ಚಿಕ್ಕಮಗಳೂರು: ಸಾರ್ವಜನಿಕರು ಸರ್ವ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ಅವರು ಇಂದು ನಗರಸಭಾ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನ ನಗರಸಭೆಯ ಆಯವ್ಯಯ ತಯಾರಿಸಲು ಎರಡನೇ ಹಂತದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರು ಈ ಸಭೆಯಲ್ಲಿ ನೀಡಿರುವ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ನಗರಸಭೆ ಅಳವಡಿಸಿಕೊಂಡು ನಗರದ ನಾಗರೀಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.
ನಗರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಒಟ್ಟಾರೆ ಅಭಿಪ್ರಾಯ ವ್ಯಕ್ತವಾಗಿದ್ದು, ಸಂಪೂರ್ಣ ನಿಷೇಧಿಸಲು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವರ್ತಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕಲ್ಯಾಣ ಮಂಟಪಗಳಲ್ಲಿ ವಿವಾಹ ಮುಂತಾದ ಶುಭ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಅತೀ ಹೆಚ್ಚು ನೀರಿನ ಬಾಟಲಿಗಳು, ಪ್ಲಾಸ್ಟಿಕ್ನಲ್ಲಿ ತುಂಬಲಾಗಿರುವ ಉಡುಗೊರೆಗಳನ್ನು ನೀಡುತ್ತಿದ್ದು, ಅಂತಹ ಕಲ್ಯಾಣ ಮಂಟಪದವರಿಗೆ ನಗರಸಭೆಯಿಂದ ಸೂಚನೆ ಪತ್ರ ನೀಡಿ ಕ್ರಮ ಕೈಗೊಳ್ಳಲು ಒತ್ತಾಯಪೂರ್ವಕ ಅಭಿಪ್ರಾಯಗಳು ಮೂಡಿಬಂದವು ಎಂದು ತಿಳಿಸಿದರು.
ದೊಡ್ಡ ಪ್ರಮಾಣದ ನೀರು ಸಂಗ್ರಾಹಗಾರವನ್ನು ಅಕ್ವಗಾರ್ಡ್ ಅಳವಡಿಸಿ ಕಲ್ಯಾಣ ಮಂಟಪದವರೇ ನಿರ್ಮಿಸಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ಪ್ಲಾಸ್ಟಿಕ್ ಬಳಕೆ ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಗರದ ವಾರ್ಡ್ಗಳಲ್ಲಿರುವ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯರ ಸಹಭಾಗಿತ್ವದೊಂದಿಗೆ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿಕೊಂಡು ಅಭಿವೃದ್ಧಿಪಡಿಸಲು ಮುಂದಾದರೆ ಸುಂದರ ಹಾಗೂ ಸ್ವಚ್ಚವಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ ನಗರಸಭೆಯಿಂದಲೇ ಪ್ರತೀ ಬಾರಿಯಂತೆ ಕಂದಾಯ ವಸೂಲಾತಿಗೆ ವಾರ್ಡಿನ ಕಂದಾಯ ಅಧಿಕಾರಿಗಳು ಮನೆ ಮನೆಗೆ ತೆರಳಿ ಕಂದಾಯ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. ಈ ಮಧ್ಯೆ ದೂರವಾಣಿ ಮೂಲಕ ನಾಗರೀಕರಿಗೆ ಕರೆಮಾಡಿ ಭಯ ಹುಟ್ಟಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಭಯಪಡುವ ಅಗತ್ಯ ಇಲ್ಲ, ಈ ಕುರಿತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ದೂರುನೀಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಜ.೨೬ ರಂದು ಗಣರಾಜ್ಯೋತ್ಸವ ದಿನದಂದು ನಗರಸಭೆ ಆವರಣದಲ್ಲಿರುವ ನೀರಿನ ಕಾರಂಜಿ, ಗಣಪತಿ ದೇವಸ್ಥಾನ, ಸಾರ್ವಜನಿಕ ಶೌಚಾಲಯ ಮುಂತಾದವುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗು ಶಾಸಕರ ನೇತೃತ್ವದಲ್ಲಿ ಉದ್ಘಾಟನೆಯಾಗಲಿದೆ. ಕೆ.ಎಂ ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದಿಂದ ಕಣಿವೆ ರುದ್ರೇಶ್ವರ ದೇವಸ್ಥಾನದವರೆಗೆ ವಿದ್ಯುತ್ ದೀಪ ಅಳವಡಿಕೆ ಕಾರ್ಯಕ್ಕೆ ಇದೇ ಸಂದರ್ಭದಲ್ಲಿ ಸಚಿವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಹಿರಿಯ ನಾಗರೀಕ ನಂಜುಂಡರು ಮಾತನಾಡಿ, ೧೫ನೇ ವಾರ್ಡಿನಲ್ಲಿ ಒಂದು ಕಾಲುವೆಗೆ ಮೇಲ್ಬಾಗದ ಕವರಿಂಗ್ ಮಾಡಿಸಬೇಕು, ಜೊತೆಗೆ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಸಲಹೆ ನೀಡಿದರು. ಐಡಿಎಸ್ಜಿ ಕಾಲೇಜಿನ ಉಪನ್ಯಾಸಕ ಲಕ್ಷ್ಮಿಕಾಂತ್ ಮಾತನಾಡಿ, ಎಐಟಿ ವೃತ್ತದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದ ಗೋಡೆಗಳನ್ನು ಎತ್ತರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ, ರಚನಾ ಬಿಲ್ಡರ್ಸ್ನ ನಾಗೇಂದ್ರ, ಜಿ.ರಮೇಶ್ ಮತ್ತಿತರರು ಸಲಹೆಗಳನ್ನು ನೀಡಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಇಂಜಿನಿಯರ್ ಲೋಕೇಶ್, ಬಿಜೆಪಿ ಮುಖಂಡ ಸಿ.ಆರ್ ಪ್ರೇಮ್ಕುಮಾರ್, ನಾಮಿನಿ ಸದಸ್ಯ ಪ್ರಸಾದ್ ಅಮೀನ್, ಜಗದೀಶ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
Second phase of public consultation meeting to prepare the municipal budget