ಚಿಕ್ಕಮಗಳೂರು: ಬಕಾಸುರ ಮತ್ತು ಭಸ್ಮಾಸುರ ಸೇರಿದಾಗ ಏನಾಗುತ್ತದೋ ಅದು ಈಗ ವಕ್ಫ್ ಬೋರ್ಡ್ ಆಗಿ ಕುಳಿತುಕೊಂಡು ಎಲ್ಲವನ್ನೂ ಕಬಳಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ವಕ್ಫ್ ಬೋರ್ಡ್ ರದ್ದತಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದ ಆಜಾದ್ ಪಾರ್ಕ್ ಸರ್ಕಲ್ನಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ಹಮ್ಮಿಕೊಂಡಿರುವ ಆಹೋ ರಾತ್ರಿ ಧರಣಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ೧೯೯೫ ರಲ್ಲಿ ವಕ್ಫ್ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ರಾಕ್ಷಸ ರೂಪವನ್ನು ಕೊಟ್ಟಿತು. ಯಾವ ಭೂಮಿಯನ್ನ ನಮ್ಮದು ಎಂದರೂ ಅದು ವಕ್ಫ್ಗೆ ಸೇರಿದ್ದು ಎಂದು ಕಾಯ್ದೆ ಹೇಳಿತು. ಲೋಕಸಭೆ ಅಧಿವೇಶನ ಆರ್ಡರ್ನಲ್ಲಿ ಇಲ್ಲದಿರುವಾಗ ಚರ್ಚೆಯೇ ಇಲ್ಲದೇ ಈ ಬಿಲ್ ಪಾಸ್ ಆಗಿತ್ತು. ಯಾರಿಗೂ ಇದರ ಗಂಭೀರತೆ ಅರ್ಥವಾಗಲಿಲ್ಲ. ನಿಧಾನವಾಗಿ ಒಂದೊಂದೇ ಅಸ್ತಿಯನ್ನು ನಮ್ಮದು ಎಂದು ದಾಖಲೆ ಮಾಡಿಸಿಕೊಂಡರು ಎಂದು ದೂರಿದರು.
ಅದು ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್, ಚಿಕ್ಕಮಗಳೂರಿನ ರತ್ನಗಿರಿ ಬೋರೆ, ನೆಲ್ಲೂರು ಮಠ ಹೀಗೆ ದೇಶಾದ್ಯಂತ ಎಲ್ಲವೂ ವಕ್ಫ್ಗೆ ಸೇರಲಾರಂಭಿಸಿತು. ಈಗ ಚಾಲುಕ್ಯರ ಕಾಲದ ೧೫೦೦ ವರ್ಷದ ಸೋಮೇಶ್ವರ ದೇವಾಲಯವನ್ನ ವಕ್ಫ್ ಎಂದು ಅಧಿಸೂಚನೆ ಮಾಡಲಾಗಿದೆ. ಆಗ ಜಗತ್ತಿನಲ್ಲೇ ಇಸ್ಲಾಂ ಇರಲಿಲ್ಲ. ೧೩ ನೇ ಶತಮಾನಕ್ಕೆ ಸೇರಿದ ಬಸವಾದಿ ಶರಣರ ವಿರಕ್ತ ಮಠವನ್ನೂ ನಮ್ಮದೂ ಎಂದರು.
ಕುರುಬ ಸಮಾಜಕ್ಕೆ ಸೇರಿದ ಬೀರೇಶ್ವರ ಗುಡಿ, ಮೂರ್ನಾಲ್ಕು ತಲೆ ಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದ ರೈತರ ಜಮೀನು ಸಹ ವಕ್ಫ್ ಎಂದಾಗಿದೆ. ತಮಿಳು ನಾಡಿನಲ್ಲಿ ಹಿಂದೆ ಜ್ಞಾನಾರ್ಜನೆಗಾಗಿ ರಾಜ ಮಹರಾಜರು ಅಗ್ರಹಾರಗಳಿಗೆ ಕೊಟ್ಟ ಜಮೀನು, ಕೇರಳದಲ್ಲಿ ದೊಡ್ಡ ದೊಡ್ಡ ಜಮೀನುಗಳು ವಕ್ಫ್ಗೆ ಸೇರಿದ್ದು ಎಂದು ದಾಖಲೆ ಮಾಡಲಾಗಿದೆ. ಇದು ಭಸ್ಮಾಸುರನಿಗೆ ವರ ಕೊಟ್ಟಂತಾಗಿದೆ ಇದನ್ನು ರದ್ದು ಪಡಿಸುವವರೆಗೆ ಹೋರಾಟ ನಿಲ್ಲಬಾರದು ಎಂದರು.
ಮಾಜಿ ಸಚಿವ ಡಿಎನ್ ಜೀವರಾಜ್ ಮಾತನಾಡಿ, ಹಿಂದೂಗಳು ಹಿಂದೂಸ್ಥಾನದಲ್ಲೇ ರಕ್ಷಣೆಗೆ ಹೊರಾಟ ಮಾಡುವ ಸ್ಥಿತಿ ಬಂದಿದೆ ಎಂದರೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ಇನ್ನೂ ೨೦೪೭ ರ ಹೊತ್ತಿಗೆ ಬಾಂಗ್ಲಾದಲ್ಲಿರುವ ಹಿಂದೂಗಳ ಸ್ಥಿತಿಯೇ ಬಾರತದ ಹಿಂದೂಗಳಿಗೆ ಬರುತ್ತದೆ ಎಂದು ಎಚ್ಚರಿಸಿದರು.
