ಚಿಕ್ಕಮಗಳೂರು: ವಿದ್ಯಾರ್ಥಿಗಳು ದೇಶದ ಆಸ್ತಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾ.ಶಿ.ಇ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಛೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಂದು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸಂಸದೀಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ವ್ಯಕ್ತಿಗೂ ಶಿಕ್ಷಣವು ಜೀವನದ ಬಹುಮುಖ್ಯ ಭಾಗವಾಗಿದೆ. ಶಿಕ್ಷಣ ಇಲ್ಲದೆ ಸಮಾಜದ ನಡುವೆ ಜೀವಿಸುವುದು ಕಷ್ಟಕರವಾಗಿದೆ. ಸರ್ಕಾರವು ಕಡ್ಡಾಯ ಶಿಕ್ಷಣ ಜಾರಿಗೆ ತರುವುದರ ಮೂಲಕ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣದ ಜೊತೆಗೆ ಶಿಕ್ಷಣದ ಪೂರಕಗಳನ್ನು ವ್ಯವಸ್ಥಿತವಾಗಿ ನೀಡುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ವಿಷಯಗಳನ್ನು ಬೋಧಿಸಿ ಅವರಲ್ಲಿ ಜ್ಞಾನ ತುಂಬುವುದರ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರಿಪಿಸುವುದು ಅಗತ್ಯವಾಗಿದೆ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬ ನಾಲ್ನುಡಿಯಂತೆ ಮಕ್ಕಳಲ್ಲಿ ಆಡಳಿತ ಹಾಗೂ ಸಂಸದೀಯ ಕಾರ್ಯಕಲಾಪಗಳನ್ನು ಚಟುವಟಿಕೆಗಳ ಮೂಲಕ ಅವರಲ್ಲಿ ರಾಜಕೀಯ ಕುರಿತು ಮಾಹಿತಿ ನೀಡಲು ಯುವ ಸಂಸತ್ ಮುಖ್ಯ ವೇದಿಕೆಯಾಗಿದೆ. ರಾಜಕೀಯ ವಿಷಯಗಳು ಕುರಿತು ಪ್ರತಿಯೊಬ್ಬರಲ್ಲೂ ಜ್ಞಾನವಿರಬೇಕು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ ಜೊತೆಗೆ ಪ್ರಶ್ನಿಸುವ ಮನೋಭಾವ, ಧೈರ್ಯದಿಂದ ಮಾತನಾಡುವ ಕಲೆ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನಸ್ಥಿತಿ ರೂಪುಗೊಳ್ಳುತ್ತದೆ ಎಂದ ಅವರು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿ ಉತ್ತಮ ಸಮಾಜ ರೂಪಿಸಲು ಸಹಕಾರಿಯಾಗಿ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ಕಾಂತರಾಜ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಪ್ರತಿ ಮಕ್ಕಳಿಗೆ ರಾಜಕೀಯ ವಿಷಯಗಳ ಕುರಿತು ಮಾಹಿತಿ ಹಾಗೂ ಸಂಸದೀಯ ಕಾರ್ಯ ವೈಖರಿಯ ಕುರಿತು ಪ್ರಜ್ಞೆ ಮೂಡಿಸಲು ಮತ್ತು ಅವರನ್ನು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಲು ಪ್ರೇರೆಪಿಸುವ ಉದ್ದೇಶದಿಂದ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಉತ್ತಮ ವಾಕ್ಚಾತುರ್ಯ, ಸ್ಪಷ್ಟ ವಿಷಯ ಮಂಡನೆ, ವಿದ್ಯಾರ್ಥಿ ವರ್ತನೆ ಹಾಗೂ ಇನ್ನಿತರ ವಿಷಯಗಳನ್ನು ಮಾನದಂಡವಾಗಿಸಿಕೊಂಡು ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲೆಯ ಒಟ್ಟು ೭೦ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇದೆ ಮಾನದಂಡಗಳ ಮೂಲಕ ೨ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಶಾಲಾ ಹಂತದಿಂದಲೂ ತರಬೇತಿ ನೀಡಿ ಸಿದ್ಧಪಡಿಸಲಾಗಿದೆ. ಇಂತಹ ಚಟುವಟಿಕೆಗಳಿಂದ ಮಕ್ಕಳು ರಾಜಕೀಯ ವಿಷಯಗಳಲ್ಲಿ ಸಕ್ರಿಯರಾಗಿ ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಶಿಕ್ಷಕರಾದ ಸುರೇಶ್, ಕೃಷ್ಣೇಗೌಡ, ಲಕ್ಷ್ಮಣ ಹಾಗೂ ತೀರ್ಪುಗಾರರಾಗಿ ಸತೀಶ್, ಮಹಾದೇವಪ್ಪ ಕುಂದರಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
District Level Youth Parliament Competition