July 27, 2024
ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ

ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ

ಚಿಕ್ಕಮಗಳೂರು: ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತರ ಗೌರವ ಧನವನ್ನು ಶೀಘ್ರದಲ್ಲಿಯೇ ಹೆಚ್ಚಿಸುವಂತೆ ಮುಖ್ಯ ಮಂತ್ರಿ ಬಳಿ ಮನವಿ ಮಾಡುತ್ತೇನೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ಭಾನುವಾರ ನಗರದ ಬಸವನಹಳ್ಳಿಯ ರಂಗಣ್ಣ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಅಕ್ಷರದಾಸೋಹ (ಬಿಸಿಯೂಟ) ಕಾರ್ಯಕರ್ತರ ಫೆಡರೇಶನ್ ವತಿಯಿಂದ ಏರ್ಪಡಿಸಿದ್ದ ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿಯುತ್ತಿರುವ ಅಕ್ಷರದಾಸೋಹ (ಬಿಸಿಯೂಟ) ಕಾರ್ಯಕರ್ತರ ಗೌರವಧನ ಹೆಚ್ಚಿಸುವಂತೆ ಸದನದಲ್ಲಿ ಗಟ್ಟಿದನಿಯಲ್ಲಿ ಕೇಳಲಿದ್ದೇನೆ ನಮ್ಮ ಸರಕಾರ ಗೌರವಧನ ಹೆಚ್ಚಳ ಮಾಡುವುದಾಗಿ ಹೇಳಿದ್ದು ನಿಜ. ಆದರೆ, ಜನಸಾಮಾನ್ಯರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳಿಂದ ಸರಕಾರಕ್ಕೆ ೫೯ ಸಾವಿರ ಕೋಟಿ ರೂ.ವ್ಯಯವಾಗುತ್ತಿದೆ. ಈ ಆದಾಯವನ್ನು ಸರಿದೂಗಿಸಿದ ನಂತರ ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವೇತನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಈ ಬಗ್ಗೆ ಅವರ ಬಳಿ ಖಾಸಗಿಯಾಗಿಯೂ ಮಾತಾಡುತ್ತೇನೆ. ಸದನದಲ್ಲಿ ಅರ್ಜಿ ಸಲ್ಲಿಸಿ ಗಟ್ಟಿಯಾಗಿ ಮಾತನಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಫೆಡರೇಶ್‌ನ್ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಪ್ರಾಸ್ತಾವಿಸಿ ಕಳೆದ ೨೩ ವರ್ಷದಿಂದ ಬಿಸಿಯೂಟ ಕಾರ್ಯಕರ್ತರಾಗಿ ದುಡಿಯುತ್ತಿದ್ದು ಆರಂಭದಲ್ಲಿ ದಿನಕ್ಕೆ ೧೦ ರೂ. ವೇತನ ಇತ್ತು ಹೋರಾಟದ ಫಲವಾಗಿ ಈಗ ೩೬೦೦ ರೂ.ಹೆಚ್ಚಾಗಿದೆ. ಗೌರವಧನವನ್ನು ಕೇಂದ್ರ ಶೇ.೬೦, ರಾಜ್ಯ ಶೇ.೪೦ ರಷ್ಟು ಭರಿಸಬೇಕಿದೆ. ಆದರೆ, ಆರಂಭದಲ್ಲಿ ೧ ಸಾವಿರ ರೂ.ಇದ್ದಾಗ ಕೇಂದ್ರ ಕೊಡುತ್ತಿದ್ದ ೬೦೦ ರೂ.ಗನ್ನೇ ಈಗಲೂ ನೀಡುತ್ತಿದ್ದು ಉಳಿದ ೩ ಸಾವಿರ ರೂ.ಗಳನ್ನು ರಾಜ್ಯ ಭರಿಸುತ್ತಿದೆ. ಓರ್ವ ಮಹಿಳೆಯಾಗಿ ಸಂಸದೆ ಈ ಬಗ್ಗೆ ದನಿ ಎತ್ತಿಲ್ಲ. ಇನ್ನಾದರೂ ಕೇಂದ್ರದ ಬಗ್ಗೆ ಒತ್ತಡ ಹೇರಲಿ ಎಂದರು.

