ರರವರ ಬಳಿ ಮತ್ತು ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆಂದು ತಿಳಿಸಿದರು.
ಕು. ವರ್ಷಿಣಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಗರದ ಸಾಯಿ ಏಂಜಲ್ಸ್ನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ, ಪ್ರೌಢ ಶಾಲಾ ಶಿಕ್ಷಣವನ್ನು ಸಂತ ಜೋಸೆಫರ ಬಾಲಕಿಯರ ಶಾಲೆಯಲ್ಲಿ ಹಾಗೂ ಎಂಇಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಬಾಲ್ಯದಿಂದಲೂ ವೈದ್ಯೆಯಾಗುವ ಹಂಬಲ ಹೊಂದಿದ್ದ ವರ್ಷಿಣಿ ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್ನಲ್ಲಿ ವೈದ್ಯಕೀಯ ಪದವಿ ಪಡೆದಿದ್ದು, ಪ್ರಸ್ತುತ ಸ್ನಾತಕೋತ್ತರ ಪದವಿಗಾಗಿ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಾಟೆಟಿಕ್ಸ್ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ನಗರದ ಪ್ರಖ್ಯಾತ ವೈದ್ಯರಾದ ಡಾ. ಚಂದ್ರಶೇಖರ್ ಸರ್ಜಾ ಅವರ ಸ್ಪರ್ಶ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸುಗಮ ಸಂಗೀತ ಗಂಗಾ, ಸ್ಪರ್ಶ ಆಸ್ಪತ್ರೆ, ಪೂರ್ವಿ ಸುಗಮ ಸಂಗೀತ ಅಕಾಡೆಮಿ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಬ್ರಾಹ್ಮಣ ಮಹಾಸಭಾ, ಸಂಸ್ಕಾರ ಭಾರತಿ ಇವರುಗಳು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಾಯಕ ಮಲ್ಲಿಗೆ ಸುಧೀರ್, ಶ್ರೀಧರ್ ಮೂರ್ತಿ, ಶ್ರೀಹರಿ ಉಪಸ್ಥಿತರಿದ್ದರು
Dr. Varshini Bharatanatyam stage entry in Kalamandir