ಚಿಕ್ಕಮಗಳೂರು: ನಗರಸಭೆಯ ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡಿಸುವ ಸಲುವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು ಹಲವು ಸಲಹೆ ನೀಡಿದರು.
ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಜಿನೀಯರ್ ನಾಗೇಂದ್ರ ಮಾತನಾಡಿ, ನಗರಸಭೆ ಆರ್ಥಿಕ ಸಬಲತೆ ಕಂಡುಕೊಳ್ಳುವ ಸಲುವಾಗಿ ಕಂದಾಯ ವಸೂಲಾತಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಬಾಕಿ ಉಳಿಸಿಕೊಂಡವರಿಗೆ ಅಂಚೆ ಮೂಲಕ ವರ್ಷಕ್ಕೊಮ್ಮೆ ನೋಟೀಸು ಕಳಿಸುವ ಕೆಲಸ ಮಾಡಿದರೆ ಮನೆ ಮನೆಗೆ ಸಿಬ್ಬಂದಿ ತೆರಳಿ ಮನವರಿಕೆ ಮಾಡುವುದು ತಪ್ಪುತ್ತದೆ ಎಂದು ಸಲಹೆ ಮಾಡಿದರು.
ಕೆಲವರ ನಿವೇಶನ ಹಾಗೂ ಕಟ್ಟಡದ ಮೂಲ ಅಳತೆಗೂ ಕಂದಾಯ ಕಟ್ಟುತ್ತಿರುವ ಆಸ್ತಿಯ ಅಳತೆಗೂ ತುಂಬಾ ವ್ಯತ್ಯಾಸಗಳಿವೆ. ಈ ಮೂಲಕ ನಗರಸಭೆಗೆ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕತೆಯನ್ನೂ ಬಳಸಿಕೊಂಡು ನಿಖರವಾದ ಅಳತೆಯ ಜಮೀನಿನ ಕಂದಾಯ ವಸೂಲಾತಿಗೆ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಕಟ್ಟುತ್ತಿರುವವ ಮಾಹಿತಿ ಬಗ್ಗೆ ಡೇಟಾ ಎಂಟ್ರಿ ತಯಾರಿಸಿಟ್ಟುಕೊಂಡು ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನಗರದಲ್ಲಿ ಸಾಕಷ್ಟು ಅಕ್ರಮ ನಿವೇಶನ, ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುವುದು ನಡೆದೇ ಇದೆ ಅಂತಹವನ್ನು ಗುರುತಿಸಿ ದಂಡ ವಿಧಿಸಿ ಅವುಗಳನ್ನು ಸಕ್ರಮಗೊಳಿಸುವುದು ಸೂಕ್ತ. ಅಕ್ರಮ ಬಡಾವಣೆ ನಿರ್ಮಾಣ ಮಾಡಿ ಮನೆಗಳನ್ನು ಬಾಡಿಗೆ ನೀಡಲಾಗಿದ್ದರೂ ಅವರಿಗೆ ನಗರಸಭೆಯಿಂದ ನೀರು, ವಿದ್ಯುತ್, ಚರಂಡಿ ಎಲ್ಲಾ ರೀತಿಯ ನಾಗರೀಕ ಸೌಲಭ್ಯ ನೀಡಲಾಗುತ್ತಿದ್ದರೂ ಅವುಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಿಕೊಟ್ಟರೆ ನಗರಸಭೆಗೂ ಆದಾಯ ಬರುತ್ತಿದೆ ಎಂದು ಸಲಹೆ ಮಾಡಿದರು.
