ಚಿಕ್ಕಮಗಳೂರು: ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಛೇರಿಯಿಂದ ಹನುಮಂತಪ್ಪ ಸರ್ಕಲ್ ವರೆಗೆ ಬಿಜೆಪಿ ಮುಖಂಡರುಗಳೊಂದಿಗೆ ಮೆರವಣಿಗೆ ಹೊರಟ ಕಾರ್ಯಕರ್ತರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ನಂತರ ಹನುಮಂತಪ್ಪ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು ಇದೇ ಜನವರಿ ೧೫ ರಂದು ನವದೆಹಲಿಯಲ್ಲಿ ನೂತನ ಎಐಸಿಸಿ ಕಚೇರಿಯ ಉದ್ಘಾಟನೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುತ್ತಾ ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಇದು ಪ್ರಚೋದನಾ ಕಾರಿ ಹೇಳಿಕೆಯಾಗಿದ್ದು, ದೇಶದ ಸಮಗ್ರತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ಕೂಡಿದೆ. ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡಿದಂತಾಗಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲಿ ಹರಿದಾಡುತ್ತಿದೆ. ಇದನ್ನು ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ ಪ್ರಜಾಪ್ರಭುತ್ವ ವಿರೋಧಿ ನಿಲುವು ಹೊಂದಿರುವ ಹಾಗೂ ಈ ದೇಶದ ಕಾನೂನು, ಸಂವಿಧಾನಕ್ಕೆ ಗೌರವ ನೀಡದಿರುವ ಓರ್ವ ವಿರೋಧ ಪಕ್ಷದ ನಾಯಕನನ್ನು ಹೊಂದಿರುವ ನಮ್ಮ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.
ದೇಶದ ೧೪೫ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಒಳಗೂ, ದೇಶದ ಹೊರಗೂ ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡುವುದಿಲ್ಲ. ದೇಶ ತಲೆ ಎತ್ತಿ ನಡೆಯುವಂತೆ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾ, ದೇಶವನ್ನು ವಿಶ್ವಗುರು ಮಾಡುವತ್ತ ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೆಡೆಯಾದರೆ, ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ಜವಾಬ್ದಾರಿ ಹೊತ್ತಿರುವ ರಾಹುಲ್ ಗಾಂಧಿ ಬೇಜವಾಬ್ದಾರಿಯುತವಾಗಿ ದೇಶವನ್ನು ಒಡೆಯುವ, ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
ಈ ದೇಶದ ವಿರುದ್ಧ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಈ ದೇಶ ತೊರೆದು ಇಟಲಿಯಲ್ಲಿ ನೆಲೆಸುವುದು ಸೂಕ್ತ ಎಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ರಾಹುಲ್ ಗಾಂಧಿ ಅವರು ನಮ್ಮ ಹೋರಾಟ ಬಿಜೆಪಿ, ಆರ್ಎಸ್ಎಸ್ ವಿರುದ್ಧ ಎಂದು ಹೇಳಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದಕ್ಕಾಗಿಯೇ ಅವರು ಇರುವುದು. ಆದರೆ ನಮ್ಮ ಹೋರಾಟ ಭಾರತದ ವಿರುದ್ಧ ಎಂದು ಹೇಳಿಕೆಯನ್ನೂ ನೀಡಿರುವ ರಾಹುಲ್ ಗಾಂಧಿ ದೇಶದ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯಲು ನಾಲಾಯಕ್ ಎಂದರು.
ರಾಹುಲ್ ಗಾಂಧಿ ತಕ್ಷಣ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ದೇಶವನ್ನು ತುಂಡರಿಸುವ ಕೆಲಸದಲ್ಲಿ ಎಂದಿಗೂ ಮುಂದಿರುವ ಇತಿಹಾಸ ಹೊಂದಿರುವ ಕಾಂಗ್ರೆಸ್ನ ಸಂಬಂಧ ದೇಶ ದ್ರೋಹಿಗಳೊಂದಿಗೆ ಮಾತ್ರ ಎಂದು ಆರೋಪಿಸಿದರು.
ಪ್ರತಿಭಟನೆ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಡಾ.ನರೇಂದ್ರ, ಜಸಿಂತ ಅನಿಲ್ ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ಜಯವರ್ಧನ್, ಅಂಕಿತ, ಶಶಿ ಆಲ್ದೂರು, ನೆಟ್ಟೆಕರೆಹಳ್ಳಿ ಜಯಣ್ಣ, ಮಂಜು ಬ್ಯಾಟರಿ, ಜೀವನ್ ಕೋಟೆ, ಬಸವರಾಜು, ಪ್ರದೀಪ್, ಕಬೀರ್ ಇತರರು ಭಾಗವಹಿಸಿದ್ದರು.
BJP Yuva Morcha workers protest against Rahul Gandhi