ಸಂಖ್ಯೆ ಹೆಚ್ಚಾಗಿದೆ ಎಂದ ಕೂಡಲೇ ಅವರ ಮಾನಸಿಕ ಸ್ಥಿತಿ ಬದಲಾಗಿದೆ. ಓರ್ವ ಸಾಧಾರಣ ಜಮೀರ್ ಅಹಮದ್ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನೇ ಕೊಳ್ಳುತ್ತೇವೆ ಎನ್ನುತ್ತಾರೆ. ಅದು ಕೇವಲ ದೇವೇಗೌಡರು, ಒಕ್ಕಲಿಗರಿಗಲ್ಲ ಹಿಂದೂಗಳನ್ನೇ ಕೊಳ್ಳುತ್ತೇನೆ ಎಂದರ್ಥ ಇದನ್ನ ಗಮನಿಸಬೇಕು ಎಂದರು.
ಅತ್ತ ಓವೈಸಿ ಸಹೋದರರು ನಮಗೆ ಅರ್ಧ ಗಂಟೆ ಸಮಯಕೊಟ್ಟು ನೋಡಿ ಎನ್ನುತ್ತಾರೆ. ಇವರಿಗೆ ಈ ಎಲ್ಲಾ ಶಕ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಜೀವರಾಜ್ ಬಿಜೆಪಿ ಸರ್ಕಾರ ಇದ್ದಾಗ ಇವರೆಲ್ಲ ಬಿಲದಲ್ಲಿ ಹೊಕ್ಕು ಕುಳಿತಿದ್ದರು ಎಂದರು. ವಕ್ಫ್ ಕಾರಣಕ್ಕೆ ಹೋರಾಟ ಪ್ರಾರಂಭವಾಗಿದೆ ಇದು ಇಲ್ಲಿಗೆ ನಿಲ್ಲುವುದಲ್ಲ. ನಮ್ಮ ದೇಶದಲ್ಲಿ ಏಕ ರೂಪದ ಕಾನೂನು ಜಾರಿ ಆಗಬೇಕಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಅದು ಜಾರಿಯಾದರೆ ವ್ಯವಸ್ಥೇ ಸರಿ ದಾರಿಗೆ ಬರುತ್ತದೆ ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ವಕ್ಫ್ ಅನ್ಯಾಯಕ್ಕೆ ದಾರಿ ಮಾಡಿಕೊಟ್ಟು, ಬಿಪಿಎಲ್ ಕಾರ್ಡುಗಳನ್ನ ರದ್ದು ಪಡಿಸಿ ಜನರನ್ನ ಬೀದಿಗೆ ತರುತ್ತಿದೆ. ಹಿಂದೂಗಳ ಮುಂದಿನ ಪೀಳಿಗೆ ಬಗ್ಗೆ ಆಲೋಚಿಸಬೇಕು ಎಂದರು. ವಕ್ಫ್ ಸಮಸ್ಯೆ ಎಂದರೆ ಅದು ಬಿಜೆಪಿ ಹೋರಾಟಕ್ಕೆ ಬಿಟ್ಟಿದ್ದು ಎಂದುಕೊಂಡು ಹಿಂದೂಗಳು ಮನೆಯಲ್ಲಿ ಕುಳಿತರೆ ಅದು ನಿಮ್ಮ ಬುಡಕ್ಕೇ ಬರುತ್ತದೆ. ಎಲ್ಲರೂ ಹೊರಬಂದು ಹೋರಾಟಕ್ಕೆ ಬೆಂಬಲಿಸಬೇಕು. ಮೂರು ತಿಂಗಳ ಹಿಂದೆ ಸರಿಯಾಗಿದ್ದ ಪಹಣಿಯಲ್ಲಿ ಈಗ ವಕ್ಫ್ ಹೆಸರು ತೂರಿಕೊಂಡಿದೆ. ಇದು ಕಾಂಗ್ರೆಸ್ ಪಕ್ಷ ಓಟಿನಾಸೆಗೆ ಮಾಡಿರುವ ಹುನ್ನಾರ. ಈ ಬಗ್ಗೆ ಎಚ್ಚೆತ್ತುಕೊಳ್ಳಿ ಎನ್ನುವುದು ನಮ್ಮ ಮನವಿ ಎಂದರು.
ಪ್ರತಿಭಟನೆಯಲ್ಲಿ ಶ್ರೀ ಜಯಬಸವಾನಂದ ಸ್ವಾಮೀಜಿ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ನಗರಾಧ್ಯಕ್ಷ ಪುಷ್ಪರಾಜ್, ಮುಖಂಡರುಗಳಾದ ಡಾ. ನರೇಂದ್ರ, ಪುಣ್ಯಪಾಲ್. ಬೀಕನಹಳ್ಳಿ ಸೋಮಶೇಖರ್, ಸಿ.ಎಚ್.ಲೋಕೇಶ್, ಜಯವರ್ಧನ್, ಸೇರಿದಂತೆ ಜಿಲ್ಲೆಯ ವಿವಿಧ ಮಂಡಲದ ಅಧ್ಯಕ್ಷರು, ಮಾಧ್ಯಮ ವಿಭಾಗ, ಮಹಿಳಾ ಮೋರ್ಚಾ, ಹಿಂದುಳಿದ, ಅಲ್ಪಸಂಖ್ಯಾತ, ಎಸ್ಸಿ ಎಸ್ಟಿ ಮೋರ್ಚಾ ಸೇರಿದಂತೆ ವಿವಿಧ ವಿಭಾಗದ ಮುಖಂಡರು ಭಾಗವಹಿಸಿದ್ದರು.
District BJP holds overnight sit-in against Waqf Board