ನಗರ ವ್ಯಾಪ್ತಿಯಲ್ಲಿ ಕಾಂಕ್ರಿಟ್ ರಸ್ತೆ, ಟಾರ್ ರಸ್ತೆ ಮಾಡುವಾಗ ಗುಣಮಟ್ಟ ಕಾಪಾಡಿಕೊಳ್ಳಬೇಕು. ಅಲ್ಲದೆ ರಸ್ತೆ ನಿರ್ಮಾಣ ಮಾಡಿ ಕೆಲವೇ ದಿನಗಳಲ್ಲಿ ಅದನ್ನು ಕತ್ತರಿಸಲು ಅವಕಾಶ ಕೊಡಲಾಗುತ್ತಿದೆ. ಆದರೆ ಅದನ್ನು ಮೊದಲಿನಂತೆಯೇ ಮುಚ್ಚಿಸುವ ಕುರಿತು ನಗರಸಭೆ ಮುತುವರ್ಜಿ ವಹಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದರೆ ಒಂದಷ್ಟು ಹೆಚ್ಚುವರಿ ಹೊರೆ ಉಳಿತಾಯವಾಗುತ್ತದೆ. ರಸ್ತೆಗಳನ್ನು ಪದೇ ಪದೇ ಅಗೆಯದಂತೆ ಸಾರ್ವಜನಿಕರಿಗೂ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಸಲಹೆಗಳನ್ನು ಆಲಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ತಮ್ಮ ವಾರ್ಡ್ಗಳಲ್ಲಿ ಸಂಘ, ಸಂಸ್ಥೆಗಳನ್ನು ರಚಿಸಿಕೊಂಡು ಕಸ ನಿರ್ವಹಣೆ, ಪ್ಲಾಸ್ಟಿಕ್ ನಿಯಂತ್ರಣ, ಪಾರ್ಕ್ ಅಭಿವೃದ್ಧಿ ಇನ್ನಿತರೆ ಕೆಲಸಗಳಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ, ನಗರದ ಸೌಂದರ್ಯ ಕಾಪಾಡುವ ಜೊತೆಗೆ ಸಾರ್ವಜನಿಕರಿಗೂ ಉಪಯೋಗ ಕಲ್ಪಿಸುವ ಸಲುವಾಗಿ ನಗರಸಭೆ ಪಾರ್ಕ್ಗಳು, ತೆರೆದ ಜಿಮ್ಗಳ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವವರಿಗೆ ಅವರ ಉದ್ಯಮದ ಜಾಹಿರಾತು ಫಲಕಗಳನ್ನು ಅಳವಡಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ಆಸಕ್ತರು ನಗರಸಭೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ಆಸ್ತಿ ತೆರಿಗೆ ಸೋರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ನಗರಸಭೆ ವ್ಯಾಪ್ತಿಯ ಎಲಾ ಆಸ್ತಿಗಳು ಮುಂಬರುವ ಏಪ್ರಿಲ್ ವೇಳೆಗೆ ಕೆ-೨ಗೆ ಲಿಂಕ್ ಆಗುತ್ತಿದೆ. ಅಷ್ಟರಲ್ಲಿ ಎಲ್ಲಾ ರೀತಿಯ ತೆರಿಗೆಗಳೂ ಪಾವತಿ ಆಗಿರಬೇಕು. ಈ ಕೆಲಸ ಪ್ರಗತಿಯಲ್ಲಿದ್ದು ಸಧ್ಯದಲ್ಲೇ ಬಿಗಿ ಆಗಲಿದೆ ಎಂದು ತಿಳಿಸಿದರಲ್ಲದೆ. ಸಭೆಯಲ್ಲಿ ಬಂದ ಸಲಹೆಗಳನ್ನು ಪರಿಗಣಿಸಿ ಆಯ-ವ್ಯಯದಲ್ಲಿ ಅಳವಡಿಸಿಕೊಳ್ಳಲಳಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ನಾಮಿನಿ ಸದಸ್ಯರುಗಳಾದ ಪ್ರಸಾದ್ ಅಮೀನ್, ಯಶೋಧಮ್ಮ, ಪ್ರಕಾಶ್ ರೈ, ಫಯಾಜ್, ಲೆಕ್ಕಾಧಿಕಾರಿ ಲತಾ ಮಣಿ ಇತರರು ಇದ್ದರು.
Municipal Council Budget Pre-Appointment Meeting for the Year 2025-26