ಚಿಕ್ಕಮಗಳೂರು: ಗಂಗಾಮತಸ್ಥ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ವರ್ಗದ ಜನ ತಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಎಂಬಿಬಿಎಸ್ ಪದವಿ ಪಡೆದವರಿಗೆ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾಮತಸ್ಥ ಸಮುದಾಯ ಸಮಾಜದ ಅತ್ಯಂತ ಕೆಳಸ್ತರದಲ್ಲಿದೆ. ಆ ಸಮಾಜದ ಜನ ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆವರ್ಗ ಎಷ್ಟೇ ಪ್ರಯತ್ನ ಪಟ್ಟರೂ ಅಭಿವೃದ್ಧಿಯಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಆ ಸಮುದಾಯದ ಪಂಗಡಗಳಲ್ಲಿರುವ ಭಿನ್ನಾಭಿಪ್ರಾಯ ಮತ್ತು ಆಂತರಿಕ ವೈರುಧ್ಯಗಳು ಎಂದು ವಿಷಾದಿಸಿದರು.
ಯಾವುದೇ ಕೆಳವರ್ಗಗಳು ಅಭಿವೃದ್ಧಿ ಹೊಂದಬೇಕಾದರೆ ಆ ಸಮಾಜದ ಜನ ಸಂಘಟಿತರಾಗಬೇಕು. ಎಷ್ಟೇ ಕಷ್ಟವಾದರೂ ಬಿಡದೆ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಹಾಗಾದಾಗ ಮಾತ್ರ ಆ ಸಮುದಾಯಗಳು ಪ್ರಗತಿ ಹೊಂದುತ್ತವೆ ಎಂದರು.
ನಾವು ನಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಸಂಘಟಿತರಾಗದಿದ್ದರೆ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡದಿದ್ದರೆ. ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಸಮಾಜದ ಮುಖಂಡ. ಉದ್ಯಮಿ. ಎಸ್. ಚಂದ್ರಶೇಖರ್ ಮಾತನಾಡಿ ನಾವು ನಾವೇ ಕಚ್ಚಾಡಿಕೊಂಡು ಹೋದರೆ ಇನ್ನೂ ನೂರು ವರ್ಷವಾದರೂ ನಮ್ಮ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಆದ್ದರಿಂದ ಕಚ್ಚಾಟವನ್ನು ಬಿಟ್ಟು ಎಲ್ಲರೂ ಒಂದಾಗಿ ಸಮಾಜದ ಗುರುಪೀಠದಡಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಗಂಗಾಮತಸ್ಥ ಸಮುದಾಯದ ಉಳ್ಳವರು ಮತ್ತು ಅಧಿಕಾರಿಗಳು ತಮ್ಮ ಜನಾಂಗದವರ ಕೈ ಹಿಡಿದು ಮೇಲೆತ್ತುವ ಕೆಲಸ ಮಾಡಬೇಕು ಎಂದ ಅವರು ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಜಾರಿಗೆ ತಂದಿರುವ ಗಂಗಾ ವಿದ್ಯಾಸಿರಿ ಯೋಜನೆಗೆ ೫೦ ಸಾವಿರ ರೂ ದೇಣಿಗೆ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಕೆ.ಎಂ. ಧನಂಜಯ ಮಾತನಾಡಿ ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಗಂಗಾ ವಿದ್ಯಾಸಿರಿ ಯೋಜನೆಯನ್ನು ಪ್ರಾರಂಭಿಸಿದ್ದು ಅದಕ್ಕೆ ತಾವು ೨೫ ಸಾವಿರ ರೂ ದೇಣಿಗೆ ನೀಡಿದ್ದು. ಸಮಾಜದ ಎಲ್ಲರೂ ಯೋಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸಿ. ಆರ್. ಲೋಕೇಶಪ್ಪ ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಟಿ. ಅಶೋಕ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಗಂಗಾ ವಿದ್ಯಾ ಸಿರಿ ಯೋಜನೆಗೆ ಸಮಾರಂಭದಲ್ಲಿ ಚಾಲನೆ ನೀಡಲಾಯಿತು. ಅಂಬಿಗರ ಶರಣ ಸಂಸ್ಕೃತಿ ಉತ್ಸವದ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಎಂಬಿಬಿಎಸ್ ಪದವಿ ಪಡೆದರನ್ನು ಮತ್ತು ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್. ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ. ಟಿ. ಕೃಷ್ಣಯ್ಯ. ಉಪಾಧ್ಯಕ್ಷ ಪ್ರೊ. ಹೆಚ್. ಡಿ. ಕಟ್ಟಿಮನಿ. ತಾಲೂಕು ಅಧ್ಯಕ್ಷ ಎಂ.ಪಿ. ಗೋಪಾಲ್. ಕಡೂರು ತಾಲೂಕು ಅಧ್ಯಕ್ಷ ಎಂ.ಎಸ್. ವಸಂತ ಕುಮಾರ್. ತರೀಕೆರೆ ತಾಲೂಕು ಅಧ್ಯಕ್ಷ ಎನ್. ಪರಮೇಶ್. ಜಿಲ್ಲಾ ಖಜಾಂಚಿ ಎಸ್. ಹೆಚ್. ವೆಂಕಟೇಶ್. ಬೆಂಗಳೂರು ನಗರಾಧ್ಯಕ್ಷ ಎಂ. ಪಿ. ಮಂಜುನಾಥ್. ಮೊಗವೀರ ಮಹಾಜನ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಿ.ಎಲ್. ಶಂಕರನಾಥ್. ಜನಾರ್ದನ್. ಜಿ ಪುಟ್ಟಪ್ಪ ಉಪಸ್ಥಿತರಿದ್ದರು.
ಇದೆ ವೇಳೆ ಜಮ್ಮಲದಿನ್ನಿಯ ಬಿ. ಎಂ. ಸುರೇಶ್ ಗವಾಯಿಗಳ ತಂಡದಿಂದ ನಡೆದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು
District Gangamat employees’ welfare development receives Pratibha Award