ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸ್ವಚ್ಚತೆ ಬಗ್ಗೆ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಲೈಫ್ಲೈನ್ ಫೀಡ್ಸ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ ಹೇಳಿದರು.
ಅವರು ಇಂದು ಕಲ್ಯಾಣ ನಗರದಲ್ಲಿ ಲೈಫ್ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಕಲ್ಯಾಣ ನಗರ ವೆಲ್ಫೇರ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸ್ವಚ್ಚತೆಗೆ ಆದ್ಯ ಗಮನನೀಡಿ ಪಾರ್ಕ್ ಇನ್ನಿತರೆಡೆ ಬೆಳೆದಿರುವ ಪಾರ್ಥೇನಿಯಂ ಮತ್ತು ಗಿಡಗೆಂಟೆಗಳನ್ನು ತೆರವುಗೊಳಿಸುವಲ್ಲಿ ಮುಂದಾಗಬೇಕೆಂದು ಕರೆನೀಡಿದರು.
ಕಲ್ಯಾಣ ನಗರ ವೆಲ್ಫೇರ್ ಸೊಸೈಟಿ ಮೂಲಕ ಪರಸ್ಪರ ಪರಿಚಯದಿಂದಾಗಿ ಸ್ವಚ್ಚತೆ ಬಗ್ಗೆ ಚರ್ಚಿಸಿ ಅಭಿಯಾನ ಆರಂಭಿಸಿರುವುದು ಇದು ಆರಂಭ ಶೂರತ್ವವಾಗದೆ ವರ್ಷವಿಡೀ ಸ್ವಚ್ಚತೆ ನಡೆಯಬೇಕೆಂದು ತಿಳಿಸಿದರು.
ಹೊರದೇಶಗಳಲ್ಲಿರುವ ಸ್ವಚ್ಚತೆ ಬಗ್ಗೆ ವಿವರಿಸಿ ಮಾಹಿತಿ ನೀಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನೀರು ಕುಡಿದ ಬಾಟಲಿಯನ್ನು ಅಲ್ಲೇ ಬಿಡುವುದು, ಚಾಕಲೇಟ್ ಕವರ್ ಎಲ್ಲೆಂದರಲ್ಲೇ ಬಿಸಾಡುವುದು, ಬೀಡಿ, ಸಿಗರೇಟ್ ಪ್ಯಾಕ್ಗಳನ್ನು ರಸ್ತೆಯಲ್ಲಿ ಹಾಕುವುದು ಹೀಗೆ ನಾನಾ ರೀತಿಯಲ್ಲಿ ಕಸವನ್ನು ಹಾಕುವ ಮೂಲಕ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ ಎಂದು ವಿಷಾಧಿಸಿದರು.
ಪರಿಸರ ಸ್ವಚ್ಚತೆ ಬಗ್ಗೆ ಇಂಜಿನಿಯರ್ ನಾಗೇಂದ್ರ ಮಾತನಾಡಿ, ಯಾವುದೇ ಉತ್ಪನ್ನ ಸಮಾಜಮುಖಿಯಾದಾಗ ಯಶಸ್ವಿಯಾಗುತ್ತದೆ. ಸರ್ವರೂ ತಮ್ಮ ಎಲ್ಲಾ ಜೀವನವನ್ನು ಸಮಾಜದ ಸೇವೆಗೆ ಮುಡಿಪಿಡಬೇಕೆಂದು ಬಯಸುತ್ತೇನೆ ಎಂದರು.
ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ, ನಾವೇಕೆ ಸ್ವಚ್ಚತೆ ಮಾಡಬೇಕೆಂಬ ಮನೋಭಾವ ಬಡಾವಣೆಗಳಲ್ಲಿ ವಾಸಿಸುವ ನಾಗರಿಕರಲ್ಲಿ ಮೊದಲು ದೂರವಾಗಬೇಕು. ಒಬ್ಬ ವ್ಯಕ್ತಿ ೭೦ ವರ್ಷ ಬದುಕಿದ್ದರೆ ೧೨೦ ಟನ್ ಕಸ ಉತ್ಪತ್ತಿ ಮಾಡುತ್ತಾನೆ ಎಂದು ಮಾಹಿತಿ ನೀಡಿದರು.
