ಚಿಕ್ಕಮಗಳೂರು: ಸಮಾಜದಲ್ಲಿ ಮಹಿಳೆಯರು ಆರ್ಥಿಕ ಸಬಲ-ಪ್ರಬಲರಾಗಬೇಕೆಂಬ ಗುರಿಯೊಂದಿಗೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ಅವರು ಇಂದು ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಮಾರ್ಗಸೂಚಿಯಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಾತಿಗಾಗಿ ಡೇನಲ್ಮ್ ಅಭಿಯಾನದಡಿ ರಾಜ್ಯದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅರ್ಹ ಮಹಿಳಾ ಸ್ವಸಹಾಯ ಸಂಘಗಳನ್ನು ತೊಡಗಿಸಿಕೊಂಡು ಆಸ್ತಿ ತೆರಿಗೆ ನೀರಿನ ಶುಲ್ಕವನ್ನು ವಸೂಲಾತಿ ಸಂಗ್ರಹಣೆ ಮಾಡುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯ ಆಯಾ ವಾರ್ಡಿನ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಕಂದಾಯ ಮತ್ತು ನೀರಿನ ಕರ ವಸೂಲಿ ಮಾಡಿದರೆ ಶೇ.೫ ರಷ್ಟು ಹಣವನ್ನು ಆ ಸಂಘಕ್ಕೆ ನೀಡಲು ಯೋಜನೆ ರೂಪಿಸಲಾಗಿದ್ದು, ಅಂದು ಸಂಗ್ರಹಿಸಿದ ಹಣವನ್ನು ಅಂದೇ ನಗರಸಭೆಗೆ ಪಾವತಿ ಮಾಡಲು ಪೇಟಿಎಂ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಂಗ್ರಹಿಸಲಾದ ಕಂದಾಯ ಹಣವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಬೇಕು. ಇದನ್ನು ದುರುಪಯೋಗಪಡಿಸಿಕೊಂಡರೆ ಪೊಲೀಸ್ ಇಲಾಖೆ ಮೂಲಕ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿ ದಂಡ ವಿಧಿಸಲು ಅವಕಾಶ ಇದ್ದು, ಇದಕ್ಕೆ ಅವಕಾಶ ಕೊಡದಂತೆ ಕೆಲಸ ಮಾಡಬೇಕೆಂದು ಎಚ್ಚರಿಸಿದರು.
ಕರ ವಸೂಲಾತಿಗೆ ಹೋಗುವ ಮಹಿಳೆಯರಿಗೆ ನಗರಸಭೆ ವತಿಯಿಂದ ಗುರುತಿನ ಚೀಟಿ ನೀಡಲಾಗುವುದು. ವಾರ್ಡಿನಲ್ಲಿ ವಾಸಿಸುವ ನಾಗರೀಕರ ಪರಿಚಯ ಸ್ಥಳೀಯ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಇರುವುದರಿಂದ ಮೋಸ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ ವಸೂಲಾತಿ ಕಾರ್ಯದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದರಿಂದ ನಗರಸಭೆ ಅಧಿಕಾರಿ ಎಂಬುವುದರ ಜೊತೆಗೆ ಆರ್ಥಿಕ ಸದೃಢರಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ಕಂದಾಯ ವಸೂಲಾತಿಗೆ ಹೋದರೆ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗುತ್ತದೆ ಎಂಬ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಮಹಿಳೆಯರ ಮೂಲಕ ಕಂದಾಯ ವಸೂಲಿ ಮಾಡಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲಿ ಎಂದು ಹಾರೈಸಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಬಾಕಿ ಚಾಲ್ತಿ ವಸೂಲಾತಿಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು ಅದರಂತೆ ಸ್ಥಳೀಯ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಕಂದಾಯ ವಸೂಲಾತಿಗೆ ಕ್ರಮವಹಿಸಲಾಗಿದ್ದು, ಸಂಗ್ರಹ ಮಾಡಿದ ಹಣಕ್ಕೆ ಶೇ.೫ ರಷ್ಟು ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದರು.
ನಗರಸಭೆ ವ್ಯಾಪ್ತಿಯ ೩೫ ವಾರ್ಡಿನ ಎಲ್ಲಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳನ್ನು ಇಂದು ಆಹ್ವಾನಿಸಿ ಕಂದಾಯ ವಸೂಲಾತಿ ಕುರಿತು ಅರಿವು ಮೂಡಿಸಲಾಗಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಸದೃಢತೆಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಹೇಳಿದರು.
ಫೆ.೨೦ ರ ನಂತರ ವಾರ್ಡ್ವಾರು ಸಭೆ ನಡೆಸಿ ಸಾರ್ವಜನಿಕರಿಗೆ ಮನವರಿಕೆ ಮಾಡುವ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುವುದು. ಏ.೧ ರಿಂದ ಆಸ್ತಿ ಮತ್ತು ನೀರಿನ ತೆರಿಗೆ ವಸೂಲಾತಿ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ಸಮುದಾಯ ಸಂಘಟನಾಧಿಕಾರಿ ಚಂದ್ರಶೇಖರಪ್ಪ ಸ್ವಾಗತಿಸಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಡೇನಲ್ಮ್ ಯೋಜನೆಯಡಿ ರಚನೆಯಾಗಿರುವ ಅರ್ಹ ಆಸಕ್ತ ಸ್ವಸಹಾಯ ಸಂಘಗಳಿಂದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಾತಿಗಾಗಿ ಕರ ಸಂಗ್ರಹಣೆಗೆ ಸರ್ಕಾರ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು.
ಇದರಂತೆ ನಗರದ ಸ್ವಸಹಾಯ ಸಂಘಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಈಗಾಗಲೇ ೧೫ ಸ್ವಸಹಾಯ ಸಂಘಗಳಿಂದ ಅರ್ಜಿಗಳು ಬಂದಿವೆ. ಉಳಿದಂತೆ ಯಾವುದೇ ಅರ್ಜಿಗಳು ಬರದ ಹಿನ್ನೆಲೆಯಲ್ಲಿ ಇಂದು ಸುಮಾರು ೬೦ ಸ್ವಸಹಾಯ ಸಂಘಗಳನ್ನು ಆಹ್ವಾನಿಸಿ ಅರಿವು ಮೂಡಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಂದಾಯ ಶಾಖೆಯ ಶಿವಾನಂದ, ಸಿಆರ್ಪಿ ಹಾಗೂ ನಗರಸಭಾ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.
Awareness program on collection of property tax and water charges