ಅಡುಗೆ ಮಾಡುವಾಗ ಅವಘಡ ನಡೆದರೆ ಇವರಿಗೆ ವೈದ್ಯಕೀಯ ವೆಚ್ಚ ಇಲ್ಲ.ಇತರೆ ನೌಕರರಂತೆ ಇವರಿಗೆ ನಿವೃತ್ತಿ ವೇತನ ಇಲ್ಲ. ಹೀಗಾಗಿ ನಿವೃತ್ತಿಯಾದಾಗ ಕನಿಷ್ಠ ೨-೩ ಲಕ್ಷ ರೂ. ಇಡುಗಂಟು ನೀಡಬೇಕು. ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗೆ ನೀಡುವಂತೆ ಕನಿಷ್ಠ ೧೫ ಸಾವಿರ ರೂ.ವೇತನ ನೀಡಬೇಕು, ವಾರ್ಷಿಕ ೧೦ ಕಡ್ಡಾಯ ಮಾಸಿಕ ೩ ರಜೆ ನೀಡಬೇಕು. ಶಾಲೆಯಲ್ಲಿ ನಿಗತ ಮಕ್ಕಳಿಲ್ಲದಿದ್ದರೆ ಅಡುಗೆಯವರನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು.ಈ ಎಲ್ಲ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಕ್ಷರದಾಸೋಹ ಜಿಲ್ಲಾಧಿಕಾರಿ ಸುಂದರೇಶ್, ಬಿಸಿಯೂಟ ಕಾರ್ಯಕರ್ತರ ಸೇವೆಯನ್ನು ಸಮಾಜ ಮತ್ತು ಸರಕಾರ ಪ್ರಾಮಾಣಿಕವಾಗಿ ಪರಿಗಣಿಸಲಿ ಎಂದು ಸರಕಾರಕ್ಕೆ ನಿವೇದನೆ ಮಾಡುತ್ತೇವೆ ಎಂದರು.

ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ರಾಧಸುಂದರೇಶ್, ಒಗ್ಗಟ್ಟು ಗಟ್ಟಿಯಾಗಿದ್ದರೆ ಬೇಡಿಕೆ ಈಡೇರುತ್ತವೆ. ದುಡಿಯುವ ವರ್ಗಕ್ಕೆ ಒಗ್ಗಟ್ಟೇ ಬಲ ಎಂದರು. ಮುಖಂಡ ಎಚ್.ಎಂ.ರೇಣುಕಾರಾಧ್ಯ, ಬಿಸಿಯೂಟ ಕಾರ್ಯಕರ್ತರನ್ನು ಭ್ರಮಾಲೋಕದಲ್ಲಿಟ್ಟು ಪ್ರಜ್ಞಾಪೂರ್ವಕವಾಗಿ ಮೋಸ ಮಾಡುವ ವ್ಯವಸ್ಥೆ ಇದೆ. ಇದರ ವಿರುದ್ಧ ಹೋರಾಡಬೇಕಿದೆ ಎಂದರು. ಫೆಡರೇಶ್‌ನ್ ಅಧ್ಯಕ್ಷ ರಘು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ರೇಣುಕರಾದ್ಯ, ರಮೇಶ್, ವಸಂತ್‌ಕುಮಾರ್, ಶಿವಕುಮಾರ್‌ಗಟ್ಟಿ, ಅಕಾರಿ ಉದಯ್‌ಕುಮಾರ್, ವಿವಿಧ ತಾಲೂಕು ಫೆಡರೇಶನ್ ಅಧ್ಯಕ್ಷರು, ಪದಾಕಾರಿಗಳು ಉಪಸ್ಥಿತರಿದ್ದರು.

District Convention of Bisiyuta Workers

About Author

Leave a Reply

Your email address will not be published. Required fields are marked *