ಚಿಕ್ಕಮಗಳೂರು: ಪ್ರತಿಯೊಬ್ಬರು ಮಕ್ಕಳ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಮಂಜು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಬಾಲ ನ್ಯಾಯ ಮಂಡಳಿಯಿಂದ ದಿನದ ೨೪ ಗಂಟೆಗಳ ತುರ್ತು ಸೇವೆಯನ್ನು ಒದಗಿಸಲಾಗುತ್ತಿದ್ದು, ಸಮಸ್ಯೆಗಳಿಗೆ ತುತ್ತಾದ ಮಕ್ಕಳು ರಾಷ್ಟ್ರೀಯಾ ಟೋಲ್ ಪ್ರೀ ನಂ ಸಹಾಯವಾಣಿ ೧೦೯೮ ಕ್ಕೆ ಕರೆ ಮಾಡಬಹುದಾಗಿದೆ
ಇತ್ತೀಚೆಗೆ ಸಮಾಜದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಸಮಾಜದ ಪ್ರತಿಯೊಬ್ಬರು ಸರ್ಕಾರ ಮಾಡಿರುವ ಕಾನೂನುಗಳನ್ನು ಗೌರವಿಸಿ ಕೈ ಜೋಡಿಸಬೇಕು ಆಗ ಮಾತ್ರ ಇಂತಹ ಸಮಸ್ಯೆಗಳನ್ನು ತೆಗುದು ಹಾಕಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಶಾಲೆಗಳಲ್ಲಿನ ಮೂಲಭೂತ ಸಮಸ್ಯೆಗಳ ನಿವಾರಿಸಿ. ಶಾಲಾ ಬಿಟ್ಟ ಮಕ್ಕಳ ಪುನರ್ವಸತಿ, ವಿದ್ಯಾಭ್ಯಾಸ ವಂಚಿತರಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದ ಅವರು ಪ್ರತಿ ಶಾಲಾ ಕಾಲೇಜ್ಗಳಲ್ಲಿ ಮಕ್ಕಳ ಸುರಕ್ಷ ಸಮಿತಿಗಳು ನೇಮಕ ಮಾಡಿ ಹೆಲ್ಪ್ ಲೈನ್ ೧೦೯೨ ಈ ಬಗ್ಗೆ ಫಲಕಗಳನ್ನು ಹಾಕಿ ಅರಿವು ಮೂಡಿಸಬೇಕು. ಚಿಕ್ಕ ವಯಸ್ಸಿನಲ್ಲೇ ಗರ್ಭಿಣಿಯಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವುದು. ಬಹಳ ಅಗತ್ಯವಾಗಿದೆ
ಈ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅರಿವು ಮೂಡಿಸುವುದು ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಿ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳು ಅವರ ಹಕ್ಕುಗಳ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಪೋಷಕರನ್ನು ಕಳೆದು ಕೊಂಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತ್ವರಿತವಾಗಿ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ ಎಂದ ಅವರು ಸರ್ಕಾರಿ, ಅರೆ ಸರ್ಕಾರಿ ಕಛೇರಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳವವರ ಅವರ ಪೂರ್ವ ಪರ ಮಾಹಿತಿ ಪಡೆದು ಸೇರಿಸಿಕೊಳ್ಳಬೇಕು.
ಸರ್ಕಾರಿ ಶಾಲಾ, ಕಾಲೇಜ್ ಕಛೇರಿಗಳಲ್ಲಿ ಧ್ವನಿ ಪೆಟ್ಟಿಗೆ ಇಡುವುದು ಕಡ್ಡಾಯವಾಗಿದೆ ಎಂದರು. ಬಾಲ್ಯ ವಿವಾಹ ಪ್ರೋತ್ಸಾಹ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸುವ ಅಗತ್ಯವಿದ್ದು, ಸಮಾಜದಲ್ಲಿ ಉತ್ತಮ ವಾತಾವರಣ ರೂಪಿಸುವಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಡಿವೈಎಸ್ಪಿ ಶೈಲೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಅಶ್ವಥ್ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.
Progress review meeting held at the District Collector’s Office Hall