ಈ ರೀತಿ ಉತ್ಪತ್ತಿಯಾದ ಕಸಕ್ಕೆ ಸಂಸ್ಕಾರ ನೀಡಬೇಕಾದರೆ ಯಾರಾದರೂ ಜವಾಬ್ದಾರಿ ವಹಿಸಬೇಕು. ಕಸ ವಿಲೇವಾರಿಯಾಗದಿರುವುದರಿಂದಾಗಿ ಸಾರ್ವಜನಿಕರಲ್ಲಿ ಶೇ. ೭೦ ರಷ್ಟು ಅಸ್ತಮ ರೋಗಿಗಳು ಇದ್ದಾರೆ. ಪ್ರಕೃತಿಯನ್ನು ಹಾಳುಮಾಡಿ ಉಳಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಕಲ್ಯಾಣ ನಗರದಲ್ಲಿ ಸ್ವಚ್ಚತಾ ಟ್ರಸ್ಟ್ ನಿರ್ಮಿಸಿಕೊಂಡು ಸ್ವಚ್ಚತಾ ಅಭಿಯಾನ ಆರಂಭಿಸಿರುವುದು ಶ್ಲಾಘನೀಯ, ಸ್ವಚ್ಚತೆ ಎಲ್ಲಿ ಇರುತ್ತದೆಯೋ ಅಲ್ಲಿ ಆರೋಗ್ಯ ಇರುತ್ತದೆ. ಎಲ್ಲರೂ ಸ್ವಚ್ಚತೆಗೆ ಆದ್ಯ ಗಮನ ಕೊಡಬೇಕೆಂದು ಮನವಿ ಮಾಡಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಮೇಘಾಲಕ್ಕೆ ಹೋಗಿದ್ದ ಅನುಭವವನ್ನು ಹಂಚಿಕೊಂಡ ಅವರು, ಎಲ್ಲರ ಮನೆ ಮುಂದೆ ಕಸದ ಬುಟ್ಟಿ ಇಟ್ಟು ಕಸ ಚೆಲ್ಲಾಪಿಲ್ಲಿಯಾಗದಂತೆ ಕ್ರಮವಹಿಸಿದ್ದರು. ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಆಗಲೀ, ಬಾಟಲಿಗಳಾಗಲೀ ಇರುವುದಿಲ್ಲ. ಇದೇ ಮಾದರಿಯಲ್ಲಿ ಕಲ್ಯಾಣ ನಗರ ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನದಲ್ಲಿರಬೇಕೆಂದು ಬಯಸುತ್ತೇನೆಂದರು.
ಕಸದ ಗಾಡಿ ಬಾರದಿದ್ದಲ್ಲಿ ಸಂಗ್ರಹಿಸಿದ ಕಸವನ್ನು ಹೊರಗಡೆ ಖಾಲಿ ನಿವೇಶನಗಳಲ್ಲಿ ಹಾಕಬಾರದು, ಎಲ್ಲರೂ ಸ್ವಚ್ಚತೆಗೆ ಕೈಜೋಡಿಸಬೇಕೆಂದು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ನಗರ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಬಿ.ಎಸ್. ಹರೀಶ್ ಮಾತನಾಡಿ, ಪರಿಸರ ಸ್ವಚ್ಚವಾಗಿಡುವಲ್ಲಿ ಸರ್ವರೂ ಶ್ರಮಿಸುವ ಮೂಲಕ ರೋಗರುಜಿನಗಳಿಂದ ಮುಕ್ತಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ನಂತರ ಸೈನಿಕರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ಲಕ್ಕಿಡಿಪ್ ಮೂಲಕ ಸ್ಥಳೀಯ ನಿವಾಸಿಗಳಿಗೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ವೇಣುಗೋಪಾಲ್ ಎನ್.ಟಿ, ಖಜಾಂಚಿ ವಿ.ಟಿ. ನಿಂಗರಾಜ್, ಸಹಕಾರ್ಯದರ್ಶಿ ಸುಧೀರ್ ಕುಮಾರ್, ತೇಜಸ್, ಉಪಾಧ್ಯಕ್ಷ ಉಮಾ ನಾಗೇಶ್, ಪ್ರಸನ್ನ ಕುಮಾರ್, ಜಿ. ರಮೇಶ್, ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
A healthy society is built when everyone adopts discipline.